ವಿಜಯಪುರ/ ಹಾವೇರಿ; ಇವತ್ತು ಸಿಂದಗಿ ಮತ್ತು ಹಾನಗಲ್ (Sindagi, Hangal By Election) ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ. ಬೆಳಗ್ಗೆ ನೀರಸವಾಗಿ ಮತದಾನ ಕಂಡು ಬಂದ್ರೂ 10 ಗಂಟೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸುತ್ತಿದ್ದಾರೆ. ಗಂಟೆಯಿಂದ ಗಂಟೆಗೆ ಶೇಕಡಾವಾರು ಮತದಾನ ಪ್ರಮಾಣ ಸಹ ಏರಿಕೆಯಾಗುತ್ತಿದೆ. ಜೊತೆಗೆ ಮತದಾನ (Voting)ಕೇಂದ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಹಾನಗಲ್ ವಿಧಾನಸಭಾ ಕ್ಷೇತ್ರದ ಮೂರು ಬೂತ್ ಗಳಲ್ಲಿ ಇವಿಎಂ ಯಂತ್ರ (EVM) ಕೈಕೊಟ್ಟ ಪರಿಣಾಮ ಮತದಾನ ತಡವಾಗಿ ಆರಂಭವಾಯ್ತು. ಇನ್ನುಳಿದಂತೆ ಎರಡೂ ಕ್ಷೇತ್ರಗಳ ಎಲ್ಲ ಬೂತ್ ಗಳಲ್ಲಿ ಮತದಾನ ನಡೆಯುತ್ತಿದೆ. ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಮತ್ತು ಚಿಹ್ನೆ ಮತ ಸಂಖ್ಯೆ ಚೀಟಿ ನೀಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ಗಲಾಟೆ ನಡೆಸಿದ್ದರು. ಘಟನಾ ಸ್ಥಳಕ್ಕಾಗಮಿಸಿದ ಚುನಾವಣಾ ಅಧಿಕಾರಿಗಳು (Election Officers) ಹಂಚುತ್ತಿದ್ದ ಗುರುತಿನ ಚೀಟಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲಕಾಲ ಮತಗಟ್ಟೆ ವ್ಯಾಪ್ತಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಅಭ್ಯರ್ಥಿಗಳಿಂದ ಮತದಾನ
ಸಿಂದಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು, ಕುಟುಂಬ ಸಮೇತರಾಗಿ ಹನುಮಾನ್ ಮತ್ತು ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಮಾತನಾಡಿದ ರಮೇಶ್ ಭೂಸನೂರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಚುನಾವಣೆಯಲ್ಲಿ ನಾನು ಸೋತಿದಕ್ಕೆ ಜನರು ಈ ಬಾರಿ ನನ್ನ ಮೇಲೆ ಅನುಕಂಪ ತೋರಿಸಿ ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್ ನವರ ಅನುಕಂಪ ಈ ಬಾರಿ ವರ್ಕೌಟ್ ಆಗೋದಿಲ್ಲ. ಕಳೆದ ಬಾರಿಯೆ ಎಂ ಸಿ ಮನಗೋಳಿಯವರು ಕೊನೆ ಚುನಾವಣೆ ಅಂತಾ ಅನುಕಂಪ ಗಿಟ್ಟಿಸಿಕೊಂಡು ಆಯ್ಕೆಯಾಗಿದ್ದರು. ಆದ್ರೆ ಈ ಬಾರಿ ಜನ ಬಿಜೆಪಿ ಪರ ಒಲವು ತೋರಿದ್ದಾರೆ ಗೆದ್ದು ಬಂದ ಮೇಲೆ ಕ್ಷೇತ್ರದ ಅಭಿವೃದ್ಧಿಯೆ ನನ್ನ ಮೊದಲ ಗುರಿ ಎಂದು ಹೇಳಿದರು.
ತದನಂತರ ಕುಟುಂಬ ಸಮೇತರಾಗಿ ಆಗಮಿಸಿದ ರಮೇಶ್ ಭೂಸನೂರು ಸಿಂದಗಿ ತಾಲ್ಲೂಕಿನ ದೇವಣಗಾಂವ್ ಗ್ರಾಮದ ಸರ್ಕಾರಿ ಶಾಲೆಯ ವಾರ್ಡ್ ನಂಬರ್ 9 ರಲ್ಲಿ ಮತದಾನ ಮಾಡಿದರು. ಇನ್ನು ಜೆಡಿಎಸ್ ಅಭ್ಯರ್ಥಿ ನಾಜೀಯಾ ಅಂಗಡಿ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಗಣಿಗಾರದ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ
ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಹಾನಗಲ್ ನ ಶ್ರೀ ಕುಮಾರೇಶ್ವರ ಸರ್ಕಾರಿ ಪದವಿ ಕಾಲೇಜಿನಲ್ಲಿರುವ ಮತಗಟ್ಟೆ ಸಂಖ್ಯೆ 89 ರಲ್ಲಿ ಹಕ್ಕು ಚಲಾಯಿಸಿದರು. ಬೆಲೆಯೇರಿಕೆ ಇತ್ಯಾದಿಗಳ ಕಾರಣದಿಂದಾಗಿ ಜನ ಬೇಸತ್ತಿದ್ದಾರೆ ಮುಖ್ಯಮಂತ್ರಿ ಆದಿಯಾಗಿ ಬಹಳಷ್ಟು ಸಚಿವರು ಇಲ್ಲಿ ಪ್ರಚಾರ ಮಾಡಿ ಹೋಗಿದ್ದಾರೆ. ಆದರೆ ನಾನು ಮಾಡಿದ ಕೆಲಸ ನನ್ನ ಕೈ ಹಿಡಿಯಲಿದೆ ಖಂಡಿತ ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .
ಇದನ್ನೂ ಓದಿ: Puneeth Rajkumar: ಕರುನಾಡಿನ ಮುಖಪುಟದಂತಿದ್ದ ಸಜ್ಜನ ಕಣ್ಮರೆ... ಸರ್ಕಾರಿ ಜಾಹೀರಾತುಗಳಿಗೆ ಅಪ್ಪುನೇ ಬೇಕಿತ್ತು
ಸಂಸದ ಶಿವಕುಮಾರ್ ಉದಾಸಿ ತಾಯಿ, ಪತ್ನಿ ಸೇರಿದಂತೆ ಕುಟುಂಬ ಸಮೇತ ಬಂದು ಹಾನಗಲ್ ಪಟ್ಟಣದ ಜನತಾ ಗರ್ಲ್ಸ್ ಹೈಸ್ಕೂಲ್ ಅವರಣದಲ್ಲಿರುವ ಮತಗಟ್ಟೆ ಸಂಖ್ಯೆ 97ಎ ರಲ್ಲಿ ಹಕ್ಕು ಚಲಾಯಿಸಿದರು.
ಸಿಂದಗಿಯಲ್ಲಿ ಗೌಪ್ಯ ಮತದಾನ ಬಹಿರಂಗ
ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಗೌಪ್ಯ ಮತದಾನ ಬಹಿರಂಗಪಡಿಸಲಾಗಿದೆ.ಮತದಾನ ವೇಳೆ ಮತದಾರರು ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ಮತ ಹಾಕಿರುವ ಫೋಟೋ ಮತ್ತು ಜೆಡಿಎಸ್ ಗೆ ಮತ ಹಾಕಿರುವ ವಿಡಿಯೋ ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿವೆ.
ಎರಡೂ ಕ್ಷೇತ್ರದ ಅಭ್ಯರ್ಥಿಗಳು
ಸಿಂದಗಿಯಲ್ಲಿ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಬಿಜೆಪಿಯಿಂದ ರಮೇಶ್ ಭುಸನೂರು ಮತ್ತು ಜೆಡಿಎಸ್ ನಿಂದ ನಾಜೀಯಾ ಅಂಗಡಿ ಕಣದಲ್ಲಿದ್ದಾರೆ. ಇತ್ತ ಹಾನಗಲ್ ನಲ್ಲಿ ಕಾಂಗ್ರೆಸ್ ನಿಂದ ಶ್ರೀನಿವಾಸ್ ವಿ ಮಾನೆ, ಬಿಜೆಪಿಯಿಂದ ಶಿವರಾಜ್ ಸಜ್ಜನ್ ಮತ್ತು ಜೆಡಿಎಸ್ ನಿಂದ ನಿಯಾಜ್ ಶೇಕ್ ಸ್ಪರ್ಧೆಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ