ಪ್ರೀತಿ (Love), ಮದುವೆ (Marriage), ದಾಂಪತ್ಯ ಮತ್ತು ವೈವಾಹಿಕ ಜೀವನ ಈ ಪದಗಳಿಗೆ ಇತ್ತೀಚಿನ ದಿನಗಳಲ್ಲಿ ಯಾರದ್ದೋ ಭಯಾನಕ ದೃಷ್ಟಿ ಆದಂಗಿದೆ. ಏಕೆಂದರೆ ಎಷ್ಟೋ ಮದುವೆಗಳು ಮದುವೆ ಮಂಟಪದಲ್ಲಿಯೇ (Wedding Hall) ತಿನ್ನೋದಕ್ಕೆ ನಮಗೆ ಹಪ್ಪಳ ಸಿಕ್ಕಿಲ್ಲ, ವಧುವಿನ (Bride) ಕಡೆಯವರು ಕೈ ತುಂಬಾ ವರದಕ್ಷಿಣೆ ಕೊಟ್ಟಿಲ್ಲ, ವಧು ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆ, ವರ ಕುಡಿದು ಹಸೆಮಣೆಗೆ ಬಂದಿದ್ದಾನೆ ಅಂತೆಲ್ಲಾ ಹೇಳಿಕೊಂಡು ಮದುವೆಗೆ ಬಂದ ಅತಿಥಿಗಳ ಮುಂದೆಯೇ ಹಿಗ್ಗಾಮುಗ್ಗಾ ಜಗಳವಾಡಿಕೊಂಡು ಮದುವೆಯನ್ನು ರದ್ದು ಮಾಡಿಕೊಂಡಿರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನೋಡಿದ್ದೇವೆ.
ಚಿಕ್ಕ-ಪುಟ್ಟ ಕಾರಣಗಳನ್ನು ಹೇಳಿಕೊಂಡು ಮದುವೆಯನ್ನೇ ರದ್ದು ಮಾಡಿಕೊಳ್ಳುತ್ತಿರುವ ಮತ್ತು ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿಕೊಂಡು ದಂಪತಿಗಳು ಡಿವೋರ್ಸ್ ಪಡೆಯುತ್ತಿರುವುದನ್ನು ನಾವು ದಿನ ಬೆಳಗಾದರೆ ನೋಡುತ್ತಲೇ ಇರುತ್ತೇವೆ.
ಒಟ್ಟಿನಲ್ಲಿ ಮೊದಲಿದ್ದ ಪ್ರೀತಿ, ಪ್ರೇಮ, ವೈವಾಹಿಕ ಜೀವನದಲ್ಲಿದ್ದ ಆ ನಂಬಿಕೆ, ವಿಶ್ವಾಸ ಮತ್ತು ದಂಪತಿಗಳಲ್ಲಿ ಸಂಸಾರವನ್ನು ಸಾಗಿಸಿಕೊಂಡು ಹೋಗುವಲ್ಲಿ ತಾಳ್ಮೆ ಸಹ ಕಡಿಮೆಯಾಗಿರುವುದು ಹೀಗೆ ಮದುವೆಗಳು ಮುರಿದು ಬೀಳುವುದಕ್ಕೆ ಕಾರಣವಾಗಿವೆ.
ದಾಂಪತ್ಯದಲ್ಲಿ ಮತ್ತು ಸಂಸಾರದಲ್ಲಿ ಕಷ್ಟ ಸುಖಗಳು ಬಿಸಿಲು ಮತ್ತು ನೆರಳಿನಂತೆ ಸದಾ ನಮ್ಮ ಜೊತೆಯೇ ಇರುತ್ತವೆ. ಕಷ್ಟ ಬಂತು ಅಂತ ಸಂಗಾತಿಯ ಜೊತೆಗೆ ಜಗಳವಾಡುವುದು ಮತ್ತು ಸುಖ ಬಂತು ಅಂತ ಹಿಗ್ಗುವುದನ್ನು ಬಿಟ್ಟು, ಎರಡನ್ನೂ ಸಮಾನ ಮನಸ್ಸಿನಿಂದ ತೆಗೆದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.
ಇದನ್ನೂ ಓದಿ: 6 ಹೆಂಡತಿಯರ ಜೊತೆ ಒಂದೇ ಹಾಸಿಗೆಯಲ್ಲಿ ಮಲಗಲು 80 ಲಕ್ಷ ಖರ್ಚು ಮಾಡಿದ ಗಂಡ! ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
ಕಷ್ಟದ ಸಮಯದಲ್ಲಿ ತನ್ನ ವಧುವಿನ ಜೊತೆಗೆ ನಿಂತ ವರ
ಜೀವನ ಸಂಗಾತಿ ಹೇಗಿರಬೇಕು ಅಂತ ಯಾರಾದರೂ ಕೇಳಿದರೆ, ಎಂತಹ ಕಠಿಣ ಸಮಯದಲ್ಲೂ ನಮ್ಮ ಜೊತೆಗೆ ಇರುವಂತಹ ಸಂಗಾತಿ ಬೇಕು ಅಂತ ಅನೇಕರು ಹೇಳುತ್ತಾರೆ. ಇಲ್ಲಿ ಒಬ್ಬ ವರ ಈ ಮಾತನ್ನು ನಿಜ ಮಾಡಿ ತೋರಿಸಿದ್ದಾನೆ ನೋಡಿ. ಶತಾಕ್ಷಿ ಮತ್ತು ಪ್ರತೀಕ್ ಅವರ ಸಂಬಂಧವು ಈ ಮೇಲಿನ ಮಾತಿಗೆ ನಿಜವಾದ ಅರ್ಥವನ್ನು ಕಲ್ಪಿಸಿದೆ. ಇವರಿಬ್ಬರು ಒಂದು ದಿನ ಶುಭ ಮುಹೂರ್ತದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಬೇಕಾಗಿತ್ತು. ಆದರೆ ದುರದೃಷ್ಟವಶಾತ್ ವಧುವಿಗೆ ರಸ್ತೆ ಅಪಘಾತವಾಗಿ ಆಸ್ಪತ್ರೆ ಸೇರಿಕೊಳ್ಳುತ್ತಾಳೆ.
ಆದರೆ ಈ ಅಪಘಾತ ಅವರಿಬ್ಬರ ಸಂಬಂಧದ ಮೇಲೆ ಯಾವುದೇ ರೀತಿಯ ಪರಿಣಾಮ ಸಹ ಬೀರುವುದಿಲ್ಲ. ಬದಲಾಗಿ, ಇದು ಅವರಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಆಸ್ಪತ್ರೆಯಲ್ಲಿ ಇರುವ ಸಮಯದಲ್ಲಿ ಆ ವರ ತನ್ನ ವಧುವಿನ ಜೊತೆಯಲ್ಲಿಯೇ ಇದ್ದು, ಆಕೆಯನ್ನು ಚೆನ್ನಾಗಿ ನೋಡಿಕೊಂಡು ಮತ್ತು ಆಕೆಗೆ ಅಗತ್ಯವಿದ್ದಾಗ ಹಿಂದೆ ಮುಂದೆ ನೋಡದೆ ತನ್ನ ರಕ್ತವನ್ನು ಸಹ ನೀಡಿದನು. ಇಷ್ಟೇ ಅಲ್ಲದೆ ಆಕೆಯನ್ನು ಭೇಟಿ ಮಾಡಲು ಪ್ರತಿದಿನ ಆಸ್ಪತ್ರೆಗೆ ಹೋಗುತ್ತಿದ್ದರಂತೆ.
ಅಪಘಾತದ 2 ತಿಂಗಳ ನಂತರ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ
ಫಿಸಿಯೋಥೆರಪಿಸ್ಟ್ ಆಗಿರುವ ಶತಾಕ್ಷಿ ತಮ್ಮ ಸುಂದರವಾದ ಪ್ರೇಮಕಥೆಯನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಆಕೆ ಪ್ರತೀಕ್ ಮತ್ತು ಅವಳ ಫೋಟೋಗಳನ್ನು ಸೇರಿಸಿ ಪುಟ್ಟ ವಿಡಿಯೋ ಮಾಡಿದ್ದಾಳೆ. ಆಕೆಯ ಅಪಘಾತದ ಎರಡು ತಿಂಗಳ ನಂತರ, ಪ್ಲಾಸ್ಟರ್ ಅನ್ನು ತೆಗೆದು ಹಾಕಲಾಯಿತು ಮತ್ತು ಇಬ್ಬರೂ ಆಗ ಖುಷಿ ಖುಷಿಯಿಂದ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡರು.
View this post on Instagram
"ಹಿಂದಿನ ರೀಲ್ ನಲ್ಲಿ ನೀವು ನಮಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದದಿಂದ ನಾವು ಇಂದು ಸಂತೋಷವಾಗಿದ್ದೇವೆ. ಇಲ್ಲಿದೆ ನಮ್ಮ ಪ್ರೇಮ ಕಥೆ.. ಕುತೂಹಲವನ್ನು ಕಡಿಮೆ ಮಾಡಲು ಇದು ಸಾಕು ಅಂತ ನಾನು ಭಾವಿಸುತ್ತೇನೆ" ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಈ ದಂಪತಿಗಳು ಅನೇಕರಿಗೆ ಸ್ಫೂರ್ತಿ ಎಂದು ಕರೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ