ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಈ ಸಿಡಿಯಲ್ಲಿ ಇರುವ ವ್ಯಕ್ತಿ ನಾನಲ್ಲ ಎಂದು ಹೇಳಿಕೊಂಡಿದ್ದ ರಮೇಶ್ ಜಾರಕಿಹೊಳಿ ಇದೀಗ ಸಿಡಿಯಲ್ಲಿ ಇರುವ ವ್ಯಕ್ತಿ ನಾನೇ. ನಾವಿಬ್ಬರೂ ಸಹಮತದೊಂದಿಗೆ ಆತ್ಮೀಯವಾಗಿ ಇದ್ದೆವು ಎಂದು ತನಿಖೆಯಲ್ಲಿ ಹೇಳುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಸಿಡಿ ತಿರುಚಲಾಗಿದೆ ಎಂದು ರಮೇಶ್ ಜಾರಕಿಹೊಳಿ ಪರವಾಗಿ ನೆಲಮಂಗಲದ ಮಾಜಿ ಶಾಸಕ ಹಾಗೂ ಅವರ ಆಪ್ತ ಎಂ.ವಿ. ನಾಗರಾಜು ದೂರು ದಾಖಲಿಸಿದ್ದರು. ಇದೀಗ ರಮೇಶ್ ಜಾರಕಿಹೊಳಿ ಈ ರೀತಿ ಹೇಳಿಕೆ ನೀಡುತ್ತಿದ್ದಂತೆ ಇದು ಅವರ ವೈಯಕ್ತಿಕ ವಿಷಯ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಹೇಳುವ ಮೂಲಕ ಪ್ರಕರಣದಿಂದ ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ವೇಳೆ ವಿಡಿಯೋದಲ್ಲಿ ಇರುವುದು ತಾನೇ ಎಂದು ರಮೇಶ್ ಜಾರಕಿಹೊಳಿ ಒಪ್ಪಿಕೊಂಡ ವಿಚಾರವಾಗಿ ನೆಲಮಂಗಲದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಎಂ.ವಿ. ನಾಗರಾಜು ಅವರು, ಈ ಹಿಂದೆ ಸೀಡಿ ಬಗ್ಗೆ ನನಗೆ ಅಷ್ಟೇನೂ ಮಾಹಿತಿ ಇಲ್ಲ. ಸಿಡಿಯಲ್ಲಿ ಇರುವುದು ನಾನಲ್ಲ ಎಂದು ಮೊದಲು ಹೇಳಿದ್ದರು. ಆದರೆ, ಇಂದು ಸಿಡಿಯಲ್ಲಿ ಇರುವುದು ನಾನೇ ಎಂದು ಹೇಳಿದ್ದಾರೆ. ಈ ಬಗ್ಗೆ ನಾನು ಇವತ್ತು ಮಾಧ್ಯಮಗಳ ಮೂಲಕ ತಿಳೊದುಕೊಂಡೆ. ಅವತ್ತು ವಿಡಿಯೋದಲ್ಲಿ ಅವರು ಇಲ್ಲ ಎಂದು ಹೇಳಿದ್ದೆ, ಇವತ್ತು ಇಲ್ಲ ಎಂದೆ ಹೇಳುತ್ತೇನೆ. ಅವರ ವೈಯಕ್ತಿಕ ವಿಚಾರ ಏನು ಮಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ರಾಜಕೀಯವಾಗಿ ಆತ್ಮೀಯತೆಯಿಂದ ಜೊತೆಗಿದ್ದೆವು. ಈ ವಿಷಯವಾಗಿ ನಾವು ಹತ್ತಿರ ಇರುತ್ತಿರಲಿಲ್ಲ. ಈ ವಿಷಯದಲ್ಲಿ ನಮಗೆ ಅಷ್ಟು ಮಾಹಿತಿ ಇಲ್ಲ. ರಾಜಕೀಯವಾಗಿ ಏನೋ ಆಗಬೇಕು, ಏನು ವಾಸ್ತವಾಂಶ ಇದ್ಯೋ ಒಪ್ಪಿಕೊಂಡಿರಬೇಕು. ಅವರು ಇರೋದು ಬೆಳಗಾವಿಯಲ್ಲಿ, ನಾನಿರೋದು ಬೆಂಗಳೂರಿನಲ್ಲಿ. ಅವರು ಬೆಂಗಳೂರಿಗೆ ಬಂದಾಗ ಭೇಟಿ ಮಾಡುತ್ತಿದ್ದೋ. ಅವರನ್ನ ಪಕ್ಷಕ್ಕೆ ಕರೆದುಕೊಂಡು ಬಂದವನು ನಾನೇ, ಸೇರಿಸಿದ್ದು ನಾನೇ. ಆದರೆ ವೈಯಕ್ತಿಕ ವಿಚಾರಗಳು ನನಗೇನು ಗೊತ್ತಿರುತ್ತೆ ಎಂದು ನಾಗರಾಜು ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುವ ನಾಲ್ಕೂವರೆ ತಿಂಗಳ ಮುಂಚೆಯೇ ನನಗೆ ಗೊತ್ತಿತು ಯಾವುದೋ ಸಿಡಿ ಇದೆ ಎಂದು. ಬಾಲಚಂದ್ರ ಜಾರಕಿಹೊಳೆ ನನಗೆ ಹೇಳಿದ್ರು ಅಣ್ಣನತ್ರ ಕೇಳ್ಕೊಂಡು ಬಾ ಅಂತ. ಹಾಗಾಗಿ ನಾನು ಎರಡೆರಡು ಬಾರಿ ಹೋಗಿ ಕೇಳಿದ್ದೆ. ಅವರು ಅದು ನಾನಲ್ಲಪ್ಪ, ಆತರದ್ದು ಯಾವುದು ಇಲ್ಲ, ನಾನ್ಯಾವ್ದು ಅಂತ ಕೆಟ್ಟ ಕೆಲಸ ಮಾಡಿಲ್ಲ ಅಂದಿದ್ರು. ರಾಜಕೀಯವಾಗಿ ಷಡ್ಯಂತ್ರ ರೂಪಿಸಿ ಯಾರೋ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಈಗ ಅವರು ಸೇಫ್ ಆಗ್ಬೇಕು. ಅದಕ್ಕೆ ಒಪ್ಕೊಂಡಿರಬೇಕು. ರಾಜಕೀಯವಾಗಿ ಷಡ್ಯಂತ್ರ ರೂಪಿಸಿರುವಾಗ, ವಿಷಯ ತನಿಖೆಯಲ್ಲಿ ಗೊತ್ತಾಗಿದೆ ಎಂದಿದ್ದಾರೆ.
ಸುಧಾಕರ್, ಕುಮಟಳ್ಳಿ ಸೇರಿದಂತೆ ಎಲ್ಲರನ್ನೂ ಪಕ್ಷಕ್ಕೆ ಕರೆತರುವ ಕೆಲಸ ನಾನು ಮಾಡಿದ್ದೇನೆ. ಜಾರಕಿಹೊಳಿ ನಮ್ಮತ್ರ ಏನು ಹೇಳಿದರೋ ಅದನ್ನು ಮಾಧ್ಯಮದ ಮುಂದೆ ಹೇಳಿದ್ದೆ. ಅವರ ವೈಯಕ್ತಿಕ ವಿಚಾರಕ್ಕೂ ನಮಗೂ ಸಂಬಂಧವಿಲ್ಲ ಎಂದು ರಮೇಶ್ ಜಾರಕಿಹೊಳಿ ಆಪ್ತರಾದ ಎಂ.ವಿ ನಾಗರಾಜು ಹೇಳಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ