ಮಂಡ್ಯದ (Mandya) ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡರ ಬಗ್ಗೆ ಕೇಳಿರ್ತೀರಾ. ಕುಂದೂರು ಬೆಟ್ಟದಲ್ಲಿ ಅಂತರ್ಜಲ ವೃದ್ಧಿಗಾಗಿ 15ಕ್ಕೂ ಹೆಚ್ಚು ಕೆರೆ ನಿರ್ಮಿಸಿ ಆಧುನಿಕ ಭಗೀರಥ ಎಂದೇ ಇವರು ಖ್ಯಾತಿ ಪಡೆದಿದ್ದರು. ಇವರಂತೇ ಇಲ್ಲೊಬ್ಬ ವ್ಯಕ್ತಿ 40 ವರ್ಷಗಳ ಕಠಿಣ ಪರಿಶ್ರಮದಿಂದ 100 ಅಡಿ ಕೊರೆದು ತನ್ನದೇ ಸ್ವಂತ ನೀರಿನ ಕೊಳವನ್ನು ನಿರ್ಮಿಸಿದ್ದಾರೆ.
ಏಕಾಂಗಿಯಾಗಿ ಭೂಮಿ ಕೊರೆದು ಕೆರೆ ನಿರ್ಮಿಸಿದ ಜಾರ್ಖಂಡ್ ವ್ಯಕ್ತಿ
ತಮ್ಮ ಹೊಲಗಳಿಗೆ ನೀರು ಸಿಗದೇ ಹೋದ ಕಾರಣ ತಾವೇ ಒಂದು ಕೊಳವನ್ನು ನಿರ್ಮಿಸಿ ತನ್ನ ಐದು ಎಕರೆ ಭೂಮಿಯಲ್ಲಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಕುಮಿರ್ತಾ ಗ್ರಾಮದ ರೈತ ಚುಂಬೃ ತಮ್ಸೋಯ್. ಗ್ರಾಮದಲ್ಲಿ 100/100 ವಿಸ್ತೀರ್ಣದ ಕೆರೆಯನ್ನು ಒಬ್ಬರೇ ತೋಡಿ ನೀರು ತೆಗೆದಿದ್ದಾರೆ. ತನ್ನದೇ ಕೃಷಿ ಭೂಮಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಈ ಸಾಧನೆ ಮಾಡಿದ್ದಾರೆ ಚುಂಬ್ರು ತಮ್ಸೋಯ್.
75ರ ಹರೆಯದ ರೈತ ಚುಂಬ್ರು ತಮ್ಸೋಯ್ ತನ್ನ 40 ವರ್ಷ ಕೊಳ ನಿರ್ಮಾಣಕ್ಕೆ ಮೀಸಲಿರಿಸಿದ್ದು, ಕಡೆಗೂ ತನ್ನ ಪರಿಶ್ರಮದ ಫಲವಾಗಿ ಅದೇ ಕೊಳದಿಂದ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ನೀರಿನ ಸಮರ್ಪಕತೆಯಿದಾಗಿ ಹೊಲದಲ್ಲಿ ಮಾವು, ಅರ್ಜುನ್, ಬೇವು, ಸಾಲ್ ಸೇರಿದಂತೆ ಸುಮಾರು 60 ಮರಗಳನ್ನು ಸಹ ನೆಟ್ಟಿದ್ದಾರೆ.
ಇದನ್ನೂ ಓದಿ: ದೇಶದಲ್ಲೇ ಬೆಂಗಳೂರಲ್ಲಿ ಮನೆ ಬಾಡಿಗೆ ದುಬಾರಿ! ಮುಂಬೈ, ದೆಹಲಿಗಿಂತಲೂ ರಾಜ್ಯ ರಾಜಧಾನಿಯಲ್ಲಿ ಕಾಸ್ಟ್ಲಿ ರೆಂಟ್!
ಕೆರೆ ನಿರ್ಮಿಸುವ ಕಾರ್ಯ ಆರಂಭವಾಗಿದ್ದು ಹೇಗೆ?
ಜೀವನೋಪಯಕ್ಕಾಗಿ ಲಕ್ನೋಗೆ ತೆರಳಿದ ಇವರು ಅಲ್ಲೂ ಕೂಡ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಸಂಬಳ ಸಿಗದೇ, ಊಟಕ್ಕೂ ಪರದಾಡುವಂತಾಯಿತು. ನಾನು ಇಲ್ಲಿ ಇಷ್ಟು ಕಷ್ಟಪಡುವ ಬದಲು ನನ್ನ ಜಮೀನಿನಲ್ಲೇ ಕಷ್ಟ ಪಟ್ಟರೆ ಬೆಳೆ ಬೆಳೆದು ಆದಾಯಗಳಿಸಬಹುದು ಎಂದು ನಿರ್ಧರಿಸಿದರು. ಅಲ್ಲಿಂದ ಲಕ್ನೋ ಬಿಟ್ಟ ಬಂದು ತನ್ನದೇ ಭೂಮಿಯಲ್ಲಿ ಏನನ್ನಾದರು ಮಾಡಬೇಕು ಹಂತ ಮತ್ತೆ ತಮ್ಮ ಹಳ್ಳಿಗೆ ವಾಪಸ್ ಆದರು.
ತಮ್ಸೋಯ್ ಇವರಿಗೆ ಜಮೀನೇನೋ ಇತ್ತು ಆದರೆ ಸಮರ್ಪಕವಾದ ನೀರಿನ ಸೌಲಭ್ಯ ಇರಲಿಲ್ಲ. ಪಕ್ಕದ ಜಮೀನಿನವರಿಗೆ ನೀರು ಕೇಳಿದರು. ಆದರೆ ಆಗ ನೆರೆಹೊರೆಯವರು ನೀರು ಕೊಡಲು ನಿರಾಕರಿಸಿದರು. ಇದನ್ನ ಸವಾಲಾಗಿ ತೆಗೆದುಕೊಂಡ ಚುಂಬ್ರು ತಮ್ಸೋಯ್ ಹೇಗಾದರೂ ನೀರಿನ ಮೂಲ ಕಂಡುಕೊಳ್ಳಲೇ ಬೇಕು ಎಂದು ನಿರ್ಧರಿಸಿ ಜಮೀನಲ್ಲಿ ಸ್ವಂತ ಕೊಳ ಕೊರೆಯಲು ನಿರ್ಧರಿಸಿದರು.
ದೃಢವಾಗಿ ನಿರ್ಧರಿಸಿದ ಚುಂಬ್ರು ತಮ್ಸೋಯ್ ಕೆರೆ ಅಗೆಯಲು ನಿರ್ಧರಿಸಿಯೇ ಬಿಟ್ಟರು. 1975ರಿಂದ ಆರಂಭವಾದ ಕೊಳ ಕೊರೆತ ಕಾರ್ಯದಲ್ಲಿ ಇಂದು ಚುಂಬೃ ತಮ್ಸೋಯ್ ಯಶಸ್ವಿಯಾಗಿದ್ದು, ತಮ್ಮ ಜಮೀನಿಗೆ ಅವರೇ ಕೈಯಾರೆ ನೀರಿನ ಸೆಲೆ ಕಂಡುಕೊಂಡು ಬೆಳೆ ಬೆಳೆಯುತ್ತಿದ್ದಾರೆ.
ಕೆರೆ ನಿರ್ಮಿಸಲಾಗಲಿ, ಮಣ್ಣು ಹೊತ್ತಯ್ಯಲಾಗಲಿ ಯಾರೊಬ್ಬರೂ ಅವರಿಗೆ ಸಹಾಯ ಮಾಡಿಲ್ಲ. ಪ್ರತಿಯೊಂದು ಕೆಲಸವನ್ನು ತಾವೇ ಮಾಡಿ ಈಗ ಎಲ್ಲರಿಗೂ ನೀರನ್ನು ಪೂರೈಸಿದ್ದಾರೆ ಎಂದು ಅವರ ಸೊಸೆ ಚರಿಮಾ ಮಾವನ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕೆರೆ ನೀರಿನ ಸಹಾಯದಿಂದ 5 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ ತಮ್ಸೋಯ್
ಮೊದ ಮೊದಲು ಇವರ ಈ ಸಾಹಸ ನೋಡಿ ಗ್ರಾಮಸ್ಥರು ಹುಚ್ಚು ಎನ್ನುತ್ತಿದ್ದರು. ಒಂದು ಕಾಲದಲ್ಲಿ ಚುಂಬೃ ತಮ್ಸೋಯ್ ನೀರು ಕೊಡಲು ನಿರಾಕರಿಸಿದ ಹಳ್ಳಿಯ ಜನತೆಯೇ ಈಗ ಇವರೇ ನಿರ್ಮಿಸಿದ ಕೆರೆ ನೀರನ್ನು ಬಳಸುತ್ತಿದ್ದಾರೆ. ಬೇಸಿಗೆಯಲ್ಲೂ ನೀರಿರುವ ಈ ಕೆರೆಯ ಪ್ರಯೋಜನವನ್ನು ಹಲವರು ಪಡೆಯುತ್ತಿದ್ದಾರೆ. ಇತರರಿಗೆ ನೆರವಾಗುವುದರ ಜೊತೆ 75 ವರ್ಷ ವಯಸ್ಸಿನ ಚುಂಬ್ರು ತಮ್ಸೋಯ್ ತಮ್ಮ 5 ಎಕರೆ ಭೂಮಿಯಲ್ಲಿ ಬೇರೆ ಬೇರೆ ಬೆಳೆ ಬೆಳೆದು ಕೃಷಿ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ