ಮಂಡ್ಯ: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election 2023) ಹತ್ತಿರವಾಗುತ್ತಿದ್ದಂತೆ ಟಿಕೆಟ್ ಖಾತರಿಯಾಗದ ಟಿಕೆಟ್ ಆಕಾಂಕ್ಷಿಗಳ ತಳಮಳ ಹೆಚ್ಚಳವಾಗಿದೆ. ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಪುತ್ರ, ವರುಣಾ (Varuna) ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ. ಚುನಾವಣೆಯಲ್ಲಿ ತಾವು ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ. ತಂದೆ (Father) ಅವರ ಕೊನೆಯ ಚುನಾವಣೆ ಆಗಿರುವ ಕಾರಣ ಅವರ ಪರವಾಗಿಯೇ ವರುಣಾದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕೊನೆ ಚುನಾವಣೆ
ಇಂದು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಅವರು, ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ವರುಣಾ ಸೇರಿದಂತೆ ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ. ಈ ಚುನಾವಣೆ ತಂದೆ ಸಿದ್ದರಾಮಯ್ಯ ಅವರಿಗೆ ಕೊನೆ ಚುನಾವಣೆಯಾಗಿದೆ. ಆದ್ದರಿಂದ ತಂದೆಯವರ ಪರವಾಗಿ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಅಲ್ಲದೇ ಅವರು ವರುಣಾದಲ್ಲಿ ನಿಲ್ಲಬೇಕು ಎಂಬುದು ಜನರ ಆಶಯ ಎಂದು ತಿಳಿಸಿದ್ದಾರೆ.
‘ನಮ್ಮ ತಂದೆ ಮತ್ತೆ ಸಿಎಂ ಆಗ್ಬೇಕು’
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಮುಂದಿನ ಸಿಎಂ ಅನ್ನೋ ಕೂಗು ಮತ್ತೆ ಜೋರಾಗಿ ಕೇಳಿ ಬರುತ್ತಿದೆ. ಈ ಕುರಿತು ಮಂಡ್ಯದ ಮಳವಳ್ಳಿಯಲ್ಲಿ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, ಮಗನಾಗಿ ತಂದೆ ಸಿಎಂ ಆಗಲಿ ಎಂದು ಬಯಸುತ್ತೇನೆ. ಕಳೆದ ಬಾರಿ ಅವರು ಒಳ್ಳೆ ಆಡಳಿತ ಕೊಟ್ಟಿದ್ದರು. ಆದರೂ ಜನ ಬಹುಮತ ನೀಡಲಿಲ್ಲ. ನನ್ನ ತಂದೆ ಮತ್ತೊಮ್ಮೆ ಮುಖ್ಯಮಂತ್ರಿ ಆದರೆ ಅವರು ಹಿಂದೆ ಮಾಡಿದ ಕೆಲಸ ಪೂರ್ಣಗೊಳಿಸುತ್ತಾರೆ. ನಮ್ಮ ತಂದೆ ಮುಖ್ಯಮಂತ್ರಿ ಆಗಬೇಕು ಅನ್ನೋದು ನನ್ನ ಆಸೆ ಅಂತ ಹೇಳಿದ್ದರು.
ಯತೀಂದ್ರ ನನ್ನ ಮಗ, ಅಭಿಮಾನದಿಂದ ಹೇಳಿದ್ದಾರೆ
ನನ್ನ ತಂದೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎನ್ನುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಯತೀಂದ್ರ ನನ್ನ ಮಗ, ಅದಕ್ಕೆ ಅಭಿಮಾನದಿಂದ ಹೇಳಿದ್ದಾರೆ. ಸಿಎಂ ಆಗಬಾರದು ಎಂದು ಯಾರಾದರೂ ಮಗ ಹೇಳುತ್ತಾರಾ? ಅಭಿಮಾನದಿಂದ ಹೇಳಿರಬೇಕು ಅಷ್ಟೇ.
ಇನ್ನು ಕ್ಷೇತ್ರ ಆಯ್ಕೆಯಲ್ಲಿ ಗೊಂದಲವಿಲ್ಲ, ಸೆಂಟ್ರಲ್ ಎಲೆಕ್ಷನ್ ಕಮಿಟಿ ಟಿಕೆಟ್ ಘೋಷಣ ಮಾಡಲಿದೆ. ಕೋಲಾರ ಸ್ಪರ್ಧೆ ಯಾವುದೇ ಗೊಂದಲವಿಲ್ಲ, ಮಾಧ್ಯಮಗಳೇ ಗೊಂದಲ ಸೃಷ್ಟಿಸಿದೆ. ಕೋಲಾರದಲ್ಲಿ ನಾನು ನಿಲ್ಲುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ