ದಾವಣಗೆರೆ: ಇತ್ತೀಚೆಗಷ್ಟೇ ಶಾಸಕ ಬಸನಗೌಡ ಪಾಟೀಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಅವರಿಂದ ಹರಿಹರ ಶ್ರೀಗಳು ರೂ. 10 ಕೋಟಿ ಹಣ ವಸೂಲು ಮಾಡಿದ್ದಾರೆ. ಮಠದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂದು ಹಣ ಪಡೆದಿದ್ದಾರೆ. ಮಠದಲ್ಲಿ ಹಣದ ವಿಚಾರದಲ್ಲಿ ಬಹಳ ಅವ್ಯವಹಾರ ಮಾಡಿದ್ದಾರೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ (Belgavi Session) ಅವ್ಯವಹಾರದ ಬಗ್ಗೆ ಚರ್ಚೆ ಮಾಡಿ, ಮುಂದಿನ ದಿನಗಳಲ್ಲಿ ವಚನಾನಂದ ಶ್ರೀಗಳ (Vachanananda Swamiji) ಬಣ್ಣ ಬಯಲು ಮಾಡುತ್ತೇನೆ ಎಂದಿದ್ದರು. ಇದೀಗ ಯತ್ನಾಳ್ (Basana gouda patil yatnal) ಆರೋಪಕ್ಕೆ ವಿರುದ್ಧ ಸಿಡಿದೆದ್ದಿರುವ ಹರಿಹರ ಪಂಚಮಸಾಲಿ ಪೀಠದ ವಚನನಾಂದ ಶ್ರೀಗಳು ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ, ಯಾರು ಈ ರೀತಿ ಹೇಳಿಕೆ ನೀಡಿದ್ದಾರೋ ಅಂತವರನ್ನುತನಿಖೆಗೆ ಒಳಪಡಿಸಬೇಕು ಎಂದು ಕಿಡಿಕಾರಿದ್ದಾರೆ.
ಯತ್ನಾಳ್ ವಿರುದ್ದ ವಚನಾನಂದ ಸ್ವಾಮೀಜಿ ಆಕ್ರೋಶ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ ಅವರು, ಐದು ವರ್ಷಗಳಾಗಿದೆ ಇದುವರೆಗೂ ನಾನು ಮಠದಲ್ಲಿ ಹಣದ ವ್ಯವಹಾರ ಮಾಡಿಲ್ಲ.
ಚಕ್ ಮೇಲೆ ಸಹಿಯಾಗಲಿ, ಹಣ ಪಡೆಯುವುದಾಗಲಿ ಮಾಡಿಲ್ಲ. ಅದಕ್ಕೆ ಅಂತನೇ ಟ್ರಸ್ಟ್ ಇದೆ, ನಾನು ಕೇವಲ ಸಮಾಜ ಸಂಘಟನೆಯಲ್ಲಿ ಇದ್ದೇನೆ. ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಯಾರು ಈ ರೀತಿ ಹೇಳಿಕೆ ನೀಡಿದ್ದಾರೋ ಅಂತವರ ಮೇಲೆ ತನಿಖೆಗೆ ಒಳಪಡಿಸಬೇಕು. ಅವರ ಹೇಳಿಕೆಯ ಸತ್ಯಾಂಶ ಹೊರಬರಬೇಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಣ್ಣ ತನ ಇಟ್ಟುಕೊಂಡವನು ಯಾವತ್ತು ದೊಡ್ಡವನಾಗುವುದಿಲ್ಲ. ದೊಡ್ಡತನ ಪ್ರದರ್ಶನ ಮಾಡಿದರೆ ಮಾತ್ರ ದೊಡ್ಡವರು ಆಗಲು ಸಾಧ್ಯ. ಕಾಮಿಡಿ ಮಾಡುವವರನ್ನು ಕಾಮಿಡಿ ಮಾಡಲು ಬಿಡಬೇಕು ಎಂದು ಪರೋಕ್ಷವಾಗಿ ಯತ್ನಾಳ್ ಗೆ ಟಾಂಗ್ ನೀಡಿದ್ದಾರೆ.
ನಮ್ಮ ಪ್ರಯತ್ನವನ್ನು ಅವರು ಲಾಭ ಮಾಡ್ಕೋತ್ತಿದ್ದಾರೆ
ಈ ಹೋರಾಟ ಶುರುವಾದಾಗ ಈಗ ಹೋರಾಟ ಮಾಡುವವರು ಎಲ್ಲಿ ಇದ್ದರು. ಆಗ ಹೋರಾಟ ಮಾಡುವ ಬದಲು ಧರ್ಮ ಹೊಡೆಯುವ ಕೆಲಸ ಮಾಡುತ್ತಿದ್ದರು. ಈಗ ನಾವು ಹೋರಾಟ ಶುರು ಮಾಡಿದ ಮೇಲೆ ಅವರು ಈಗ ಬರುತ್ತಿದ್ದಾರೆ. ನಮ್ಮ ಪ್ರಯತ್ನವನ್ನು ಅವರು ಲಾಭ (ಎನ್ಕ್ಯಾಚ್) ಮಾಡಿಕೊಂಡರು. ಪಾದಯಾತ್ರೆಯನ್ನು ಕೂಡ ಕೆಲವೊಬ್ಬರು ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದ್ದಾರೆ.
ಆದಷ್ಟು ಬೇಗ ಮೀಸಲಾತಿ ನೀಡುವಂತೆ ಮನವಿ
ಇದೇ ವೇಳೆ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಅವರು, 2 A ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದೀರ್ಘ ಚರ್ಚೆ ಆಗಿದೆ. ಆ ಸಭೆಯಲ್ಲಿ ಸಮಾಜದ ಮುಖಂಡರು ಕೂಡ ಭಾಗವಹಿಸಿದ್ದರು. ವರದಿಯನ್ನು ತರಿಸಿಕೊಂಡು ಆದಷ್ಟು ಬೇಗ ಮೀಸಲಾತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ವರದಿಯ ಸಿದ್ಧತೆಯನ್ನು ಈಗಾಗಲೇ ಜಯಪ್ರಕಾಶ್ ಹೆಗ್ಡೆಯವರು ಮಾಡುತ್ತಿದ್ದಾರೆ. ವರದಿ ಬಂದ ನಂತರ ಸರ್ವ ಪಕ್ಷ ಸಭೆ ಕರೆದು ನಿರ್ಣಯ ಮಾಡುತ್ತಾರೆ. ಈ ಸರ್ವಪಕ್ಷಗಳ ಸಭೆಯಲ್ಲಿ ಮೀಸಲಾತಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದೇವೆ. ಅವರು ಕೂಡ ನಿಮ್ಮ ಪರವಾಗಿ ನಾವು ಇರುತ್ತೇವೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ವರದಿ ಅಧಾರದ ಮೇಲೆ ಕಾನೂನಾತ್ಮಕ ತೊಡಕು ಆಗದ ರೀತಿ ಘೋಷಣೆ ಮಾಡುತ್ತಾರೆ. ಅನೇಕ ರಾಜ್ಯಗಳಲ್ಲಿ ವರದಿ ಇಲ್ಲದೇ ಘೋಷಣೆ ಮಾಡಿ ಅದು ಕಾನೂನು ತೊಡಕಾಗಿದೆ. ಆದ್ದರಿಂದ ಮೀಸಲಾತಿ ಘೋಷಣೆ ಯಲ್ಲಿ ಅತ್ಯಂತ ಮುಖ್ಯ ಎಂದರೆ ವರದಿ. 28 ವರ್ಷಗಳ ಹೋರಾಟ ಇದು ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ. ಮೀಸಲಾತಿ ಸಿಗುವ ಎಲ್ಲಾ ವಿಶ್ವಾಸ ಇದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ