ಲಕ್ನೋ: ಮೂರು ಗಂಟು ಬೀಳದ ಹೊರತು ಈಗಿನ ಕಾಲದ ಯಾವ ಮದುವೆಗಳು (Marriages) ಗ್ಯಾರಂಟಿ ಇಲ್ಲ ಎನ್ನುವಷ್ಟು ವಿವಾಹದ ವ್ಯವಸ್ಥೆ ಬದಲಾಗಿದೆ. ಒಂದು ಕಡೆ ಮದುವೆಗೆ ಹೆಣ್ಣು (Bride) ಸಿಕ್ತಿಲ್ಲ ಎನ್ನುವ ಗೋಳು, ಇನ್ನೊಂದೆಡೆ ಸಿಕ್ಕರೂ ಅರ್ಧಕ್ಕೆ ನಿಲ್ಲುವ ಮದುವೆಗಳು. ಈಗ ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಫಾರುಕ್ಬಾದ್ (Farukhabad, Uttar Pradesh) ಜಿಲ್ಲೆಯಲ್ಲಿ ನಡೆದಿದೆ. ಮದುವೆಯ ಎಲ್ಲಾ ಶಾಸ್ತ್ರಗಳು ಅಚ್ಚಕಟ್ಟಾಗಿ ನಡೆದಿದ್ದವು. ಮದುವೆ ಮನೆಯಲ್ಲಿ ಸಂತೋಷ ತುಂಬಿ ತುಳುಕುತಿತ್ತು. ಇನ್ನೇನೂ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ಹೊರನಡೆದಿದ್ದಾಳೆ.
ಈ ಘಟನೆಯಿಂದ ಮದುವೆ ಮನೆಯಲ್ಲಿ ಗೊಂದಲ, ಗಲಾಟೆಗಳು ಪ್ರಾರಂಭವಾಗಿದೆ. ಕೊನೆಗೆ ಪೊಲೀಸರ ಮಧ್ಯ ಪ್ರವೇಶದ ನಂತರ ಪರಿಸ್ಥಿತಿ ತಿಳಿಯಾಗಿದೆ.
ಮದುವೆ ಮುರಿದು ಬಿದ್ದಿದ್ದು ಏಕೆ?
ವಧುವಿಗೆ ವರನ ನಡವಳಿಕೆ ಅನುಮಾನ ಮೂಡಿಸಿದೆ. ಆತನ ವರ್ತನೆ ಸಹಜವಾಗಿಲ್ಲ. ಆತ ಎಲ್ಲರಂತೆ ಇಲ್ಲ ಎಂದು ವಧು ಆರೋಪಿಸಿದ್ದಾಳೆ. ಮದುವೆಯ ಎಲ್ಲಾ ಸಂಪ್ರದಾಯಗಳಲ್ಲೂ ವರನ ವರ್ತನೆ ಆಕೆಯ ಅನುಮಾನವನ್ನು ಬಲಗೊಳಿಸಿದೆ.
ಯಾಕೋ ವರ ಮಾನಸಿಕವಾಗಿ ಆರೋಗ್ಯವಾಗಿಲ್ಲ. ಮಾನಸಿಕ ಅಸ್ವಸ್ಥನಂತಿದ್ದಾನೆ ಎನ್ನುವ ಅನುಮಾನ ಪ್ರಬಲವಾಗಿದೆ. ಕೂಡಲೇ ಎಚ್ಚೆತ್ತುಕೊಂಡ ವಧು ಧೈರ್ಯವಾಗಿ ತನಗೆ ಮದುವೆ ಬೇಡ ಎಂದಿದ್ದಾಳೆ.
ನೋಟು ಎಣಿಸಲು ಸೋತ ಮದುಮಗ
ವಧುವಿನ ಆರೋಪಕ್ಕೆ ಗಂಡಿನ ಕಡೆಯವರು ಕೆಂಡಮಂಡಲವಾಗಿದ್ದಾರೆ. ವರ ಮಾನಸಿಕ ಅಸ್ವಸ್ಥ ಎನ್ನುವ ವಿಷಯವನ್ನು ಗಂಡಿನ ಕಡೆಯವರು ಒಪ್ಪಿಕೊಂಡಿಲ್ಲ. ಕಡೆಗೆ ವರನಿಗೆ ಒಂದು ಪರೀಕ್ಷೆ ಇಡಲಾಯಿತು.
10 ರೂಪಾಯಿಗಳ 30 ನೋಟುಗಳನ್ನು ತಂದು ಅದನ್ನು ಎಣಿಸುವಂತೆ ಹೇಳಲಾಯಿತು. ಆದರೆ ವರನಿಗೆ ಎಣಿಸುವುದಕ್ಕೆ ಸಾಧ್ಯವಾಗಲಿಲ್ಲ. ಇದರಿಂದ ವಧುವಿನ ಕಡೆಯವರು ವರನ ಮನೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗ ವರನ ಮನೆಯವರು ವರಸೆ ಬದಲಾಯಿಸಿದ್ದಾರೆ. ಹುಡುಗ ಮಾನಸಿಕ ಅಸ್ವಸ್ಥ ಎನ್ನುವುದು ತಮಗೆ ತಿಳಿದಿರಲಿಲ್ಲ ಎಂದಿದ್ದಾರೆ. ಆದರೆ ಹೆಣ್ಣಿನ ಕಡೆಯವರು ಇದನ್ನು ಒಪ್ಪದೇ ಹುಡುಗನ ಕಡೆಯವರು ವಿಷಯ ಮುಚ್ಚಿಟ್ಟು ಮದುವೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪ ಪ್ರತ್ಯಾರೋಪದ ನಡುವೆ ಪರಿಸ್ಥಿತಿ ಕೈ ಮೀರಿದೆ. ಈ ಸಂದರ್ಭದಲ್ಲಿ ಪೊಲೀಸರು ಸಂಧಾನಕ್ಕೆ ಯತ್ನಿಸಿದ್ದಾರೆ.
ಇನ್ನೂ ವರನ ವರ್ತನೆ ಬಗ್ಗೆ ಪುರೋಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಪರಿಶೀಲಿಸಿದ ವಧು ಮದುವೆ ಮುರಿದುಕೊಂಡಿದ್ದಾಳೆ. ಈ ಬಗ್ಗೆ ಬೇಸರವಿಲ್ಲವೆಂದು ವಧುವಿನ ಸಹೋದರ ತಿಳಿಸಿದ್ದಾನೆ.
ಇದೊಂದೆ ಪ್ರಕರಣವಲ್ಲ
ಉತ್ತರ ಪ್ರದೇಶದಲ್ಲಿ ಕಳೆದ ವಾರವಷ್ಟೇ ವಧು ಪಿಯುಸಿಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಾಳೆ ಎನ್ನುವ ಕಾರಣ ನೀಡಿ ಮದುವೆ ಮುರಿದುಕೊಂಡಿದ್ದನು. ಆದರೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಇದಕ್ಕೆ ವರದಕ್ಷಿಣೆಯ ಆರೋಪವೂ ಸೇರಿಕೊಂಡಿತ್ತು. ಆದರೆ ಮದುವೆ ಮಾತ್ರ ಮುರಿದು ಬಿತ್ತು.
ಅಸ್ಸಾಂನಲ್ಲೂ ಮದುವೆ ಮುರಿದು ಬಿತ್ತು!
ಇನ್ನೂ 3 ವಾರಗಳ ಹಿಂದೆ ಅಸ್ಸಾಂನಲ್ಲಿ ವಧುವೊಬ್ಬರು ವರ ಕುಡಿದು ಬಂದ ಎನ್ನುವ ಕಾರಣಕ್ಕೆ ಮದುವೆಯನ್ನು ರದ್ದು ಮಾಡಿದ್ದರು. ಮದುವೆ ಸಂಬಂಧಿತ ಆಚರಣೆಗಳು ನಡೆಯುತ್ತಿದ್ದರು ವರ ಕುಡಿದು ನೆಲದ ಮೇಲೆ ಮಲಗಿದ್ದ, ಮಂತ್ರಗಳನ್ನು ಹೇಳುವ ಪರಿಸ್ಥಿತಿಯಲ್ಲೂ ಇರಲಿಲ್ಲ.
ಇದರಿಂದ ಮದುವೆ ಮುರಿದುಕೊಂಡ ಯುವತಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಳು. ಮದುವೆಯ ಎಲ್ಲಾ ಖರ್ಚು ವೆಚ್ಚದ ಮೊತ್ತವನ್ನು ಹಿಂದಿರುಗಿಸಬೇಕೆಂದು ಬೇಡಿಕೆ ಇಟ್ಟಿದ್ದಳು.
ಹಳೆ ಫರ್ನೀಚರ್ಸ್ ಕೊಟ್ಟಿದ್ದೀರಿ, ಮದುವೆ ಬೇಡ
ಕಳೆದ ತಿಂಗಳು ಹೈದರಾಬಾದ್ನಲ್ಲಿ ಹಳೆಯ ಫರ್ನೀಚರ್ ನೀಡಿದ್ದಾರೆಂದು ವರ ಮದುವೆ ಕ್ಯಾನ್ಸಲ್ ಮಾಡಿಕೊಂಡ ಉದಾಹರಣೆಯೂ ಇದೆ.
ಒಟ್ಟಿನಲ್ಲಿ ಮದುವೆ ನಂತರ ವಿಚ್ಛೇದನದ ಮೊರೆ ಹೋಗಿ ಎರಡು ಕುಟುಂಬವನ್ನು ನರಳಿಸುವುದಕ್ಕಿಂತ ಮೊದಲೇ ಸರಿಯಾದ ನಿರ್ಧಾರ ಮಾಡುವುದು ಒಳಿತು ಎನ್ನುವ ಮನಸ್ಥಿತಿಗೆ ಇಂದಿನ ಯುವಜನತೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ