ಹಾವೇರಿ: ಪಂಚಮಸಾಲಿ 2 ಎ ಮೀಸಲಾತಿಗೆ ಮಾಜಿ ಸಿಎಂ ಯಡಿಯೂರಪ್ಪ ಅಡ್ಡಗಾಲು ಹಾಕಿದ್ದಾರೆ ಎಂದಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೋದಲ್ಲೆಲ್ಲಾ ಕಪ್ಪು ಬಾವುಟ ಹಾರಿಸ್ತೀವಿ ಎಂದು ಎಚ್ಚರಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನಿವಾಸದ ಎದರು ನಡೆಸಿದ ಧರಣಿ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿಗಳು, ಬೊಮ್ಮಾಯಿ ಮೀಸಲಾತಿ ನೀಡೋಕೆ ಮುಂದಾದ್ರೂ ಯಡಿಯೂರಪ್ಪ (Basavaraj Bommai) ಅಡ್ಡಗಾಲು ಹಾಕಿದ್ದಾರೆ.
ಯಡಿಯೂರಪ್ಪ ಅವರಿಗೆ ಹೊಟ್ಟೆಕಿಚ್ಚು
ಇನ್ನು ಮುಂದೆಯಾದರೂ ಬೊಮ್ಮಾಯಿಯವರು ಮೀಸಲಾತಿ ನೀಡಿದರೆ 101 ಲೀಟರ್ ಹಾಲಿನ ಅಭಿಷೇಕ ಮಾಡ್ತೇವೆ. ಸೂರ್ಯ ಚಂದ್ರ ಇರೋವರೆಗೆ ಹೇಗೇ ಚೆನ್ನಮ್ಮನ ಸ್ಮರಣೆ ಮಾಡ್ತೀವೋ ಹಾಗೆ ನಿಮ್ಮ ಸ್ಮರಣೆ ಮಾಡ್ತೀವಿ. ಸವಣೂರು ಖಾರಾ ತುಲಾಭಾರ ಮಾಡಿಸ್ತೀವಿ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಂತೆ ಯಡಿಯೂರಪ್ಪ ಸಾಹೇಬ್ರು ಒತ್ತಡ ಹಾಕ್ತಿದ್ದಾರೆ ಅಂತ ಕೆಲವರು ನಮಗೆ ಹೇಳಿದ್ದಾರೆ. ಬೊಮ್ಮಾಯಿ ಮೀಸಲಾತಿ ನೀಡಿದರೆ ಎಲ್ಲಿ ಲಿಂಗಾಯತ ಲೀಡರ್ ಆಗ್ತಾರೋ ಅಂತ ಯಡಿಯೂರಪ್ಪ ಅವರಿಗೆ ಹೊಟ್ಟೆಕಿಚ್ಚು ಇರಬಹುದು.
ಶಿಕಾರಿಪುರದ ವರೆಗೆ ಪಾದಯಾತ್ರೆ
ಹೋರಾಟಕ್ಕೆ ನೀವೇನಾದರೂ ತೊಂದರೆ ಮಾಡಿದರೆ ನೀವು ಹೋದಲ್ಲೆಲ್ಲಾ ಕಪ್ಪು ಬಾವುಟ ಹಾರಿಸ್ತೀವಿ. ಶಿಕಾರಿಪುರದ ವರೆಗೆ ಪಾದಯಾತ್ರೆ ಮಾಡೋಕೂ ಸಿದ್ದರಿದ್ದೇವೆ. ಯಡಿಯೂರಪ್ಪ ಅವ್ರಿಗೆ ಎಚ್ಚರಿಕೆ ನೀಡಿದ ಜಯ ಮೃತ್ಯುಂಜಯ ಸ್ವಾಮೀಜಿ, ವಿಜಯೇಂದ್ರ ಸಣ್ಣ ಹುಡುಗ, ಮೊದಲು ನಮ್ಮ ಮೀಸಲಾತಿ ಹೋರಾಟಕ್ಕೆ ತೊಂದರೆ ನೀಡಿದೆ.
ಇದನ್ನೂ ಓದಿ: B S Yediyurappa: ಏಕಾಂಗಿಯಾದ್ರಾ ಯಡಿಯೂರಪ್ಪ? BSY ಸ್ವಾಗತಕ್ಕೆ ಬರಲಿಲ್ಲ ಹುಬ್ಬಳ್ಳಿ ಬಿಜೆಪಿ ನಾಯಕರು!
ಪಂಚಮಸಾಲಿ ಹೋರಾಟ
ಆ ಮೇಲೆ ತಪ್ಪಿನ ಅರಿವಾಗಿ ಸುಮ್ಮನೆ ಕುಳಿತ ಎಂದು ಕಿಡಿಕಾರಿದರು. ಪಂಚಮಸಾಲಿ ಹೋರಾಟ ಒಂದು ಹಂತದವರೆಗೆ ಯಶಸ್ಸು ಕಂಡಿದೆ. ಶೇ. 2 ರಷ್ಟಿರೊ ಲಿಂಗಾಯತ ಜನರೇ ನಮ್ಮನ್ನು ಆಳಿದರು, ಪಂಚಮಸಾಲಿಗಳು ನಾವು ಮುಗ್ದರು. ಅನ್ನ ಕೊಟ್ಟ ಪಂಚಮಸಾಲಿ ಬೆಳೆಸೋ ಪ್ರಯತ್ನ ಮಾಡಲಿಲ್ಲ. ಈ ಸಮಾಜವನ್ನು 2% ಇರೋ ಕೆಲವೇ ಜನ ಆಳಿದರು. ನಮ್ಮ ಓಟು ಪಡೆದು ಗೆದ್ದು, ತಮ್ಮ ತಮ್ಮ ಸಮಾಜಕ್ಕೆ ಮೀಸಲಾತಿ ನೀಡಿದರು.
ಪಂಚಮಸಾಲಿಗಳಿಗೆ ಮೋಸ ಮಾಡಿದರು
ಆದರೆ ಪಂಚಮಸಾಲಿಗಳಿಗೆ ಮೋಸ ಮಾಡಿದರು. ಹಣೆ ಮೇಲೆ ವಿಭೂತಿ ನೋಡ್ತಾ ಇದ್ವಿ, ವೋಟ್ ಹಾಕ್ತಾ ಇದ್ವಿ. ಓಟು ಕೊಟ್ಟು ಬೆಳೆಸಿದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿದ್ದರೆ ನಿಮ್ಮ ಫೋಟೊ ಹಾಕಿಕೊಳ್ಳುತ್ತಿದ್ದೆವು. ನಿಜಲಿಂಗಪ್ಪ, ಜೆಹೆಚ್ ಪಟೇಲ್, ವೀರೇಂದ್ರ ಪಾಟೀಲರು ಮೂರು ಜನ ಮುಖ್ಯಮಂತ್ರಿ ಆಗಿ ಹೋದರು. ಯಡಿಯೂರಪ್ಪ ಲಿಂಗಾಯತ ನಾಯಕ ಅಂತ ತಿಳಿದಿದ್ದೆವು. ಅಷ್ಟು ದೊಡ್ಡ ಕಠಿಣ ಪಾದಯಾತ್ರೆ ಮಾಡಿದೆವು.
ಯಡಿಯೂರಪ್ಪನವರು ಮೀಸಲಾತಿ ಕೊಡಲೇ ಇಲ್ಲ. 10 ಲಕ್ಷ ಜನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾದರು. ಸಮಾಜ ಒಗ್ಗಟ್ಟಾಯಿತು, ಆದರೆ ಯಡಿಯೂರಪ್ಪ ಮನಸ್ಸು ಕರಗಲಿಲ್ಲ. ಬೊಮ್ಮಾಯಿ ಮೂಲತಃ ಕುಂದಗೋಳ ತಾಲೂಕಿನ ಕಮಡೊಳ್ಳಿಯವರು. ಕೂಡಲ ಸಂಗಮದಿಂದ ಬೆಂಗಳೂರು ವರಗೆ ಪಾದಯಾತ್ರೆ ಮಾಡಿದಾಗ ನಮಗೆ z ಸೆಕ್ಯೂರಿಟಿ ನೀಡಿದವರು ಬೊಮ್ಮಾಯಿಯವರು.
ಇದನ್ನೂ ಓದಿ: Karnataka Congress: ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ; ಡಿಕೆ ಶಿವಕುಮಾರ್ಗೆ ಸಲಹೆ ಕೊಟ್ಟ ದಿನೇಶ್ ಗುಂಡೂರಾವ್
ಬೊಮ್ಮಾಯಿ ಸಾಹೇಬ್ರು ಮಾತು ಕೊಟ್ಟಿದ್ರು
ವಿಜಯೇಂದ್ರ ಅರಮನೆ ಮೈದಾನದ ಅನುಮತಿಗೆ ಅಡ್ಡಗಾಲು ಹಾಕಿದಾಗ ಬೊಮ್ಮಾಯಿಯವರೇ ಅನುಮತಿ ಕೊಡಿಸಿದರು. ಎಲ್ಲರ ಕೈಯಲ್ಲಿ ಕೈ ಇಟ್ಟು ಬೊಮ್ಮಾಯಿ ಸಾಹೇಬ್ರು ಮಾತು ಕೊಟ್ಟಿದ್ರು, ಆದರೆ ಈಗ ಮಾತು ತಪ್ಪಿದ್ದಾರೆ. ಯತ್ನಾಳ ಅವರು ಅಧಿವೇಶನ ಮುಗಿಯೋದ್ರೋಳಗೆ ಬೊಮ್ಮಾಯಿ ಸಾಹೇಬ್ರು ಮೀಸಲಾತಿ ಕೊಡ್ತಾರೆ ಅಂತ ನಮ್ಮ ಮನವೊಲಿಸಿದರು. ಆದರೆ ಇದುವರೆಗೆ ಮೀಸಲಾತಿ ನೀಡಲಿಲ್ಲ. ಸಿಎಂ ಬೊಮ್ಮಾಯಿ ಮನವಿ ಮೇರೆಗೆ ನಾವು ಹೋರಾಟ ಮುಂದೆ ಹಾಕಿದ್ದೆವು. ಎರಡು ತಿಂಗಳು ಟೈಂ ತಗೊಂಡ್ರು, ಆದರೆ ಘೋಷಣೆ ಮಾಡಲಿಲ್ಲ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದರು.
ಮೆರವಣಿಗೆಯಲ್ಲಿ ಸಹಸ್ರಾರು ಜನ ಭಾಗಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಬೃಹತ್ ರಾಲಿ ನಡೆಯಿತು. ಶಿಗ್ಗಾಂವದ ಚನ್ನಮ್ಮ ವೃತ್ತದಿಂದ ಸಿಎಂ ಬೊಮ್ಮಾಯಿ ನಿವಾಸದ ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಚನ್ನಮ್ಮನಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ರ್ಯಾಲಿ ಆರಂಭಿಸಲಾಯಿತು. ರ್ಯಾಲಿಯಲ್ಲಿ ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಸೋಮಣ್ಣ ಬೇವಿನಮರದ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ