ಬೆಂಗಳೂರು: ಸಂಪುಟ ವಿಸ್ತರಣೆಯ (Cabinet Expansion) ಕಗ್ಗಂಟು ಮುಂದುವರಿದಿದ್ದು, ಬೆಂಗಳೂರಿಗೆ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮತ್ತೆ ದೆಹಲಿಗೆ ತೆರಳಿದ್ದಾರೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿಯೇ ಉಳಿದುಕೊಂಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈಗಾಗಲೇ 24 ಸ್ಥಾನಗಳ ಭರ್ತಿಗೆ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದು, ಇಂದು ಸಂಜೆಯೊಳಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ. ಈ ನಡುವೆ ಲಿಂಗಾಯತ (Lingayat) ಮತ್ತು ಒಕ್ಕಲಿಗ (Okkaliga) ಸಮದಾಯಕ್ಕೆ ಮೊದಲ ಆದ್ಯತೆ ಕಾಂಗ್ರೆಸ್ ನೀಡಿದೆಯಂತೆ. ಸಂಪುಟದಲ್ಲಿ ಈ ಎರಡು ಸಮುದಾಯದ ಹೆಚ್ಚು ಶಾಸಕರು ಇರಲಿದ್ದಾರೆ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಈ ಹಿಂದಿನಂತೆಯೇ ಜಾತಿವಾರು ಲೆಕ್ಕದಲ್ಲಿ (ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಅಹಿಂದ) ಸಂಪುಟ ವಿಸ್ತರಣೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದರು ಎನ್ನಲಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಲಯವಾರು ಸೂತ್ರದಲ್ಲಿ ಸಚಿವ ಸ್ಥಾನ ಹಂಚಿಕೆ ಸೂತ್ರ ಇರಿಸಿದ್ದರಂತೆ.
ಪ್ರಾದೇಶಿಕವಾರು ಸಚಿವ ಸ್ಥಾನ ಹಂಚಿಕೆ?
ಈಗ ಅದೇ ಸೂತ್ರದಲ್ಲಿ ಹಳೆ ಮೈಸೂರು ಭಾಗ, ಮಲೆನಾಡು, ಕರಾವಳಿ, ಕಿತ್ತೂರು ಕರ್ನಾಟಕ, ಉತ್ತರ ಕರ್ನಾಟಕ ಅಡಿಯಲ್ಲಿ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಬಾರಿ ಕಾಂಗ್ರೆಸ್ಗೆ ಹೆಚ್ಚು ಲಿಂಗಾಯತ ಮತ್ತು ಒಕ್ಕಲಿಗ ಮತಗಳು ಒಲಿದು ಬಂದಿವೆ. ಇತ್ತ ಡಿಕೆ ಶಿವಕುಮಾರ್ ಸಹ ಒಕ್ಕಲಿಗ ನಾಯಕರಾಗಿದ್ದು, ಹಳೆ ಮೈಸೂರು ಭಾಗದಲ್ಲಿ ತಮ್ಮ ಸಮುದಾಯದ ಮತಗಳನ್ನು ಸೆಳೆಯಲು ಯಶಸ್ವಿಯಾಗಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ.
ಒಕ್ಕಲಿಗರ ಜೊತೆಯಲ್ಲಿ ಲಿಂಗಾಯತ ಸಮುದಾಯದ ಶಾಸಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಎರಡೂ ಸಮುದಾಯದ ಪ್ರಮುಖ ಶಾಸಕರಿಗೆ ಮಂತ್ರಿ ಸ್ಥಾನ ಒಲಿದು ಬರುವ ಸಾಧ್ಯತೆಗಳಿವೆ.
ಸಂಭವನೀಯ ಸಚಿವರು (ಒಕ್ಕಲಿಗ ಸಮುದಾಯ)
ಎಂಸಿ ಸುಧಾಕರ್ (ಚಿಂತಾಮಣಿ), ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ), ಚೆಲುವರಾಯ ಸ್ವಾಮಿ (ನಾಗಮಂಗಲ), ಕೆ ವೆಂಕಟಸ್ವಾಮಿ (ಪಿರಿಯಾಪಟ್ಟಣ)
ಸಂಭವನೀಯ ಸಚಿವರು (ಲಿಂಗಾಯತ ಸಮುದಾಯ)
ಶಿವಾನಂದ ಪಾಟೀಲ್ (ಬ.ಬಾಗೇವಾಡಿ), ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ), ಲಕ್ಷ್ಮಣ ಸವದಿ (ಅಥಣಿ), ಎಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪುರ (ಶಹಪುರ), ಡಾ.ಶರಣ್ ಪ್ರಕಾಶ್ ಪಾಟೀಲ್ (ಸೇಡಂ), ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ), ಬಸವರಾಜ್ ರಾಯರೆಡ್ಡಿ (ಯಲಬುರ್ಗಾ), ವಿನಯ್ ಕುಲಕರ್ಣಿ (ಧಾರವಾಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ