ಬೆಂಗಳೂರು(ಜ.29): ವಾಲ್ಮೀಕಿ ನಾಯಕ ಸಮಾಜದ ಮುಖಂಡ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಅಭಿಯಾನ ಶುರುವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಬಂದರೆ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಗೃಹ ಸಚಿವ ಅಮಿತ್ ಶಾ ವಚನ ನೀಡಿದ್ದರು. ಆದರೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುಮಾರು 80 ಕ್ಷೇತ್ರಗಳಲ್ಲಿ ಶ್ರೀರಾಮುಲು ಅವರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಂಡಿತ್ತು. ಅಂದು ನಾಯಕ ಸಮುದಾಯದ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುತ್ತೇವೆ ಎಂದು ಬಿಜೆಪಿ ಮಾತು ಕೊಟ್ಟಿತ್ತು. ಈ ಮಾತನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಹೀಗೆ ವಾಲ್ಮೀಕಿ ಸಮುದಾಯನ್ನು ಎದುರು ಹಾಕಿಕೊಂಡರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಶ್ರೀಮುಲು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಶ್ರೀರಾಮುಲು ಕರ್ನಾಟಕದ ವಾಲ್ಮೀಕಿ ನಾಯಕ ಜನಾಂಗದ ಶೇ. 80ರಷ್ಟು ಮತಗಳ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ನಾಯಕನಿಗೆ ಬಿಜೆಪಿ ಸರ್ಕಾರ ಡಿಸಿಎಂ ಸ್ಥಾನ ನೀಡದಿರುವುದು ಬೇಸರದ ಸಂಗತಿ ಎಂದು ಸಾಮಾಜಿಕ ಜಾಲತಾಣದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಕಿಡಿಕಾರಿದ್ದಾರೆ.
ಇನ್ನು, ಸಿಎಂ ಬಿಎಸ್ ಯಡಿಯೂರಪ್ಪ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿ ಸಾಧ್ಯವಿಲ್ಲ ಎನ್ನುವ ಮೂಲಕ ವಾಲ್ಮೀಕಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಿಎಂ ಹೇಳಿಕೆ ಶ್ರೀರಾಮುಲು ಅಥವಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗಾಗಲೀ ಡಿಸಿಎಂ ಪೋಸ್ಟ್ ನೀಡಲಾಗುವುದಿಲ್ಲ ಎಂಬುದನ್ನು ಖಾತ್ರಪಡಿಸಿದೆ. ಆದ್ದರಿಂದ ವಾಲ್ಮೀಕಿ ಸಮಾಜದ ಮುಖಂಡರು ನಾಳೆ ಬಿ.ಎಸ್ ಯಡಿಯೂರಪ್ಪರನ್ನು ಭೇಟಿಯಾಗಲು ಮುಂದಾಗಿದ್ದಾರೆ.
ಕಳೆದ ಬಾರಿಯ ಉಪಚುನಾವಣೆಗೆ ಮುನ್ನ ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆ ಇದೆ ಎಂಬಂತಹ ಸುದ್ದಿ ದಟ್ಟವಾಗಿ ಹರಿದಾಡುತ್ತಿತ್ತು. ಪಕ್ಷದೊಳಗೂ ಕೂಡ ಶ್ರೀರಾಮುಲುಗೆ ಡಿಸಿಎಂ ಭಾಗ್ಯ ಕರುಣಿಸಲು ಬೆಂಬಲವಿತ್ತು. ಆದರೆ, ಚುನಾವಣೆ ಬಳಿಕ ಬಿಜೆಪಿಗೆ ಅಧಿಕಾರ ಸಿಗಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆ ಬಳಿಕ ಮೈತ್ರಿ ಪಾಳಯದಿಂದ 17 ಶಾಸಕರು ರಾಜೀನಾಮೆ ನೀಡುವುದರೊಂದಿಗೆ ಮೈತ್ರಿ ಸರ್ಕಾರ ಬಿದ್ದುಹೋಗಿ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗಲೂ ಕೂಡ ಶ್ರೀರಾಮುಲುಗೆ ಡಿಸಿಎಂ ಸ್ಥಾನ ಖಚಿತವೆಂಬ ಮಾತುಗಳು ಕೇಳಿಬಂದವು. ಅಚ್ಚರಿ ಎಂದರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲೇ ಇಲ್ಲ.
ಇದನ್ನೂ ಓದಿ: ನಾವೆಲ್ಲಾ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು - ಆದ್ರೆ ನಾನು ಡಿಸಿಎಂ ಆಗ್ಬೇಕಂತ ಜನರ ಅಪೇಕ್ಷೆ ; ಶ್ರೀರಾಮುಲು ಪುನರುಚ್ಚಾರ
ಶ್ರೀರಾಮುಲುಗೆ ಡಿಸಿಎಂ ಸ್ಥಾನ ಕೈತಪ್ಪಲು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಯೇ ಕಾರಣ ಎಂಬುದು ಬಿಜೆಪಿ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯಾಗಿದೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಆಪರೇಷನ್ ಕಮಲದ ಮೂಲ ಬಿಂದುವೇ ರಮೇಶ್ ಜಾರಕಿಹೊಳಿ. ಮೈತ್ರಿಪಕ್ಷಗಳಿಂದ ಶಾಸಕರನ್ನು ಒಗ್ಗೂಡಿಸಲು ಅವರೇ ಮುಂದಾಳತ್ವ ವಹಿಸಿದ್ದರು. ಈ ಕಾರ್ಯಕ್ಕಾಗಿ ರಮೇಶ್ ಜಾರಕಿಹೊಳಿ ಅವರು ಬಿಎಸ್ವೈ ಸಂಪುಟದಲ್ಲಿ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಇದಕ್ಕೆ ಯಡಿಯೂರಪ್ಪ ಕೂಡ ಒಪ್ಪಿದ್ದರು.
ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಇಬ್ಬರೂ ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಮುಖಂಡರೇ ಅಗಿದ್ದಾರೆ. ಇಬ್ಬರಿಗೂ ಡಿಸಿಎಂ ಹುದ್ದೆ ನೀಡಲು ಅಸಾಧ್ಯ. ಬಿಎಸ್ವೈ ಇದಕ್ಕೆ ಒಪ್ಪಿದರೂ ಹೈಮಾಂಡ್ನಿಂದ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇರಲಿಲ್ಲ. ರಮೇಶ್ ಜಾರಕಿಹೊಳಿಗೆ ಕೊಟ್ಟ ಮಾತನ್ನು ಮೀರಿ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡಲು ಸಾಧ್ಯವಿಲ್ಲ. ಹೀಗಾಗಿಯೇ, ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಒಲಿಯಲಿಲ್ಲವೆನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ