ಹೊಸ ವರ್ಷದ ಪಾರ್ಟಿ (New Year Party) ವೇಳೆ ಕುಡಿದು ಕಟ್ಟಡದಿಂದ (Building) ಬಿದ್ದು ಯುವಕನೋರ್ವ (Youth) ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯದಲ್ಲಿ (Kottigepalya) ನಡೆದಿದೆ. ಒರಿಸ್ಸಾ ಮೂಲದ ಬಾಪಿ (30) ಮೃತ ಯುವಕ. ಬಾಪಿ ಮೂರನೇ ಪ್ಲೋರ್ನಿಂದ ಕೆಳಗೆ ಬಿದ್ದಿದ್ದಾರೆ. ಮದ್ಯದ ನಶೆಯಲ್ಲಿ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ದಾಟಲು ಮುಂದಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೃತ ಬಾಪಿ ಕಾಟನ್ ಬಾಕ್ಸ್ ತಯಾರಿ (Cotton Box Manufacturing Company) ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೃತದೇಹವನ್ನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಬಾಪಿ ತನ್ನ ಗೆಳೆಯರ ಜೊತೆ ಮೂರು ಅಂತಸ್ತಿನ ಕಟ್ಟಡದ ಮೇಲೆ ಪಾರ್ಟಿ ಮಾಡುತ್ತಿದ್ದರು. ಪಾರ್ಟಿ ಮಾಡುತ್ತಿದ್ದ ಪಕ್ಕದ ಕಟ್ಟಡದಲ್ಲಿಯೇ ಬಾಪಿ ವಾಸವಾಗಿದ್ದರು. ಈ ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹೋಗಲು ಬಾಪಿ ದಾರಿ ಮಾಡಿಕೊಂಡಿದ್ದರು. ಕಿಟಕಿಯ ಕಿಂಡಿಯಿಂದಲೇ ಬಾಪಿ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಎಣ್ಣೆ ನಶೆಯಲ್ಲಿದ್ದ ಯುವಕ ಅಪಘಾತದಲ್ಲಿ ಸಾವು!
ಹೊಸ ವರ್ಷದ ಪಾರ್ಟಿಯಿಂದ ಹಿಂದಿರುಗುತ್ತಿದ್ದ ಯುವಕ ಅಪಘಾತದಲ್ಲಿ ಮೃತನಾಗಿದ್ದಾನೆ. ಬೆಂಗಳೂರಿನ ಕುರುಬರಹಳ್ಳಿ ನಿವಾಸಿ ಗಿರೀಶ್ (18) ಮೃತ ಬೈಕ್ ಸವಾರ. ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಅಪಘಾತ ಸಂಭವಿಸಿದೆ.
ಸ್ನೇಹಿತರೊಂದಿಗೆ ಹೊಸ ವರ್ಷದ ಪಾರ್ಟಿಗೆ ಗಿರೀಶ್ ತೆರಳಿದ್ದರು. ಬೈಕ್ನಲ್ಲಿ ಬರುತ್ತಿರುವಾಗ ಬೈಕ್ ಅಪಘಾತಕ್ಕೆ ಒಳಗಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ಮದ್ಯ ಸೇವಿಸಿರುವ ಅನುಮಾನಗಳು ವ್ಯಕ್ತವಾಗಿವೆ.
ಹೊಸ ವರ್ಷ ಹಿನ್ನೆಲೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹರಿದು ಬಂದಿದೆ. ಪ್ರವಾಸಿಗರು ದ್ವಿಚಕ್ರ, ಕಾರ್ಗಳಲ್ಲಿ ಬಂದಿದ್ದರಿಂದ ಬೆಳಗ್ಗೆ 10 ಗಂಟೆಯಾದರೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂದಿ ಬೆಟ್ಟ ಪ್ರವೇಶ ಮಾರ್ಗದಲ್ಲಿ ಸುಮಾರು 5 ಕಿಲೋ ಮೀಟರ್ ಉದ್ದಷ್ಟು ಟ್ರಾಫಿಕ್ ನಿರ್ಮಾಣವಾಗಿದ್ದರಿಂದ ಪ್ರವಾಸಿಗರು ರಸ್ತೆ ಬದಿಯಲ್ಲಿಯೇ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಕಂಡು ಬಂದವು.
ರಾತ್ರಿ ಒಂದು ಗಂಟೆಯಿಂದಲೇ ನಂದಿಬೆಟ್ಟದ ಚೆಕ್ ಪೋಸ್ಟ್ನಲ್ಲಿ ಪ್ರವಾಸಿಗರು ಜಮಾಯಿಸಿದ್ದರು. ಬೆಳಗ್ಗೆ ಆರು ಗಂಟೆ ದ್ವಾರ ತೆರೆಯುತ್ತಲೇ ದೌಡಾಯಿಸಿದ ಪ್ರವಾಸಿಗರು ವರ್ಷದ ಮೊದಲ ಸೂರ್ಯೋದಯ ಕಣ್ತುಂಬಿಕೊಂಡರು.
ಹೊಸ ವರ್ಷದ ಹಿನ್ನೆಲೆ ದೇವಸ್ಥಾನಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ಕೊಡುತ್ತಿದ್ದಾರೆ. ಬೆಂಗಳೂರಿನ ಬಹುತೇಕ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರನ್ನ ನಿಯಂತ್ರಿಸಲು ದೇವಸ್ಥಾನದ ಸಿಬ್ಬಂದಿ ಹೈರಾಣು ಆಗುತ್ತಿದ್ದಾರೆ. ಮಂಡ್ಯ, ಮೈಸೂರು, ಹಾಸನ, ಬೆಂಗಳೂರಿನಿಂದಲೂ ಭಕ್ತರು ಬರುತ್ತಿದ್ದಾರೆ. ಗೋಪುರದ ಮುಂಭಾಗವೇ ಪೂಜೆ ಮಾಡಿದ್ದಾರೆ.
ಇದನ್ನೂ ಓದಿ: Liquor Sale: ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ಹರಿದು ಬಂತು ಕೋಟಿ ಕೋಟಿ ಆದಾಯ
ಅಬಕಾರಿ ಇಲಾಖೆಯ ಬೊಕ್ಕಸಕ್ಕೆ 657 ಕೋಟಿ ರೂ
ಇನ್ನು ಹೊಸ ವರ್ಷ ಅಂದ್ರೆ ಮದ್ಯ ಇರಲೇಬೇಕು. ಕಳೆದ ನಾಲ್ಕು ದಿನಗಳಿಂದಲೇ ಜನರು ಮದ್ಯವನ್ನ ಸ್ಟಾಕ್ ಮಾಡಿಕೊಂಡಿದ್ದರು. 2022ರ ಅಂತ್ಯದ ಕೊನೆ ವಾರದಲ್ಲಿ ಮದ್ಯದ ಖರೀದಿ (Liquor Sale) ಹೊಸ ದಾಖಲೆಯನ್ನು ಬರೆದಿದೆ.
ಕಳೆದ 9 ದಿನಗಳಲ್ಲಿ ಅತ್ಯಧಿಕ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ (Excise Department ಮಾಹಿತಿ ನೀಡಿದೆ. ಒಂಬತ್ತು ದಿನಗಳಲ್ಲಿ ಒಟ್ಟು 657 ಕೋಟಿ ರೂಪಾಯಿ ಅಬಕಾರಿ ಇಲಾಖೆಯ ಬೊಕ್ಕಸ ಸೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ