ಬೆಂಗಳೂರು (ಡಿ. 1): ತಮ್ಮನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಪೊಲೀಸರಿಗೆ ನಿನ್ನೆ ದೂರು ನೀಡಿದ್ದರು. ಇಂದು ಖುದ್ದು ಮಾಧ್ಯಮಗಳ ಮುಂದೆ ವರ್ತೂರು ಪ್ರಕಾಶ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ, ನಡೆದ ಘಟನೆಯನ್ನು ವಿವರಿಸಿದ್ದಾರೆ. ಹಾಗೇ, ತಮಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಕೋಲಾರದಲ್ಲಿ ನಾಲ್ಕೈದು ಮದುವೆ ಇತ್ತು. ಹೀಗಾಗಿ, ನಾನು ಫಾರ್ಮ್ ಹೌಸ್ನಿಂದ ಹೋಗುತ್ತಿರುವಾಗ 8 ಜನ ಬಂದು ನನ್ನ ಕಾರಿನ ಮೇಲೆ ಅಟ್ಯಾಕ್ ಮಾಡಿದರು. ಕಾರಿನ ಬಾಗಿಲು ತೆಗೆದು ನನಗೆ ಮಂಕಿ ಕ್ಯಾಪ್ ಹಾಕಿದರು. ನಮ್ಮ ಕಾರಿನ ಡ್ರೈವರ್ಗೆ ಮಚ್ಚಿನಲ್ಲಿ ಹೊಡೆದರು. ನಾಲ್ಕು ಗಂಟೆ ಕಾರಲ್ಲೇ ಇದ್ದರು. ನನ್ನ ತಲೆಗೆ ರಾಡ್ ನಲ್ಲಿ ಹೊಡೆದರು. 30 ಕೋಟಿ ರೂ. ಕೊಡುವಂತೆ ಟಾರ್ಚರ್ ಕೊಟ್ಟರು. ನಂತರ ಕಾಡಿಗೆ ಕರೆದೊಯ್ದು ಮೂರು ಗಂಟೆಯವರೆಗೂ ಹೊಡೆದರು ಎಂದು ನಡೆದ ಘಟನೆಯನ್ನು ವರ್ತೂರು ಪ್ರಕಾಶ್ ವಿವರಿಸಿದ್ದಾರೆ.
ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್ರನ್ನು ಅಪಹರಿಸಿ 30 ಕೋಟಿ ಹಣಕ್ಕಾಗಿ ಬೇಡಿಕೆ; ಪ್ರಕರಣ ದಾಖಲು
ಅಲ್ಲಿಂದ ನನ್ನನ್ನು ಬೇರೆ ಜಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿ ಕೂಡ ನನ್ನ ಮುಖಕ್ಕೆ ಹಾಕಿದ್ದ ಮಂಕಿ ಕ್ಯಾಪ್ ತೆಗೆಯಲಿಲ್ಲ. ಅವರ ಹಿಂಸೆ ತಾಳಲಾರದೆ ಕೋಲಾರದ ಸ್ನೇಹಿತರಿಗೆ ಕರೆ ಮಾಡಿ 50 ಲಕ್ಷ ರೂ. ತಲುಪಿಸಿದೆ. ನನ್ನ ಮೊಬೈಲ್ ಆನ್ ಮಾಡಿಯೇ ಇಟ್ಟಿದ್ದರು. ನಾನು ಕಿಡ್ನಾಪ್ ಆಗಿದ್ದೇನೆ ಎಂದು ನಮ್ಮ ಕುಟುಂಬಸ್ಥರಿಗೆ ಅನುಮಾನ ಬಾರದಂತೆ ನೋಡಿಕೊಂಡರು. ಯಾರಿಗಾದರೂ ಈ ವಿಷಯ ಹೇಳಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು ಎಂದು ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ಡ್ರೈವರ್ ತಲೆಗೆ ಮಚ್ಚಿನಲ್ಲಿ ಹೊಡೆದಿದ್ದರಿಂದ ಅವನು ಕೆಳಗೆ ಬಿದ್ದ. ನಂತರ ಅವನು ಪೊದೆಯಲ್ಲಿ ಬಚ್ಚಿಟ್ಟುಕೊಂಡು ಪರಾರಿಯಾದ. ಕೊನೆಗೆ ಶಿವನಾಪುರದ ಹೈಸ್ಕೂಲ್ ಗ್ರೌಂಡ್ನಲ್ಲಿ ನನ್ನನ್ನು ಬಿಟ್ಟು ಅಪಹರಣಕಾರರು ಎಸ್ಕೇಪ್ ಆದರು. ಕೊಲೆ ಬೆದರಿಕೆ ಹಾಕಿದ್ದರಿಂದ ನಾನು ತುಂಬ ಭಯ ಪಟ್ಟಿದ್ದೆ. ಸೋಮವಾರ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದೆ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.
ಇದನ್ನೂ ಓದಿ: Varthur Prakash: ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ; ಪೊಲೀಸರಿಂದ 3 ಆಯಾಮದಲ್ಲಿ ತನಿಖೆ ಶುರು
ನಾನು ಯಾವುದೇ ವ್ಯವಹಾರಗಳನ್ನೂ ಮಾಡಿಲ್ಲ. ಅದೆಲ್ಲವೂ ಕಟ್ಟುಕತೆ. ನನಗೆ ಒಂದು ಲಕ್ಷ ರೂ. ಸಾಲವೂ ಇಲ್ಲ. ಇದು ಬೇರೆ ರಾಜ್ಯದವರು ಮಾಡಿದ ಕೃತ್ಯವಲ್ಲ. ಬೆಂಗಳೂರಿನ ಅಪಹರಣಕಾರರೇ ಮಾಡಿರುವ ಕೆಲಸ. ನನಗೆ ಯಾರೊಂದಿಗೂ ರಾಜಕೀಯ ದ್ವೇಷ ಇಲ್ಲ. ಇದು ಯಾರೋ ದುಡ್ಡಿಗೋಸ್ಕರ ಮಾಡಿರೋ ಕೆಲಸ ಎಂದು ವರ್ತೂರು ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ