ಹುಬ್ಬಳ್ಳಿ (ನ.27): ಪ್ರಧಾನಿ ನರೇಂದ್ರ ಮೋದಿ ರಾಮನ ಬಗ್ಗೆ ಜಪ ಮಾಡ್ತಾರೆ. ಆದ್ರೆ ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ( KPCC Spokesperson V S Ugrappa) ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಬಿಜೆಪಿಯವರು ಸದಾ ರಾಮನ ಜಪ ಮಾಡ್ತಾರೆ. ಆದ್ರೆ ಬಿಜೆಪಿಯ ಎಷ್ಟು ಜನ ರಾಮಾಯಣ (Ramayana) ಓದಿದ್ದಾರೆ. ಮೋದಿ ರಾಮಾಯಣ ಓದಿದ್ದಾರಾ? ರಾಮ ಯಾಕೆ ರಾವಣನ ವಿರುದ್ಧ ಯದ್ಧ ಮಾಡ್ತಾನೆ. ನಮ್ಮ ಪರಂಪರೆ ಪ್ರಕಾರ ಗಂಡ ಹೆಂಡತಿಯ ಕಷ್ಟ ಸುಖಗಳಲ್ಲಿ ಭಾಗಿಯಾಗೋದು. ಆಧುನಿಕ ರಾಮಭಕ್ತ ಮೋದಿ (Modi) ಮದುವೆಯಾಗಿ ಆ ಹೆಣ್ಣು ಮಗಳ ಬಗ್ಗೆ ಯೋಚನೆ ಮಾಡಿದ್ರಾ? ನಿಮಗೆ ರಾಮನ ಬಗ್ಗೆ, ರಾಮಾಯಣದ ಬಗ್ಗೆ ಗೌರವ ಇದೆಯಾ? ಮಿಸ್ಟರ್ ಮೋದಿ 1967 ರಲ್ಲಿ ಮದುವೆಯಾಗಿ ಆ ಹೆಣ್ಣು ಮಗಳಿಗೆ ಏನು ಮಾಡಿದ್ದೀರಾ? ಎಂದು ಮೋದಿ ಮದುವೆ ಬಗ್ಗೆ ವಿ.ಎಸ್ ಉಗ್ರಪ್ಪ ಪ್ರಶ್ನೆ ಮಾಡಿದರು.
ನರೇಂದ್ರ ಮೋದಿ ವಿರುದ್ಧ ಉಗ್ರಪ್ಪ ವಾಗ್ದಾಳಿ
ಅಯೋಧ್ಯಾ ಕಾಂಡದಲ್ಲಿ ರಾಜ್ಯಭಾರ ಹೇಗೆ ಮಾಡಬೇಕೆಂದಿದೆ. ಅದರ ಪ್ರಕಾರ ಮೋದಿ ನಡೆಯುತ್ತಿದ್ದಾರೆಯೆ? ನಮ್ಮ ಮೋದಿ ಸಾಹೇಬರು ಕಪ್ಪು ಹಣ ತರ್ತೀವಿ ಎಂದು ವಾಗ್ದಾನ ಮಾಡಿದ್ರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಅಂದ್ರು. ಆದ್ರೆ ಕೊಟ್ಟ ಮಾತಿನಂತೆ ಇವರೇ ನಡೆದುಕೊಂಡಿಲ್ಲ.
ರಾಮನ ಆದರ್ಶಕ್ಕೆ ನೀವು ವಿರುದ್ಧವಾಗಿ ನಡೆದುಕೊಳ್ತೀರಿ.
ಮೋದಿ ಹಾಗೂ ಆರ್.ಎಸ್.ಎಸ್ ನವರು ರಾಮನನ್ನ ಪರಿಚಯಿಸಿದ ವಾಲ್ಮೀಕಿಯನ್ನ ಮರೆತಿದಾರೆ. ವಾಲ್ಮೀಕಿ ಬೇಡರ ಸಮಾಜದಲ್ಲಿ ಹುಟ್ಟಿದವರು. ತುಳಸಿ ರಾಮಾಯಣ ನೆನೆಸೋದು ಬಿಟ್ಟರೆ ಬೇರೇನು ಮಾಡಲ್ಲ. ನಾವು ಹಿಂದೂತ್ವದ ವಿರೋಧಿಗಳಲ್ಲ, ಕಾಂಗ್ರೆಸ್ ದೃಷ್ಟಿಯಿಂದ ಹಿಂದೂತ್ವ ಅಂದ್ರೆ ವಸುದೈವ ಕುಟುಂಬಕಂ ಎಂದು ಉಗ್ರಪ್ಪ ಅಭಿಪ್ರಾಯಪಟ್ಟರು.
ಸಿದ್ಧರಾಮಯ್ಯ ಸ್ಪರ್ಧೆ ಹೈಕಮಾಂಡ್ ಗೆ ಬಿಟ್ಟ ವಿಚಾರ
ಸಿದ್ಧರಾಮಯ್ಯ ಎಲ್ಲಿ ಸ್ಪರ್ಧಿಸ್ತಾರೆ ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ವಿವಿಧ ಕಡೆ ಸ್ಪರ್ಧಿಸುವಂತೆ ಬೇರೆ ಬೇರೆ ಕಡೆಯಿಂದ ಒತ್ತಡ ಇದೆ ಎಂದು ವಿ.ಎಸ್ ಉಗ್ರಪ್ಪ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಸಿದ್ಧರಾಮಯ್ಯ ಅವರು ಜನಾನುರಾಗಿಯಾಗಿದ್ದಾರೆ. ಒಬ್ಬರಿಗೆ ಒಂದೇ ಕ್ಷೇತ್ರ ಅನ್ನೋದು ಪಕ್ಷದ ಅಧ್ಯಕ್ಷರಿಗೆ ಬಿಟ್ಟ ವಿಚಾರ. ಯಾರು ಎಲ್ಲಿಂದ ಸ್ಪರ್ಧಿಸ್ತಾರೆ ಅನ್ನೋದನ್ನ ಹೈಕಮಾಂಡ್ ತೀರ್ಮಾನಿಸುತ್ತೆ. ಆದರೆ ಸಿದ್ಧರಾಮಯ್ಯ ಮತ್ತು ಡಿಕೆಶಿ ಚುನಾವಣೆಗೆ ಸ್ಪರ್ಧಿಸಬಾರದೆನ್ನೋದು ಸಂತೊಷ್ ಲಾಡ್ ವೈಯಕ್ತಿಕ ಹೇಳಿಕೆ ಎಂದು ಉಗ್ರಪ್ಪ ಹೇಳಿದ್ರು.
ಸಚಿವ ಶ್ರೀರಾಮುಲು ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ
ಸಚಿವ ಶ್ರೀರಾಮುಲು ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ. ರಾಮುಲು ನಮ್ಮ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರ ಬಗ್ಗೆ ಬಹಳ ಮಾತಾಡ್ತಿದಾರೆ. ರಾಮುಲು ವಿರುದ್ಧ ನಾನೇ ನಿಲ್ತೀನಿ ಎಂದು ಹೇಳಿದ್ದೆ. ನಮ್ಮ ಪಕ್ಷ ನಮಗೆ ಅವಕಾಶ ನೀಡಿದ್ರೆ ನಾನೇ ನಿನ್ನ ವಿರುದ್ದ ನಿಲ್ತೀನಿ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡ್ತೇನೆ. ಮೊಳಕಾಲ್ಮೂರ್ ಗೆ ಬಾ ಎಂದು ಉಗ್ರಪ್ಪ ಸವಾಲ್ ಹಾಕಿದರು. ರಾಮುಲು ಬೇಲ್ ಮೇಲ್ ಇದೆಯಲ್ಲಪ್ಪ. ನಿಮ್ಮ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. ಆದರೂ ಇಷ್ಟು ಮಾತಾಡ್ತೀಯಾ ಎಂದು ಉಗ್ರಪ್ಪ ಕಿಡಿಕಾರಿದರು.
ಮಹಾ ಗಡಿ ಕ್ಯಾತೆಗೆ ಸೊಪ್ಪು ಹಾಕಬಾರದು-ಎಚ್.ಕೆ.ಪಾಟೀಲ್
ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ ಯಥಾ ಸ್ಥಿತಿ ಇಲ್ಲವೇ ಮಹಾಜನ್ ವರದಿ ಜಾರಿ ಅನ್ನೋದು ನಮ್ಮ ಅಂತಿಮ ನಿಲುವು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇದು ಕರ್ನಾಟಕದ ಮಹಾಜನತೆಯ ನಿಲುವು ಕೂಡ ಹೌದು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಅನ್ನೋದಕ್ಕೆ ದಾರಿಯೇ ಇಲ್ಲ. ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುತ್ತೇವೆ ಅಂತ ಹೇಳೋದು ಸರಿಯಲ್ಲ ಎಂದು ಹೇಳಿದ್ರು.
ಇದನ್ನೂ ಓದಿ: Border Dispute: 'ಮಹಾ' ಪುಂಡಾಟದ ವಿರುದ್ಧ ಕನ್ನಡಿಗರ ಆಕ್ರೋಶ, ಬೆಳಗಾವಿಯಲ್ಲಿ ಮಹಾರಾಷ್ಟ್ರ ಬಸ್ಗೆ ಕಪ್ಪು ಮಸಿ!
ಕರ್ನಾಟಕದ ರಾಜ್ಯಪಾಲರು ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತಾಡೋದು ತಪ್ಪು. ರಾಜ್ಯಪಾಲರಿಗೆ ಗಡಿ ವಿಚಾರದಲ್ಲಿ ಮಾತಾಡಲು ಅವಕಾಶ ಕೊಟ್ಟಿದ್ದು ಯಾರು? ಯಾವ ಕಾರಣಕ್ಕೆ ರಾಜ್ಯಪಾಲರನ್ನು ಮಾತುಕತೆ, ಸಮಾಲೋಚನೆಗೆ ಕಳಿಸಿದ್ರು ಅಂತ ರಾಜ್ಯ ಸರ್ಕಾರ ಸ್ಪಷ್ಟನೆ ಕೊಡಬೇಕು. ಗಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹಾರಾಷ್ಟ್ರದ ವಾದವನ್ನು ತಿರಸ್ಕಿರಿಸಿದೆ. ರಾಜ್ಯ ಸರ್ಕಾರ ಬಹಳ ಜವಾಬ್ದಾರಿಯಿಂದ ವರ್ತಿಸಬೇಕು.
ಗಡಿ ವಿಚಾರವಾಗಿ ಮಂತ್ರಿ ನೇಮಿಸಿ
ಗಡಿ ವಿಚಾರವಾಗಿ ಒಬ್ಬ ಮಂತ್ರಿಯನ್ನು ನೇಮಕ ಮಾಡಬೇಕು. ಮಹಾರಾಷ್ಟ್ರದ ಹೇಳಿಕೆಗಳಿಗೆ ಉತ್ತರ ಕೊಡಲು ಒಂದು ಇಲಾಖೆ ಸದ್ಯದಲ್ಲೇ ಬೇಕು. ಗಡಿ ವಿಚಾರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ನಿಲುವು ಇರಲ್ಲ, ಗಡಿ ವಿಚಾರದಲ್ಲಿ ರಾಜ್ಯಗಳ ನಿಲುವು ಮುಖ್ಯವಾಗುತ್ತೆ. ನನ್ನ ಜೊತೆ ಬಹಳ ಜನ ಬಿಜೆಪಿ ಮಾಜಿ ಶಾಸಕರು ಸಂಪರ್ಕದಲ್ಲಿ ಇದ್ದಾರೆ. ಹಾಗಂತ ನಾವು ಆಪರೇಷನ್ ಹಸ್ತ ಮಾಡಲ್ಲಾ. ಬಹಿರಂಗವಾಗಿ ಚರ್ಚಿಸಲ್ಲ, ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ