ಬೆಂಗಳೂರು: 2023-24ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ (Karnataka State Budget 2023-24) ಮಂಡನೆಗೆ ಕ್ಷಣಗಣನೆ (countdown) ಆರಂಭವಾಗಿದೆ. ಬೆಳಗ್ಗೆ 10.15ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಈ ಬಾರಿಯ ಬಜೆಟ್ ಮಂಡಿಸಲಿದ್ದಾರೆ. ಈ ಸಾಲಿನ ಬಿಜೆಪಿ ಸರ್ಕಾರದ (BJP Government) ಕೊನೆಯ ಬಜೆಟ್ ಇದಾಗಲಿದೆ. ಶೀಘ್ರವೇ ರಾಜ್ಯ ವಿಧಾನಸಭಾ ಚುನಾವಣೆ (state assembly elections) ಬರಲಿದ್ದು, ಅದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಬೊಮ್ಮಾಯಿ ಬಜೆಟ್ ಮೇಲೆ ರಾಜ್ಯದ ಜನರು ಹಲವು ನಿರೀಕ್ಷೆಗಳನ್ನು (expectations) ಇಟ್ಟುಕೊಂಡಿದ್ದಾರೆ. ಇವುಗಳನ್ನೆಲ್ಲಾ ಗಮನದಲ್ಲಿ ಇರಿಸಿಕೊಂಡು, ಮುಂದಿನ ಚುನಾವಣೆಗೂ ಅನುಕೂಲವಾಗುವಂತೆ, ಶ್ರೀಸಾಮಾನ್ಯನಿಗೆ ಹೊರೆಯಾಗದಂತೆ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುತ್ತಾರಾ ಎಂಬ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.
ಎರಡನೇ ಬಾರಿಗೆ ಬಜೆಟ್ ಮಂಡಿಸಲಿರುವ ಸಿಎಂ
ಬೆಳಗ್ಗೆ 10.15ಕ್ಕೆ ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಈ ಅವಧಿಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಲಿದೆ. ಕಳೆದ ಬಾರಿ ಸಿಎಂ ಆಗಿ ಮೊದಲ ಬಜೆಟ್ ಮಂಡಿಸಿದ್ದ ಬಸವರಾಜ ಬೊಮ್ಮಾಯಿ, ಇದೀಗ ಎರಡನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.
ಬೊಮ್ಮಾಯಿ ಬಜೆಟ್ ಮೇಲೆ ನಿರೀಕ್ಷೆ ನೂರಾರು
ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್ ಮೇಲೆ ನಿರೀಕ್ಷೆಗಳು ನೂರಾರಿವೆ. ಮುಂಬರುವ ಎಲೆಕ್ಷನ್ ಗಮನದಲ್ಲಿ ಇಟ್ಟುಕೊಂಡು ಸಿಎಂ ಬೊಮ್ಮಾಯಿ ಹಲವು ಜನಪರ ಯೋಜನೆಗಳನ್ನು ಘೋಷಿಸಬಹುದು ಅಂತ ನಿರೀಕ್ಷಿಸಲಾಗಿದೆ.
ತವರು ಜಿಲ್ಲೆ ಹಾಗೂ ಸ್ವಕ್ಷೇತ್ರಕ್ಕೆ ಏನು ಕೊಡ್ತಾರೆ ಸಿಎಂ?
ತವರು ಜಿಲ್ಲೆ ಧಾರವಾಡ ಹಾಗೂ ಸ್ವಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಏನು ಘೋಷಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಹುಬ್ಬಳ್ಳಿ-ಧಾರವಾಡದ ಜನ ಈ ಬಾರಿ ಭರ್ಜರಿ ನಿರೀಕ್ಷೆಯಲ್ಲಿದ್ದಾರೆ. ಅಮರಗೋಳದಲ್ಲಿರುವ ಎಪಿಎಂಸಿಯನ್ನು ಮೇಲ್ದರ್ಜೆಗೇರಿಸಬೇಕು. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಕರ್ನಾಟಕದ ಪ್ರಮುಖ ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಬೇಕು ಎಂಬ ಬೇಡಿಕೆ ಇದೆ. ಅವಳಿನಗರಗಳ ಮಧ್ಯೆ ತ್ವರಿತ ಸಂಪರ್ಕಕ್ಕೆ ಮೆಟ್ರೊ ಅಥವಾ ಮೋನೊ ರೈಲು ಬರಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ಅದು ಈ ಬಾರಿ ಈಡೇರುತ್ತಾ ಕಾದು ನೋಡಬೇಕು.
ಉತ್ತರ ಕನ್ನಡಕ್ಕೆ ಸಿಗುತ್ತಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಉತ್ತರ ಕನ್ನಡ ಜಿಲ್ಲೆಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ಈ ಹಿಂದಿನಿಂದಲೂ ಇದೆ. ಹಲವು ಬಾರಿ ಭಾರೀ ಅಭಿಯಾನವೂ ನಡೆದಿತ್ತು. ಆಗೆಲ್ಲ ಭರವಸೆ ನೀಡಿದ್ದ ಸರ್ಕಾರ, ಕುಮಟಾ ತಾಲೂಕಲ್ಲಿ ಜಾಗವನ್ನೂ ನೋಡಿತ್ತು. ಆದರೆ ಅದಷ್ಟೇ ಭಾಗ್ಯ ಎನ್ನುವಂತಾಗಿದೆ. ಹೀಗಾಗಿ ಈ ಬಾರಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸುತ್ತಾರಾ ಅಂತ ಕಾದು ನೋಡಬೇಕಿದೆ.
ಇನ್ನಷ್ಟು ನಿರೀಕ್ಷೆಗಳು
ಅತ್ತ ಕೊಡಗಿನಲ್ಲಿ ರಸ್ತೆಗಳ ಅಭಿವೃದ್ಧಿಗೆ, ಪ್ರವಾಸಿ ಸ್ಥಳಗಳಲ್ಲಿನ ಮೂಲಸೌಕರ್ಯದ ಅಭಿವೃ ದ್ಧಿಗೆ ಬೇಡಿಕೆ ಇದೆ. ಸತತ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸ ಬೇಕು ಎಂಬ ಬೇಡಿಕೆಯೂ ಇದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಆದತ್ಯೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಬೇಡಿಕ ಇದೆ. ಇನ್ನುಳಿದಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್ವೇ ವಿಸ್ತರಣೆಗೆ ಹಣ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಮಹದಾಯಿಗೆ ಸಿಗುತ್ತಾ ಹುರುಪು?
ಧಾರವಾಡ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹದಾಯಿ ಕಳಸಾ–ಬಂಡೂರಿ ನಾಲಾ ಜೋಡಣೆ ಯೋಜನೆಗೆ ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟು, ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಬೇಕು ಎಂಬ ಬೇಡಿಕೆ ಇದೆ. ಆದರೆ ಈ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆಯಾಗುತ್ತಾ ಎನ್ನುವುದಕ್ಕೆ ಬಜೆಟ್ನಲ್ಲಿ ಉತ್ತರ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ