ಯಾದಗಿರಿ(ಸೆ.10): ಮಹಾರಾಷ್ಟ್ರದಲ್ಲಿ ಮತ್ತೆ ಭಾರಿ ಮಳೆಯಾಗುತ್ತಿರುವ ಹಿನ್ನಲೆ ರಾಜ್ಯದ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿವೆ. ಇದರಿಂದ ಬಸವಸಾಗರ ಜಲಾಶಯಕ್ಕೆ ಕೂಡ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಸಮೀಪದಲ್ಲಿರುವ ಬಸವಸಾಗರ ಜಲಾಶಯಕ್ಕೆ ಈಗ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಜಲಾಶಯಕ್ಕೆ 85 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಜಲಾಶಯದಿಂದ 81400 ಕ್ಯೂಸೆಕ್ ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಕೂಡ ಮಹಾರಾಷ್ಟ್ರದ ಮಳೆಗೆ ಬಸವಸಾಗರ ಜಲಾಶಯ ಭರ್ತಿಯಾಗಿದ್ದ ಹಿನ್ನೆಲೆ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು. ಇದರಿಂದ ಕೃಷ್ಣಾ ನದಿ ತೀರದಲ್ಲಿ ಕೂಡ ಪ್ರವಾಹವಾಗಿ ನದಿ ತೀರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿತ್ತು. ಅದೇ ರೀತಿ ಶಹಾಪುರ ತಾಲೂಕಿನ ಕೊಳ್ಳುರು ಎಂ- ಹೂವಿನಹೆಡಗಿ ಸೇತುವೆ ಕೂಡ ಸಂಪರ್ಕ ಕಡಿತಗೊಂಡಿತ್ತು.
ನಂತರ ಬಸವಸಾಗರ ಜಲಾಶಯಕ್ಕೆ ನೀರು ಒಳಹರಿವು ಕಡಿಮೆಯಾದ ಹಿನ್ನೆಲೆ ಕೃಷ್ಣಾ ನದಿ ನೀರು ಹರಿವಿನ ಪ್ರಮಾಣ ಇಳಿಮುಖವಾದ ಹಿನ್ನೆಲೆ ನದಿ ತೀರದ ಜನರು ನಿಟ್ಟುಸಿರು ಬಿಟ್ಟಿದ್ದರು. ಸೆಪ್ಟೆಂಬರ್ ತಿಂಗಳ ಆರಂಭ ವಾರದಲ್ಲಿ ನೀರಿನ ಹರಿವು ಪ್ರಮಾಣ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಕೃಷ್ಣಾ ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿದೆ. ಇದರಿಂದ ಪದೆ ಪದೇ ನದಿ ತೀರದ ಜನರು ಆತಂಕಕ್ಕೆ ಒಳಗಾಗುವಂತಾಗಿದೆ.
ಸದ್ಯಕ್ಕೆ 81400 ಕ್ಯೂಸೆಕ್ ನೀರು ಹರಿಯುತ್ತಿದ್ದು ಇದರಿಂದ ಯಾವುದೇ ಸಮಸ್ಯೆಯಾಗಲ್ಲ ಆದರೆ, ಮತ್ತೆ ಹೆಚ್ಚು ನೀರು ಬಂದರೆ ಹೇಗೆ ಎಂದು ರೈತರು ಚಿಂತೆ ಮಾಡುವಂತಾಗಿದೆ. ಬಸವಸಾಗರ ಜಲಾಶಯವು 33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು,ಇಂದು ಜಲಾಶಯದಲ್ಲಿ 32.51 ಟಿಎಂಸಿ ನೀರು ಸಂಗ್ರಹವಾಗಿದೆ. ಈಗಾಗಲೇ ಕೃಷ್ಣಾ ನದಿಯ ಅಬ್ಬರಕ್ಕೆ ಬೆಳೆ ಹಾನಿಗೊಳಗಾದ ನದಿ ತೀರದ ರೈತರು ಮತ್ತೆ ಕೃಷ್ಣಾ ನದಿಯ ಅರ್ಭಟಕ್ಕೆ ಆತಂಕಕ್ಕೆ ಒಳಗಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ