ಭಾರತೀಯ ಚುನಾವಣಾ ಪ್ರಾಧಿಕಾರವು ಸುವಿಧಾ ಪೋರ್ಟಲ್ (Suvidha portal) ಹಾಗೂ ಸಕ್ಷಮ ಆಪ್ ಅನ್ನು ಅನುಷ್ಠಾನಗೊಳಿಸಿದ್ದು ಮತದಾರರು ಹಾಗೂ ಅಭ್ಯರ್ಥಿಗಳು ಇದರ ಬಳಕೆಯನ್ನು ಮಾಡಬಹುದಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದೆ. ಮೇ ನಲ್ಲಿ ನಡೆಯಬೇಕಾಗಿರುವ ಚುನಾವಣೆಗಾಗಿ ರಾಜ್ಯವು ಸಜ್ಜಾಗುತ್ತಿದೆ ಎನ್ನಬಹುದು. ಈ ನಡುವೆ ಈಗ ಕರ್ನಾಟಕದಲ್ಲಿ ಪ್ರಸ್ತುತ 12.15 ಲಕ್ಷ ಸಂಖ್ಯೆಗಳಷ್ಟು ಎಂಬತ್ತು ಮೀರಿದ ವಯೋಮಾನದವರು ಹಾಗೂ 5.5 ಲಕ್ಷದಷ್ಟು ವಿಕಲ ಚೇತನರು ತಮ್ಮ ಮನೆಯಿಂದಲೇ ಕುಳಿತು ಮತ ಚಲಾವಣೆ ಮಾಡುವ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ಶನಿವಾರದಂದು ಮಾತನಾಡಿರುವ ಮುಖ್ಯ ಚುನಾವಣಾ ಅಧಿಕಾರಿಯಾದ ರಾಜೀವ್ ಕುಮಾರ್ (Rajiv Kumar) ಅವರು, "ಅವರು ನಿಗದಿಪಡಿಸಲಾಗಿರುವ 12D ಅರ್ಜಿಯನ್ನು ತುಂಬಿ ಮನೆಯಿಂದಲೇ ಮತದಾನದ (Vote) ಹಕ್ಕನ್ನು ಚಲಾಯಿಸಬಹುದಾಗಿದೆ.
ಈ ಪ್ರಕ್ರಿಯೆಯು ಪಾರದರ್ಶಕವಾಗಿರಲಿದೆ ಹಾಗೂ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿರುವುದರಿಂದ ಗೌಪ್ಯತೆಯನ್ನೂ ಸಹ ಕಾಪಾಡಿ ಕೊಳ್ಳಲಾಗುವುದು. ಚುನಾವಣಾ ದಿನಾಂಕ ನಿಗದಿಯಾದ ಐದು ದಿನಗಳಲ್ಲೇ ಈ ಅರ್ಜಿಗಳನ್ನು ಲಭ್ಯವಾಗುವಂತೆ ಮಾಡಲಾಗುವುದು" ಎಂದು ಹೇಳಿದರು.
ಮುಂದುವರೆಯುತ್ತ ಅವರು, "ಇದೇ ಮೊದಲ ಬಾರಿಗೆ ನಾವು 12.15 ಲಕ್ಷ ಸಂಖ್ಯೆಗಳಷ್ಟು ಎಂಬತ್ತು ಮೀರಿದ ವಯೋಮಾನದವರಿಗೆ ಹಾಗೂ 5.5 ಲಕ್ಷದಷ್ಟು ವಿಕಲ ಚೇತನರಿಗೆ ಈ ಸೌಲಭ್ಯ ಕಲ್ಪಿಸುತ್ತಿದ್ದು ಅವರೆಲ್ಲರೂ ಈ ಸೌಲಭ್ಯದ ಲಾಭ ಪಡೆಯುತ್ತ ಮನೆಯಿಂದಲೇ ತಮ ಮತ ಹಾಕಬಹುದಾಗಿದೆ. ಇನ್ನು ವಿವಿಧ ಕಾರಣಾಂತರಗಳಿಂದ ಮತಗಟ್ಟೆಗೆ ಬಾರಲಾರದವರು ಮತಗಟ್ಟೆ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಮನೆಯಿಂದಲೇ ಮತದಾನದ ಹಕ್ಕನ್ನು ಚಲಾಯಿಸಬಹುದಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಮತ್ತೊಬ್ಬ ಬಿಜೆಪಿ ಸಚಿವನಿಗೆ ಹೆದರಿಸ್ತಿದ್ದಾರೆ ಡಿಕೆಶಿ, ಮತ್ತೊಂದು ಬಾಂಬ್ ಸಿಡಿಸಿದ ಸಾಹುಕಾರ್!
ಎಲ್ಲ ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಈ ರೀತಿ ಮತದಾನಕ್ಕಾಗಿ ನೋಂದಣಿ ಮಾಡಿಸಿದ ಬಗ್ಗೆ ಮುಂಚಿತವಾಗಿಯೇ ಗಮನಕ್ಕೆ ತರಲಾಗುವುದು. ಈ ಮೂಲಕ ಯಾವುದೇ ಗೊಂದಲ ಸಂದೇಹ ಉಂಟಾಗದಂತೆ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಕುಮಾರ್ ಹೇಳಿದರು.
ಇನ್ನು ರಾಜ್ಯ ಚುನವಾಣೆಗಾಗಿ ಯಾವ ರೀತಿ ಸಜ್ಜಾಗುತ್ತಿದೆ ಎಂಬುದರ ಬಗ್ಗೆ ವಿವರ ನೀಡಿದ ಚುನಾವಣ ಆಯುಕ್ತರುಗಳಾದ ಅನುಪ್ ಚಂದ್ರ ಪಾಂಡೆ ಹಾಗೂ ಅರುಣ ಗೋಯಲ್ ಅವರು, ರಾಜ್ಯದಲ್ಲಿ 58,282 ಮತಗಟ್ಟೆಗಳಿದ್ದು ಎಲ್ಲ ಮತಗಟ್ಟೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವಿವಿಧ ಮೂಲಸೌಕರ್ಯಗಳನ್ನು ಒದಗಿಸಲಾಗುವುದಾಗಿ ಹೇಳಿದರು.
ರಾಜ್ಯವು 224 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಇವುಗಳ ಪೈಕಿ 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ 15 ಕ್ಷೇತ್ರಗಳು ಪ.ಪಂಗಡಕ್ಕೆ ಮೀಸಲಾಗಿವೆ. ಇನ್ನು ರಾಜ್ಯದಲ್ಲಿ ಮತ ಚಲಾಯಿಸುವವರ ಸಂಖ್ಯೆಯನ್ನು ಗಮನಿಸುವುದಾದರೆ ರಾಜ್ಯವು ಒಟ್ಟು 5,21,76,579 ಮತದಾರರನ್ನು ಹೊಂದಿದ್ದು ಇದರಲ್ಲಿ 2,62,42,561 ಸಂಖ್ಯೆಗಳಷ್ಟು ಮಹಿಳಾ ಮತದಾರರಿದ್ದರೆ 2,59,26,319 ರಷ್ಟು ಪುರುಷ ಮತದಾರರಿದ್ದಾರೆ ಹಾಗೂ 41,312 ರಷ್ಟು ತೃತೀಯ ಲಿಂಗಿ ಮತದಾರರಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ, 5,55,073 ರಷ್ಟು ವಿಕಲ ಚೇತನರು, 12,15,763 ರಷ್ಟು ಜನರು 80ರ ಪ್ರಾಯದವರು ಹಾಗೂ 16,976 ನೂರರ ಪ್ರಾಯವನ್ನು ದಾಟಿದ ಹಿರಿಯರು ನೋಂದಾಯಿತರಾಗಿದ್ದಾರೆ. ಈ ಬಾರಿ 9,17,241 ರಷ್ಟು ಜನರು ಮೊದಲ ಬಾರಿ ಮತದಾನಕ್ಕೆ ಕಾಲಿಡಲಿದ್ದಾರೆ (18-19 ವಯೋಮಾನದವರು). ನಗರ ಪ್ರದೇಶಗಳಲ್ಲಿನ 24063 ಮತಗಟ್ಟೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 58,272 ಮತಗಟ್ಟೆಗಳಿವೆ.
ಈಗಾಗಲೇ ಭಾರತೀಯ ಚುನಾವಣಾ ಪ್ರಾಧಿಕಾರವು ಮತದಾನವು ಯಾವ ಅಡೆ-ತಡೆ, ಗೊಂದಲಗಳಿಲ್ಲದ ಸರಾಗವಾಗಿ ಸಾಗಬೇಕೆಂಬ ದೃಷ್ಟಿಯಿಂದ ಸುವಿಧಾ ಎಂಬ ವೆಬ್ ಪೋರ್ಟಲ್ ಹಾಗೂ ಸಕ್ಷಮ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಿ ಚಾಲನೆ ನೀಡಿದೆ. ಈ ಎರಡೂ ಸೌಲಭ್ಯಗಳನ್ನು ಮತದಾರರು ಹಾಗೂ ಅಭ್ಯರ್ಥಿಗಳು ಬಳಸಬಹುದಾಗಿದೆ.
ಇನ್ನು ಚುನಾವಣಾ ಅಭ್ಯರ್ಥಿಗಳು ಈ ಸೌಲಭ್ಯ ಬಳಸಿಕೊಂಡು ತಮ್ಮ ಆನ್ಲೈನ್ ಮೂಲಕ ತಮ್ಮ ಅಫಿಡವಿಟ್ ಅಪ್ಲೋಡ್ ಮಾಡಿ ಚುನಾವಣಾ ರ್ಯಾಲಿಗಳಿಗಾಗಿ ಅನುಮತಿಯನ್ನು ಕೋರಬಹುದಾಗಿದೆ. ಈ ಸಂದರ್ಭದಲ್ಲಿ "ಮೊದಲು ಬಂದವರಿಗೆ ಮೊದಲ ಆದ್ಯತೆ" ಎಂಬ ನೀತಿಯಡಿಯಲ್ಲಿ ಅನುಮತಿಯನ್ನು ನೀಡಲಾಗುವುದಾಗಿ ಕುಮಾರ್ ಹೇಳಿದರು.
ಪ್ರಸ್ತುತ ರಾಜ್ಯ ಸರ್ಕಾರದ ಅವಧಿಯು ಮೇ 24 ರಂದು ಮುಕ್ತಾಯವಾಗಲಿದೆ ಹಾಗೂ ಅಲ್ಲಿಯ ತನಕ ರಾಜ್ಯದಲ್ಲಿ ಚುನಾವಣೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿರಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಕುಮಾರ್ ಈ ಸಂದರ್ಭದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ