ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಅದರಲ್ಲೂ ಒಟಿಪಿಗಳನ್ನು(OTP) , ವೆಬ್ಲಿಂಕ್ (Web Link) ಇಲ್ಲವೇ ಎಸ್ಎಂಎಸ್ಗಳನ್ನು (SMS) ಕಳುಹಿಸುವ ಮೂಲಕ, ಬಳಕೆದಾರರ ಹಣ ಲಪಟಾಯಿಸುವ ಇಲ್ಲವೇ ಗ್ರಾಹಕರ ಇನ್ನಿತರ ದಾಖಲೆಗಳನ್ನು ಕದಿಯುವ ಪ್ರಯತ್ನ ಇನ್ನಿಲ್ಲದಂತೆ ನಡೆಯುತ್ತಿದೆ. ಇದೀಗ ಏರ್ಟೆಲ್ ಸಿಇಒ ಗೋಪಾಲ್ ವಿಟ್ಟಲ್ (Airtel CEO Gopal Vittal) ಕಂಪನಿಯ 350 ಮಿಲಿಯನ್ಗಿಂತಲೂ ಹೆಚ್ಚಿನ ಸಬ್ಸ್ಕ್ರೈಬರ್ಗಳಿಗೆ ಸೈಬರ್ ವಂಚನೆಯ ಕುರಿತು ಇಮೇಲ್ (Email) ಕಳುಹಿಸಿದ್ದು ದೇಶದಲ್ಲಿ ಹೆಚ್ಚುತ್ತಿರುವ ಈ ಮೋಸದ ಜಾಲದ ಕುರಿತು ಎಚ್ಚರಿಕೆಯಿಂದ ಇರುವಂತೆ ವಿನಂತಿಸಿಕೊಂಡಿದ್ದಾರೆ. ಗೋಪಾಲ್ ತಾವು ಕಳುಹಿಸಿರುವ ಇಮೇಲ್ನಲ್ಲಿ ಚಂದಾದಾರಿಗೆ ಸೈಬರ್ ಮೋಸದ ಕುರಿತು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದು ಈ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದು ಸೈಬರ್ ವಂಚನೆಯ ಜಾಲ ತೀವ್ರವಾಗಿ ಬೆಳೆಯುತ್ತಿದೆ ಎಂದು ತಿಳಿಸಿದ್ದಾರೆ.
ಕಂಪನಿಯ ಕಾರ್ಯನಿರ್ವಾಹಕರೆಂದು ಹೇಳಿ ಗ್ರಾಹಕರನ್ನು ಸಂಪರ್ಕಿಸುತ್ತಾರೆ. ತದನಂತರ ಕೆವೈಸಿ (KYC) ಫಾರ್ಮ್ ಅಪ್ಡೇಟ್ ಎಂದು ತಿಳಿಸಿ ಬಳಕೆದಾರರ ಬ್ಯಾಂಕ್ ವಿವರಗಳನ್ನು ಪಡೆದುಕೊಳ್ಳುವ ಹೊಸ ತಂತ್ರಗಳು ನಡೆಯುತ್ತಿವೆ. ಗೋಪಾಲ್ ಅವರು ಬಳಕೆದಾರರಿಗೆ ಕಳುಹಿಸಿರುವ ಇಮೇಲ್ನಲ್ಲಿ ಸಾಮಾನ್ಯ ಹಣಕಾಸಿನ ವಂಚನೆ ಹಾಗೂ ಅಂತಹ ಪ್ರಕರಣಗಳ ಕುರಿತು ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಹಕರು ಯಾವ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬಹುದು ಹಾಗೂ ಮೋಸದ ಜಾಲದಲ್ಲಿ ಬೀಳದಂತೆ ಎಚ್ಚರಿಕೆಯಿಂದ ಹೇಗೆ ಇರಬಹುದು ಎಂಬ ಮಾಹಿತಿ ನೀಡಿದ್ದಾರೆ.
ಯುಪಿಐ ಆ್ಯಪ್ಗಳೆಂದು ಕರೆಯಿಸಿಕೊಳ್ಳುವ ಅಜ್ಞಾತ ಆ್ಯಪ್ಗಳೊಂದಿಗೆ ವೈಯಕ್ತಿಕ ವಿವರಗಳನ್ನು ದಾಖಲಿಸಬೇಡಿ:
ಯುಪಿಐ ಆ್ಯಪ್ಗಳೆಂದು ನಕಲಿ ಲೋಗೋಗಳನ್ನು ಹೊಂದಿರುವ ಹಲವಾರು ಅಜ್ಞಾತ ಆ್ಯಪ್ಗಳಿವೆ. ಇವುಗಳು NPCI, BHIM ಯುಪಿಐ ಹೆಸರು ಲೋಗೋಗಳನ್ನು ಬಳಸಿಕೊಂಡು ಬಳಕೆದಾರರನ್ನು ಸಂಪರ್ಕಿಸುತ್ತವೆ. ನೀವು ಎಲ್ಲಿಯಾದರೂ ಅಪ್ಪಿತಪ್ಪಿ ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡಿದರೆ ನಿಮ್ಮ ಬ್ಯಾಂಕ್ ವಿವರಗಳು ಹಾಗೂ ವೈಯಕ್ತಿಕ ವಿವರಗಳನ್ನು ದಾಖಲಿಸುವಂತೆ ಕೇಳಲಾಗುತ್ತದೆ. ಹೀಗೆ ವಂಚಕನು ನಿಮ್ಮ ಬ್ಯಾಂಕ್ ವಿವರಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾನೆ.
ಫೋನ್/ಎಸ್ಎಂಎಸ್ ಮೂಲಕ ಒಟಿಪಿ ಶೇರ್ ಮಾಡುವುದು:
ಬ್ಯಾಂಕ್/ಹಣಕಾಸು ಸಂಸ್ಥೆಯಿಂದ ಸಂರ್ಕಿಸುವುದಾಗಿ ತಿಳಿಸುತ್ತಾ ಮೋಸಗಾರನು ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಯನ್ನು ಅನ್ಬ್ಲಾಕ್/ನವೀಕರಿಸುತ್ತೇವೆ ಎಂದು ತಿಳಿಸಿ ಬ್ಯಾಂಕ್ ವಿವರಗಳನ್ನು ಕೇಳಬಹುದು ಅಥವಾ ಒಟಿಪಿ ಕೇಳಬಹುದು. ಹೀಗೆ ಪಡೆದುಕೊಂಡ ವಿವರಗಳನ್ನು ಬಳಸಿ ಮೋಸಗಾರನು ಖಾತೆಯಿಂದ ಹಣ ಲಪಟಾಯಿಸುತ್ತಾನೆ.
ಕೆವೈಸಿ ಅಪ್ಡೇಟ್ ಮಾಡುತ್ತೇವೆ ಎಂದು ಹೇಳುವ ಸಂದೇಶ/ಕರೆಗಳಿಗೆ ಉತ್ತರಿಸುವುದು:
ನಾನು ಬ್ಯಾಂಕ್ ಅಥವಾ ಕಂಪನಿಯ ಕಾರ್ಯನಿರ್ವಾಹಕ ಎಂದು ಹೇಳುತ್ತಾ KYC ಫಾರ್ಮ್ ನವೀಕರಿಸುವ ನೆಪದಲ್ಲಿ ಬ್ಯಾಂಕ್ ವಿವರಗಳು ಮತ್ತು ಇತರ ವೈಯಕ್ತಿಕ ಮಾಹಿತಿ ತಿಳಿಸುವಂತೆ ನಿಮ್ಮನ್ನು ಕೇಳಬಹುದು. ಈ ವಿವರಗಳು ಒಮ್ಮೆ ಅವರ ಕೈಗೆ ದೊರಕಿದರೆ ಸಾಕು ಅವರ ಕೆಲಸ ಸುಲಭವಾದಂತೆಯೇ ಸರಿ.
Read Also: ನೋಡೋಕೆ Apple Watch ಥರಾನೇ ಇದೆ Redmi Watch 2: ಬೆಲೆ ಮತ್ತು ಫೀಚರ್ಸ್ details
ಬಹುಮಾನ/ವೋಚರ್ಗಳು/ಪ್ರತಿಫಲಗಳನ್ನು ನೀಡುವ ಎಸ್ಎಂಎಸ್ ಇಮೇಲ್ಗಳನ್ನು ನಂಬದಿರಿ:
ಪ್ರತಿಫಲ/ಬಹುಮಾನ/ವೋಚರ್ಗಳನ್ನು ನೀಡುತ್ತೇವೆ ಎಂದು ತಿಳಿಸುವ ಯಾವುದೇ ಎಸ್ಎಂಎಸ್ ಲಿಂಕ್ಗಳನ್ನು ಅಥವಾ ಇಮೇಲ್ಗಳನ್ನು ತೆರೆಯುವುದು ಇಲ್ಲವೇ ಇಂತಹವುಗಳನ್ನು ಉತ್ತರಿಸುವುದನ್ನು ನಡೆಸದಿರಿ ಎಂದು ವಿಟ್ಟಲ್ ಎಚ್ಚರಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ, ವೀಸಾ ಅಥವಾ ಮಾಸ್ಟರ್ಕಾರ್ಡ್ ಮರುಪಾವತಿ ಅಥವಾ ಪಾಯಿಂಟ್ಗಳು/ಬಹುಮಾನಗಳನ್ನು ನೀಡುವ ಇಮೇಲ್ಗಳಿಗೆ ಪ್ರತ್ಯುತ್ತರಿಸಬೇಡಿ:
ಆದಾಯ ತೆರಿಗೆ ಇಲಾಖೆ, ವೀಸಾ ಅಥವಾ ಮಾಸ್ಟರ್ಕಾರ್ಡ್ ಮೊದಲಾದ ಅಧಿಕೃತ ಸಂಸ್ಥೆಗಳಿಂದ ಬಂದಿರುವ ಯಾವುದೇ ದೋಷಪೂರಿತ ಲಿಂಕ್, ಇಲ್ಲವೇ ಮೇಲ್ ವಿನಂತಿಯಾಗಿದ್ದರೂ ಇವುಗಳಿಗೆ ಪ್ರತ್ಯುತ್ತರಿಸಬೇಡಿ. ಅನಿರೀಕ್ಷಿತ ಇಮೇಲ್ ಲಗತ್ತುಗಳು (ಅಟ್ಯಾಚ್ಮೆಂಟ್ಗಳು) ಅಥವಾ ತ್ವರಿತ ಸಂದೇಶ ಡೌನ್ಲೋಡ್ ಲಿಂಕ್ಗಳನ್ನು ತೆರೆಯಬೇಡಿ ಎಂದು ಗೋಪಾಲ್ ಮೇಲ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಆ್ಯಂಟಿವೈರಸ್ ಸಾಫ್ಟ್ವೇರ್ ಅಳವಡಿಸುವುದು ಇಂತಹ ಲಿಂಕ್ಗಳಿಂದ ನಿಮ್ಮನ್ನು ಸಂರಕ್ಷಿಸುತ್ತದೆ.
ಸೈಬರ್ ಕೆಫೆ ಅಥವಾ ಸಾರ್ವಜನಿಕ ವೈಫೈ ಬಳಸಿಕೊಂಡು ಆನ್ಲೈನ್ ವಹಿವಾಟುಗಳನ್ನು ನಡೆಸದಿರಿ:
ಸಾರ್ವಜನಿಕ ಸ್ಥಳಗಳಂತಹ ಸೈಬರ್ ಕೆಫೆಗಳಲ್ಲಿ ಪಾವತಿ ಆಯ್ಕೆಗಳು ಅಥವಾ ಪಾವತಿಗಳನ್ನು ಮಾಡುವುದನ್ನು ನಡೆಸದಿರಿ ಎಂದು ಗೋಪಾಲ್ ಹೇಳುತ್ತಾರೆ. ಸಾರ್ವಜನಿಕ ವೈಫೈ ಬಳಸುವುದು ಹಾಗೂ ಅಸುರಕ್ಷಿತ ಮೊಬೈಲ್ ಫೋನ್ಗಳ ಮೂಲಕ ವಹಿವಾಟು ನಡೆಸಬಾರದು ಎಂದು ಎಚ್ಚರಿಸಿದ್ದಾರೆ.
Read Also: Facebook ಇನ್ಮುಂದೆ Metaverse..! ಇಂಟರ್ನೆಟ್ ಲೋಕವನ್ನೇ ಬದಲಿಸಲಿದೆಯಾ ಮೆಟಾವರ್ಸ್..? ವಿವರ ಇಲ್ಲಿದೆ
ಕಸ್ಟಮರ್ ಐಡಿ, MPIN ಗಳನ್ನು ಫೋನ್, ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಹಂಚಿಕೊಳ್ಳಬೇಡಿ:
ಯಾವುದೇ ಆರ್ಥಿಕ ಅಥವಾ ವೈಯಕ್ತಿಕ ಮಾಹಿತಿಗಳನ್ನು ಅಂದರೆ ಕಸ್ಟಮರ್ ಐಡಿ, MPIN, ಒಟಿಪಿಗಳನ್ನು ಫೋನ್, ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಕಳುಹಿಸದಿರಿ ಎಂದು ವಿಟ್ಟಲ್ ತಿಳಿಸಿದ್ದಾರೆ.
ಕೂಡಲೇ ಮಾಹಿತಿ ಕಳುಹಿಸಿ ಎಂದು ಹೇಳುವ ಎಸ್ಎಂಎಸ್ಗಳನ್ನು ಅಳಿಸಿ:
ಯಾವುದೇ ಅಜ್ಞಾತ ಮೂಲಗಳಿಂದ ಬರುವ ಸೂಚನೆಗಳು ಹಾಗೂ ಯಾವುದೇ ಎಸ್ಎಂಎಸ್ಗಳನ್ನು ಅನುಸರಿಸದಿರಿ. ಇಂತಹ ಎಸ್ಎಂಎಸ್ಗಳನ್ನು ಕೂಡಲೇ ಅಳಿಸಿ ಎಂದು ವಿಟ್ಟಲ್ ಸಲಹೆ ನೀಡುತ್ತಾರೆ. ಯಾವುದೇ ಲಿಂಕ್ಗಳು, ಅಟ್ಯಾಚ್ಮೆಂಟ್ಗಳು ಅಥವಾ ತ್ವರಿತ ಸಂದೇಶಗಳ ಡೌನ್ಲೋಡ್ ಲಿಂಕ್ಗಳನ್ನು ಕ್ಲಿಕ್ ಮಾಡದಿರಿ ಎಂದು ಸಲಹೆ ನೀಡಿದ್ದಾರೆ.
Read Also: Diwali offer 2021: ಕೇವಲ 101 ರೂ. ಪಾವತಿಸಿ ವಿವೋ ಸ್ಮಾರ್ಟ್ಫೋನ್ ಖರೀದಿಸಿ!
ಏರ್ಟೆಲ್ ಸೇಫ್ ಪೇ (ಸುರಕ್ಷಿತ ಪಾವತಿ) ಮೋಸವನ್ನು ತಡೆಗಟ್ಟುವ ಸುರಕ್ಷಿತ ವಿಧಾನ:
ವಿಟ್ಟಲ್ ಬಳಕೆದಾರರಿಗೆ ಕಳುಹಿಸಿರುವ ಇಮೇಲ್ನಲ್ಲಿ ಏರ್ಟೆಲ್ ಸೇಫ್ ಪೇ ಕುರಿತು ಮಾಹಿತಿ ನೀಡಿದ್ದು ಮೋಸವನ್ನು ತಡೆಗಟ್ಟುವಲ್ಲಿ ಇದು ಸುರಕ್ಷಿತ ವಿಧಾನ ಎಂದು ಉಲ್ಲೇಖಿಸಿದ್ದಾರೆ. ಈ ಆ್ಯಪ್ ಪ್ರತಿಯೊಂದು ವಹಿವಾಟಿಗೂ ಹೆಚ್ಚುವರಿ ಸುರಕ್ಷತೆಯ ರಕ್ಷಣೆ ನೀಡುತ್ತದೆ ಹಾಗೂ ಗ್ರಾಹಕರು ಮೋಸಕ್ಕೆ ಒಳಗಾಗದಂತೆ ತಡೆಯುತ್ತದೆ ಎಂದು ಹೇಳಿದ್ದಾರೆ. ಪಾವತಿ ಮಾಡುವ ಮುನ್ನ ಸಂಸ್ಥೆಯ ನೆಟ್ವರ್ಕ್ ಇಂಟೆಲಿಜೆನ್ಸಿ ತಂಡವು ವಹಿವಾಟನ್ನು ದೃಢೀಕರಿಸುವ ಸಂದೇಶ ಕಳುಹಿಸುತ್ತದೆ. ಗ್ರಾಹಕರ ಅನುಮೋದನೆ ಪಡೆದುಕೊಂಡ ನಂತರವೇ ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಹೀಗೆ ಮೋಸದ ಜಾಲದಿಂದ ನಿಮ್ಮನ್ನು ಸಂರಕ್ಷಿಸುತ್ತದೆ ಎಂದು ವಿಟ್ಟಲ್ ಇಮೇಲ್ನಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ