news18-kannada Updated:May 30, 2020, 7:07 PM IST
ರಮೇಶ್ ಜಾರಕಿಹೊಳಿ, ಬಿ.ಎಸ್. ಯಡಿಯೂರಪ್ಪ.
ಬೆಂಗಳೂರು; ರಾಜ್ಯ ರಾಜಕರಣದಲ್ಲಿ ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಯಾರು ಅಂದ್ರೆ ಬೇರಾರೂ ಅಲ್ಲ, ಅದೇ ರಮೇಶ್ ಜಾರಕಿಹೊಳಿ. ರಮೇಶ್ ಜಾರಕಿಹೊಳಿಯ ಒಂದೇ ಒಂದು ಹೇಳಿಕೆ ಕಾಂಗ್ರೆಸ್ನಲ್ಲಿ ತಲ್ಲಣ ಉಂಟು ಮಾಡಿದೆ. ಆದರೆ ಆಪ್ತಕೂಟದ ಸದಸ್ಯರು ಮಾತ್ರ ಅಪಸ್ವರ ಎತ್ತಿದ್ದಾರೆ. ಹಾಗಾದ್ರೆ ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ ಆಗುತ್ತೋ ಇಲ್ಲವೋ ಎಂಬುದಕ್ಕೆ ಈ ಮಾಹಿತಿ ನೋಡಿ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುರ್ಚಿ ಗಢ ಗಢ ಎನ್ನುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ ಆಪ್ತರೆ ಟವಲ್ ಹಾಕಿಕೊಂಡು ಕಾಯುತ್ತಾ ಕುಳಿತಿದ್ದಾರೆ. ಇದೇ ಕಾರಣಕ್ಕಾಗಿ ರಾಜಕೀಯ ಕ್ವಾರಂಟೈನ್ನಲ್ಲಿ ಇದ್ದ ಭಿನ್ನಮತೀಯ ಶಾಸಕರು ಕೊರೋನಾ ನಡುವೆಯೇ ಬಿಎಸ್ವೈ ವಿರುದ್ಧ ಸಭೆ ನಡೆಸಿದ್ದರು. ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಅತೃಪ್ತ ಶಾಸಕರು ಸಭೆ ಸೇರಿದ್ದರು. ಉಮೇಶ್ ಕತ್ತಿ ಸೇರಿದಂತೆ ಘಟಾನುಘಟಿ ನಾಯಕರೇ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ನಡೆಯುವ ಬಗ್ಗೆ ಜಗದೀಶ್ ಶೆಟ್ಟರ್ ಕೂಡ ಮಾಹಿತಿ ಪಡೆದಿದ್ದರು. ಸಿಎಂ ಬಿಎಸ್ವೈ ಬದಲಾವಣೆಯೇ ಸಭೆಯ ಅಜೆಂಡಾ ಆಗಿತ್ತು. ಹಾಗಾಗಿ ಶೆಟ್ಟರ್, ಯತ್ನಾಳ, ಕತ್ತಿ ಈ ಮೂವರು ಚಾನ್ಸ್ ಸಿಕ್ಕಿದರೆ ನೋಡೇ ಬಿಡೋಣ ಅಂತಾ ಸಿಎಂ ಸೀಟಿಗೆ ಅರ್ಜಿ ಹಾಕಿಕೊಂಡು ತಯಾರಾಗಿರುವಾಗಲೇ ಬೆಳಗಾವಿ ಸಾಹುಕಾರ್ ಆಪರೇಷನ್ ಕಮಲದ ಬಾಂಬ್ ಸಿಡಿಸಿದ್ದಾರೆ.
ಸಿಎಂ ಬಿಎಸ್ವೈ ಬೆನ್ನಿಗೆ ನಿಂತಿರುವ ರಮೇಶ್ ಜಾರಕಿಹೊಳಿ ನನ್ನ ಜೊತೆ 22ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಟಚ್ನಲ್ಲಿದ್ದಾರೆ. ಹೈಕಮಾಂಡ್ ಅನುಮತಿ ನೀಡಿದರೆ ಟ್ರಯಲ್ಗಾಗಿ ಒಂದು ವಾರದಲ್ಲಿ 5 ಜನರ ರಾಜೀನಾಮೆ ಕೊಡಿಸುತ್ತೇನೆ ಎಂದು ಬಿಟ್ಟಿದ್ದಾರೆ. ಆ ಮೂಲಕ ಬಿಎಸ್ವೈ ಬುಡಕ್ಕೆ ಬಾಂಬ್ ಇಡಲು ಹೊರಟ ಭಿನ್ನಮತೀಯರಿಗೆ ಠಕ್ಕರ್ ಕೊಟ್ಟಿದ್ದಾರೆ. ಹೈಕಮಾಂಡ್ ಅನುಮತಿ ಕೊಟ್ರೆ ಆಪರೇಷನ್ ಕಮಲ ಗ್ಯಾರಂಟಿ ಎಂದಿದ್ದಾರೆ.
ಅಷ್ಟೇ ಅಲ್ಲದೇ ನ್ಯೂಸ್ 18 ಕನ್ನಡಕ್ಕೆ ಬೆಳಗಾವಿ ಸಾಹುಕಾರ್ ಶಾಸಕರ ಪಟ್ಟಿ ಸಹ ನೀಡಿದ್ದಾರೆ. ಅವರು ನೀಡಿದ ಪಟ್ಟಿ ಪ್ರಕಾರ, 13 ಜಿಲ್ಲೆಗಳ 22 ಕಾಂಗ್ರೆಸ್ ಶಾಸಕರು ಆಪರೇಷನ್ಗೆ ಒಳಗಾಗಲಿದ್ದಾರೆ. ಬೆಳಗಾವಿ -3, ಬೀದರ್ -2, ಕೋಲಾರ-1, ದಾವಣೆಗೆರೆ-1,
ವಿಜಯಪುರ -3, ಬಳ್ಳಾರಿ -2, ರಾಯಚೂರು-2, ಕೊಪ್ಪಳ- 1, ಚಿತ್ರದುರ್ಗ-1, ಕಲಬುರಗಿ-1 ಶಾಸಕರು ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಲಿಸ್ಟ್ನಲ್ಲಿ ಇದ್ದಾರೆ.
ಸಾಲದ್ದಕ್ಕೆ ಉಮೇಶ್ ಕತ್ತಿ ಮತ್ತು ಯತ್ನಾಳಗೆ ಭಿನ್ನಮತೀಯ ಸಭೆ ನಡೆಸಬೇಡಿ ಎಂದು ರಮೇಶ್ ಜಾರಕಿಹೊಳಿ ಮನವಿಯನ್ನು ಮಾಡಿದ್ದಾರೆ. ಜೊತೆಗೆ ಸಿಎಂ ಬಿಎಸ್ವೈ ವಿರುದ್ಧ ರಾಜಕೀಯ ಬಿರುಗಾಳಿ ಎದ್ದರೆ ನಾನು ಗೋಡೆಯಾಗಿ ನಿಂತುಕೊಳ್ಳುತ್ತೇನೆ ಅಂತಾ ಸಿಎಂ ಬಿಎಸ್ವೈ ಬೆನ್ನಿಗೆ ನಿಂತಿದ್ದಾರೆ. ಇನ್ನು ರಮೇಶ್ ಹೇಳಿಕೆಗೆ ಆಪ್ತ ಸಚಿವ ಎಸ್.ಟಿ. ಸೋಮಶೇಖರ್ ಅಸಮಾಧಾನ ಹೊರಹಾಕಿದ್ದಾರೆ. ಇದೆಲ್ಲಾ ಹುಡುಗಾಟನ ಅಂದಿದ್ದಾರೆ. ಆದರೆ ಸಚಿವ ಡಾ. ಸುಧಾಕರ್ ಅವರು ಮಾತ್ರ ರಮೇಶ್ ಜಾರಕಿಹೊಳಿ ಹೇಳೋದು ನಿಜ. ಅವರು ಸುಳ್ಳು ಹೇಳಲ್ಲ ಎಂದು ಸಾಥ್ ಕೊಟ್ಟಿದ್ದಾರೆ.
ಇದನ್ನು ಓದಿ: ಬಿಜೆಪಿಯೊಳಗಿನ ಹೊಸ ಬಂಡಾಯ ಪರ್ವದ ಮಾಸ್ಟರ್ಮೈಂಡ್ ಮಾಜಿ ಸಿಎಂ?
ಈ ನಡುವೆ ರಮೇಶ್ ಜಾರಕಿಹೊಳಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿಮಿಡಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಭಿನ್ನಮತೀಯರ ಗಮನವನ್ನು ಬೇರೆಡೆ ಸೆಳೆಯಲು ಹೀಗೆ ಸುಳ್ಳು ಹೇಳುತ್ತಿದ್ದಾರೆ. ಅವನ ಕೈಯಲ್ಲಿ ಕುಮಟಳ್ಳಿ ಬಿಟ್ರೆ ಮತ್ಯಾರನ್ನು ಕರ್ಕೊಂಡು ಹೋಗೋಕೆ ಆಯ್ತು. ರಮೇಶ್ ಜಾರಕಿಹೊಳಿ ಹೇಳುವುದೆಲ್ಲಾ ಸುಳ್ಳು ಎಂದು ಲೇವಡಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಹ ರಮೇಶ್ ಫ್ರೆಂಡ್ ಉಗ್ರಪ್ಪ ಅವರನ್ನೇ ಕೇಳಿ ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಭಿನ್ನಮತೀಯರ ಸಭೆಯ ಕಾರಣಕ್ಕೆ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಮಾಡುತ್ತಿದೆ.
First published:
May 30, 2020, 7:06 PM IST