ಚಾಮರಾಜಗರ(ಮೇ 09): ಚಾಮರಾಜಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾವೇರಿ ವನ್ಯಜೀವಿಧಾಮದಲ್ಲಿ ಮೊಟ್ಟ ಮೊದಲ ಬಾರಿಗೆ ತೋಳವೊಂದು ಪತ್ತೆಯಾಗಿದೆ. ಚಿರತೆಗಳ ಕುರಿತು ಅಧ್ಯಯನಕ್ಕಾಗಿ ನೇಚರ್ ಕನ್ಸರ್ವೇಷನ್ ಫೌಂಡೇಶನ್ನ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ಅವರ ತಂಡದವರು ಹಾಕಿದ್ದ ಕ್ಯಾಮರಾ ಟ್ರ್ಯಾಪ್ನಲ್ಲಿ, ಕಾವೇರಿ ವನ್ಯಜೀವಿಧಾಮದ ಕೊತ್ತನೂರು ವಲಯದಲ್ಲಿ ಏಪ್ರಿಲ್ 7 ರಂದು ಮುಂಜಾನೆ ತೋಳ ಸಂಚರಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಒಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ತೋಳಗಳು, ಕರ್ನಾಟಕದಲ್ಲಿ ಹಾವೇರಿ, ಕೊಪ್ಪಳ, ತುಮಕೂರು, ರಾಯಚೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಕಂಡು ಬರುತ್ತವೆ. ಇವು ಹೆಚ್ಚಾಗಿ ಒಣ ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿ ಮತ್ತು ಬಹಳ ಅಪರೂಪವಾಗಿ ಎಲೆ ಉದುರುವ ಕಾಡುಗಳಲ್ಲಿ ಕಂಡು ಬರುತ್ತವೆ. ಇವುಗಳ ವ್ಯಾಪ್ತಿ ಹಲವಾರು ರಾಜ್ಯಗಳಲ್ಲಿದ್ದರೂ ಆವಾಸಸ್ಥಾನದ ನಾಶ ಮತ್ತು ಪ್ರತೀಕಾರದ ವಧೆಗೆ ಬಲಿಯಾಗುತ್ತಿವೆ. ಭಾರತದಲ್ಲಿ ಇವುಗಳ ಸಂಖ್ಯೆ ಹುಲಿಗಳಿಗಿಂತಲೂ ಕಡಿಮೆಯಿರಬಹುದು ಎಂದು ಅಂದಾಜಿಸಲಾಗಿದೆ. ಇವುಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಷೆಡ್ಯೂಲ್ - 1ರಲ್ಲಿ ಸಂರಕ್ಷಿತವಾಗಿವೆ.
ಇದನ್ನೂ ಓದಿ: ಮುಸ್ಲಿಂ ಗರ್ಭಿಣಿ ಮಹಿಳೆಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದ ಹಿಂದೂ ಯುವಕ
ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಕಾವೇರಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮಗಳು, ಬಿಳಿಗಿರಿರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹಿಂದೆ ಕೈಗೊಂಡ ಯಾವುದೇ ಅಧ್ಯಯನಗಳಲ್ಲೂ ತೋಳಗಳು ದಾಖಲಾಗಿರಲಿಲ್ಲ ಎನ್ನುತ್ತಾರೆ ಸಂಜಯ್ ಗುಬ್ಬಿ. ಈ ದಾಖಲೆಯೊಡನೆ, ದಕ್ಷಿಣ ಭಾರತದಲ್ಲಿ ನಾಯಿ ಜಾತಿಗೆ ಸೇರಿರುವ ಎಲ್ಲಾ ನಾಲ್ಕು ಪ್ರಭೇದಗಳ (ಸೀಳು ನಾಯಿ, ತೋಳ, ಗುಳ್ಳೆ ನರಿ, ಮತ್ತು ಕಪ್ಪಲು ನರಿ) ವನ್ಯಜೀವಿಗಳು ಈಗ ಚಾಮರಾಜನಗರ ಜಿಲ್ಲೆಯಲ್ಲಿ ದಾಖಲಾದಂತಾಗಿದೆ.
ಇದೀಗ ಕಾವೇರಿ ವನ್ಯಧಾಮದಲ್ಲಿ ತೋಳ ಕಂಡುಬಂದಿದ್ದು ಒಂದೇ ವನ್ಯಧಾಮದಲ್ಲಿ ಹುಲಿ, ಚಿರತೆ, ಸೀಳುನಾಯಿ, ತೋಳ ಇರುವುದು ಸಹ ಅಪರೂಪದ ಹಾಗು ಆಶ್ಚರ್ಯದ ಸಂಗತಿ ಎಂದು ನ್ಯೂಸ್18 ಗೆ ಸಂಜಯ್ ಗುಬ್ಬಿ ತಿಳಿಸಿದ್ದಾರೆ.
ಸಂಜಯ್ ಗುಬ್ಬಿ ಅವರು ಚಿರತೆಗಳ ಕುರಿತು ನಡೆಸುತ್ತಿರುವ ಅಧ್ಯಯನದಿಂದ ಇನ್ನಿತರ ಹಲವಾರು ವನ್ಯಜೀವಿಗಳ ಬಗ್ಗೆ ಮಹತ್ವವಾದ ಮಾಹಿತಿಗಳು ದೊರಕುತ್ತಿವೆ. ಈ ಹಿಂದೆ, 2014ರಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತರಕರಡಿಯನ್ನು ಕಾವೇರಿ ವನ್ಯಜೀವಿಧಾಮದಲ್ಲಿ ಇರುವಿಕೆ ಬಗ್ಗೆ ಬೆಳಕು ಚೆಲ್ಲಿದ್ದರು. 2015ರಲ್ಲಿ ಹುಲ್ಲೆಕರಗಳ ಇರುವಿಕೆಯನ್ನು ತುಮಕೂರು ಜಿಲ್ಲೆಯಲ್ಲಿ ದಾಖಲಿಸಲಾಯಿತು ಮತ್ತು ಆ ಪ್ರದೇಶವನ್ನು ಸರ್ಕಾರವು ಬುಕ್ಕಾಪಟ್ಟಣ ಚಿಂಕಾರಾ ವನ್ಯಜೀವಿಧಾಮವೆಂದು ಘೋಷಿಸಿತು. ಈ ದಾಖಲೆ, ದಕ್ಷಿಣ ಭಾರತದಲ್ಲಿ ಹುಲ್ಲೆಕರಗಳು ಸಿಗುವ ಮಿತಿಯನ್ನು ವಿಸ್ತರಿಸಿತು.
ಇದನ್ನೂ ಓದಿ: ದುಡಿಮೆ ಇಲ್ಲದೆ ಸಾಯ್ತಿದ್ದೀವಿ, ನಮ್ಮ ಕಡೆ ಸ್ವಲ್ಪ ನೋಡಿ: ಜನರ ಭಾರ ಇಳಿಸುವ ಹಮಾಲರ ಅಳಲು
ಕರ್ನಾಟಕದಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ಬಿಟ್ಟರೆ ಇನ್ನೆಲ್ಲೂ ದಾಖಲಾಗದಿದ್ದ ಕಂದು ಮುಂಗುಸಿಯನ್ನು 2018ರಲ್ಲಿ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದಾಖಲಿಸಿ, ಇದರ ಈಶಾನ್ಯ ಮಿತಿ ವಿಸ್ತರಿಸಿದ್ದನ್ನೂ ಈ ಅಧ್ಯಯನದ ಮೂಲಕ ದಾಖಲಿಸಲಾಗಿದೆ.
ಸಂಜಯ್ ಗುಬ್ಬಿ ಅವರೊಂದಿಗೆ ಈ ಅಧ್ಯಯನ ತಂಡದಲ್ಲಿ ಸಂದೇಶ್ ಅಪ್ಪು ನಾಯ್ಕ್, ಗಿರೀಶ್ ಎಂ.ಎನ್., ಜ್ಞಾನೇಂದ್ರ, ಪೂರ್ಣೇಶ್ ಎಚ್.ಸಿ. ಮತ್ತಿತರರು ಇದ್ದಾರೆ.
ವರದಿ: ಎಸ್.ಎಂ. ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ