ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಉತ್ತರ ಕರ್ನಾಟಕ ಪ್ರಜಾಧ್ವನಿ (Prajadhwami Yatre) ಯಾತ್ರೆಯಲ್ಲಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಪುಟ ವಿಸ್ತರಣೆ ಮಾಡಿದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಮಂತ್ರಿ ಸ್ಥಾನ ನೀಡಬೇಕಿತ್ತು. ಈ ಹಿನ್ನೆಲೆ ಸಂಪುಟ ವಿಸ್ತರಣೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ಮಾಡಿದ ಕೆಲಸವನ್ನೇ ಯಾವಾಗಲೂ ಉದ್ಘಾಟನೆ ಮಾಡೋದು ಎಂದರು.
ಎಚ್ಎಎಲ್ ದು ಯುಪಿಎ ಸರ್ಕಾರದಲ್ಲಿ ಮಾಡಿರೋದು. ಲಂಬಾಣಿ ಜನರನ್ನು ಕಂದಾಯ ಗ್ರಾಮ ಮಾಡಿರೋದು ನಾವು. ಕಾನೂನು ಮಾಡಿರೋದು ನಾವು ಹಕ್ಕು ಪತ್ರ ಹಂಚೋಕೆ ಬಿಜೆಪಿ ಅವರು ಮೋದಿಯನ್ನ ಕರೆದುಕೊಂಡು ಬಂದಿರೋದು. ನಾವು ಅಡುಗೆ ಮಾಡುತ್ತೇವೆ , ಮೋದಿ ಬಂದು ಬಡಿಸ್ತಾರೆ ಎಂದು ವ್ಯಂಗ್ಯ ಮಾಡಿದರು.
ಏನು ಕೆಲಸ ಮಾಡದ ರಾಜ್ಯ ಬಿಜೆಪಿಗೆ ಮೋದಿಯೆ ಬಂಡವಾಳ. ಯಾಕಂದ್ರೆ ಜನ ವಿರೋಧಿ ಸರ್ಕಾರ 40% ಸರ್ಕಾರ ಇದಾಗಿದೆ. ಮೋದಿ ಬಂದ್ರೆ ವೋಟ್ ಬರುತ್ತೆ ಎಂದು ರಾಜ್ಯ ಬಿಜೆಪಿ ನಾಯಕರು ತಿಳಿದುಕೊಂಡಿದ್ದಾರೆ. ಬಿಜೆಪಿಯನ್ನ ಸೋಲಿಸಬೇಕು ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಜನರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಮಾತನ್ನ ಒಪ್ಪಲ್ಲ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ ಎಲ್ಲವನ್ನು ನಾನು ಒಪ್ಪೊದಿಲ್ಲ. ಆರ್ಎಸ್ಎಸ್ ಅವರು ತೀರ್ಮಾನ ಮಾಡಿರಬಹುದು. ಆದ್ರೆ ಅವರು ಬಹುಮತ ಬಂದ್ರೆ ತಾನೇ ನಿರ್ಧಾರ ಮಾಡೋದು. ಬಿಜೆಪಿಯವರು ಯಾವಾಗ ಬಹುಮತ ಬಂದಿದೆ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ 2023ರಲ್ಲಿ ಬಿಜೆಪಿ 50 ರಿಂದ 60 ಸೀಟು ಬರುತ್ತೆ ಎಂದು ಭವಿಷ್ಯ ನುಡಿದರು.
ಅಶೋಕ್ಗೆ ಯಾವ ನೈತಿಕತೆ ಇದೆ?
ಗೂಳಿಹಟ್ಟಿ ಶೇಖರ್ ಸತ್ಯವನ್ನ ಹೇಳಿದ್ದಾರೆ. ಬಿಜೆಪಿಯವರು ಕೆಲಸ ಮಾಡದೇ ಬಿಲ್ ಕೊಟ್ಟಿದ್ದಾರೆ. ಮಾನಪ್ಪ ವಜ್ಜಲ್ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಕೆಲಸ ಮಾಡದೆಯೆ ದುಡ್ಡು ಪಡೆದಿದ್ದಾರೆ. ಅಶೋಕ್ ಗಿಂತ ಮೊದಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ನನಗೆ ಕೊನೆ ಚುನಾವಣೆ ಅಂತಾ ಹೇಳಲು ಅಶೋಕ್ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ನಾನು 45 ವರ್ಷಗಳಿಂದ ರಾಜಕೀಯದಲ್ಲಿ ಇರೋದು. ಬಿಜೆಪಿ ಅವರು ಪಾಪ ಯಡಿಯೂರಪ್ಪ ಅವರಿಗೆ ಅನ್ಯಾಯ ಮಾಡಿದರು. ಯಡಿಯೂಪ್ಪರನ್ನ ಕೆಳಗಿಳಿಸಿ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ತಂದರು. ಮುಖ್ಯಮಂತ್ರಿ ಅವರ ಎಲ್ಲಾ ಖಾತೆಗಳನ್ನು ವಿಜಯೇಂದ್ರ ನೋಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ರಾಜ್ಯಕ್ಕೆ ಆಗಮಿಸಿದ ಪ್ರಧಾನಿಗಳಿಗೆ ಕಾಂಗ್ರೆಸ್ ಪ್ರಶ್ನೆ
ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಗಳಲ್ಲಿ ಸಾಲು ಸಾಲಾಗಿ ಹಗರಣಗಳು ನಡೆದಿದ್ದು ಹುದ್ದೆಗಳಿಗೆ ತಕ್ಕಂತೆ 80 ಲಕ್ಷ, 70 ಲಕ್ಷ, 50 ಲಕ್ಷ, 1 ಕೋಟಿವರೆಗೂ ಫಿಕ್ಸ್ ಆಗಿದೆ. ಆದರೆ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿಗಳು ಖಂಡಿತ ಈ ಹಗರಣದ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೆ ಸಾಗಿದೆ. ಹುದ್ದೆಗಳಿಗೆ, ಆಯಕಟ್ಟಿನ ಸ್ಥಳಗಳಿಗೆ ಇಂತಿಷ್ಟು ಎಂದು ರೇಟ್ ಕಾರ್ಡ್ ಫಿಕ್ಸಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: Kodagu: ಮಡಿಕೇರಿಯಲ್ಲಿ ಪುಷ್ಪಲೋಕ! ಹೂಗಳಿಂದ ಮೈದಳೆದ ನಾಲ್ಕುನಾಡು ಅರಮನೆ
ಆದರೆ ರಾಜ್ಯಕ್ಕೆ ಆಗಮಿಸಿರುವ ಮೋದಿಯವರು ತಮ್ಮ ಡಬಲ್ ಎಂಜಿನ್ ಸರ್ಕಾರದ ವರ್ಗಾವಣೆ ದಂಧೆಯ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಆರೋಪಗಳಿಗೆ ಉತ್ತರಿಸುವುದಿಲ್ಲ. ಕರ್ನಾಟಕವು ಸತತ ಮೂರು ವರ್ಷಗಳ ಕಾಲ ಪ್ರವಾಹಕ್ಕೆ ತುತ್ತಾಗಿ ಜನ ಆಸ್ತಿ ಪಾಸ್ತಿ ಕಳೆದುಕೊಂಡು ಕಣ್ಣೀರಿಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ