ಬೆಂಗಳೂರು, ಸೆ. 17: ಹಿಂದೂ ಮತ್ತು ಮುಸ್ಲಿಮ್ ಖೈದಿಗಳನ್ನ (Hindu and Muslim Prisoners) ಒಂದೇ ಸೆಲ್ಗೆ ಹಾಕಿ. ಅವರು ಅಲ್ಲೇ ಬಡಿದಾಡಿಕೊಂಡು ಸಾಯಲಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯು ಟಿ ಖಾದರ್ (Ex Minister UT Khader) ಅವರು ಅಭಿಪ್ರಾಯಪಟ್ಟಿದ್ದಾರೆ. ವಿಧಾನಸಭೆಯಲ್ಲಿಂದು ಪೊಲೀಸ್ ಬಂಧೀಖಾನೆ ಮಂಡಳಿ ವಿಧೇಯಕ ಮಂಡನೆ ಮೇಲೆ ನಡೆದ ಚರ್ಚೆಯ ವೇಳೆ ಖಾದರ್ ಈ ಸಲಹೆ ನೀಡಿದರು. ಮಂಗಳೂರಲ್ಲಿ ಹಿಂದೂ ಮತ್ತು ಮುಸ್ಲಿಮ್ ಖೈದಿಗಳನ್ನ ಬೇರೆ ಬೇರೆ ಸೆಲ್ಗೆ ಹಾಕುತ್ತಾರೆ. ಅವರನ್ನ ಯಾಕೆ ಬೇರೆ ಸೆಲ್ಗೆ ಹಾಕೋದು? ಜೈಲಿಂದ ಹೊರಗೆ ಬಂದರೂ ಅದೇ ಮೆಂಟಾಲಿಟಿಯಲ್ಲಿ ಅವರು ಇರುತ್ತಾರೆ. ಹೊರಗೂ ಅದನ್ನೇ ಬಿಂಬಿಸುತ್ತಾರೆ. ಆದ್ದರಿಂದ ಅವರನ್ನ ಜೈಲಿನಲ್ಲಿ ಒಂದೇ ಸೆಲ್ನಲ್ಲಿ ಹಾಕಬೇಕು. ಅಲ್ಲಿಯೇ ಹೊಡೆದಾಡಿಕೊಂಡು ಸಾಯಲಿ. ಅವರು ಹೊರಗೆ ಬಂದು ಗಲಾಟೆ ಮಾಡೋದು ಬೇಡ ಎಂದು ಖಾದರ್ ಹೇಳಿದರು.
ಪೊಲೀಸ್ ಬಂಧೀಖಾನೆ ಮಂಡಳಿ ವಿಧೇಯಕ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖಾದರ್, ಈ ವಿಧೇಯಕ ಇನ್ನಷ್ಟು ಕಠಿಣವಾಗಿರಬೇಕಿತ್ತು ಎಂದು ಒತ್ತಾಯಿಸಿದರು. ಜೈಲಿನಲ್ಲಿ ಗಲಾಟೆ ಮಾಡುವವರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ. ಅವರನ್ನ ರಕ್ಷಿಸಲು ರಾಜಕಾರಣಿಗಳೂ ಇದ್ದಾರೆ. ಬಿಡಿಸಿಕೊಂಡು ಬರಲು ಲಾಯರ್ ಸಿಗುತ್ತಾರೆ. ಉತ್ತಮ ಕೆಲಸ ಮಾಡುವವರಿಗೆ ಯಾರ ಬೆಂಬಲವೂ ಸಿಗಲ್ಲ. ಇಂಥ ಪರಿಸ್ಥಿತಿ ಇವತ್ತು ಇದೆ. ಇದರ ಬಗ್ಗೆ ನಾವು ಗಮನ ಹರಿಸಬೇಕಿದೆ ಎಂದು ಖಾದರ್ ಬೇಸರ ವ್ಯಕ್ತಪಡಿಸಿದರು.
ಸಣ್ಣ ತಪ್ಪಿಗೆ ಜೈಲಿಗೆ ಹೋದವ ಕ್ರಿಮಿನಲ್ ಆಗ್ತಾನೆ:
ಜೈಲಿಗೆ ಹೋಗಿ ಪಿಎಚ್ಡಿ ತೆಗೆದುಕೊಂಡು ಬರುತ್ತಾರೆ. ಮೊದಲ ಸಲ ಜೈಲಿಗೆ ಹೋಗುವವರನ್ನ ಆಸ್ಪತ್ರೆಗೆ ಕಳುಹಿಸಿ ಅಲ್ಲಿ ಮನಃಪರಿವರ್ತನೆ ಮಾಡಬೇಕು. ಇವರನ್ನ ದೊಡ್ಡ ಜೈಲಿಗೆ ಕಳುಹಿಸಿದರೆ ಅಲ್ಲಿ ಕ್ರಿಮಿನಲ್ಗಳ ಪರಿಚಯ ಆಗುತ್ತೆ. ಸಣ್ಣ ತಪ್ಪು ಮಾಡಿ ಜೈಲಿಗೆ ಹೋದವ ದೊಡ್ಡ ಕ್ರಿಮಿನಲ್ ಆಗಿ ಬರುತ್ತಾನೆ. ನಾವೆಲ್ಲಾ ವಿದೇಶಕ್ಕೆ ಹೋಗಿ ಸರ್ಟಿಫಿಕೇಟ್ ತಂದ ಹಾಗೆ, ಜೈಲಿನಿಂದ ಬಿಡುಗಡೆ ಮಾಡುವ ವೇಳೆ ಆತ ಪಿಎಚ್ಡಿ ಸರ್ಟಿಫಿಕೇಟ್ ತೆಗೆದುಕೊಂಡು ಬರುತ್ತಾನೆ. ಹಾಗಾಗಿ, ಜೈಲಿನಲ್ಲಿ ಖೈದಿಗಳಿಗೆ ಎಲ್ಲಾ ಸೌಲಭ್ಯ ಸಿಗಬಾರದು. ಒಂದು ಸಾರಿಗೆ ಜೈಲಿಗೆ ಹೋದರೆ ಮತ್ತೆ ಹೋಗುತ್ತೇನೆ ಅನ್ನಬಾರದು, ಹಾಗಿರಬೇಕು ಜೈಲು ವ್ಯವಸ್ಥೆ ಎಂದು ಮಾಜಿ ಸಚಿವರೂ ಆದ ಯುಟಿ ಖಾದರ್ ಸಲಹೆ ನೀಡಿದರು.
ಇದನ್ನೂ ಓದಿ: Session Highlights- ರೇವಣ್ಣ, ಗಣೇಶ್ ಮೇಲೆ ಸ್ಪೀಕರ್ ಕೋಪ; ಕಾಗೇರಿ ಅಭಿಮಾನಿಯಾದ ರಮೇಶ್ ಕುಮಾರ್
ಪೊಲೀಸ್ ಸಿಬ್ಬಂದಿ ಹೆಚ್ಚು ಇದ್ದಲ್ಲೇ ಗ್ಯಾಂಗ್ಸ್ಟರ್ಸ್ ಹುಟ್ಟಿಕೊಳ್ತಾರೆ: ರಮೇಶ್ ಕುಮಾರ್
ಇದಕ್ಕೂ ಮುನ್ನ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೂ ಕೂಡ ಈ ವಿಧೇಯಕದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜೈಲಿನಲ್ಲೇ ದಿನನಿತ್ಯ ಹಗರಣ ಹೊರಬರುತ್ತಿವೆ. ಪೊಲೀಸ್ ಸಿಬ್ಬಂದಿ ಎಲ್ಲಿ ಹೆಚ್ಚು ಇದ್ದಾರೆ ಅಲ್ಲಿಯೇ ಗ್ಯಾಂಗ್ಸ್ಟರ್ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಮೊದಲು ಜೈಲುಗಳ ಮಟ್ಟ ಸುಧಾರಿಸಿ. ಹಬಿಚುಯಲ್ ಅಫೆಂಡರ್ಸ್ (Habitual Offenders) ಇದ್ದಾರೆ. ಬಂಧೀಖಾನೆಗಳಲ್ಲಿ ಸಣ್ಣಸಣ್ಣ ಮಟ್ಟದ ವಸ್ತುಗಳ ಸರಬರಾಜು ಆಗುತ್ತಿದೆ. ಇದನ್ನ ಬ್ರೇಕ್ ಮಾಡುವ ಪ್ರಯತ್ನ ಮಾಡಿ ಎಂದು ರಮೇಶ್ ಕುಮಾರ್ ಆಗ್ರಹಿಸಿದರು.
ಜೈಲಿನಲ್ಲಿ ಪರಿಸ್ಥಿತಿ ಹೇಗಿದೆ ಗೊತ್ತಾ? ನಮ್ಮ ಅಧಿಕಾರಿಗಳು ಅಪರಾಧಿ ಮುಂದೆ ಕೈ ಚಾಚುತ್ತಾರೆ. ಕೆಳಗಿನ ಅಧಿಕಾರಿಗಳು ಅಲ್ಲ ಮೇಲಿನ ಅಧಿಕಾರಿಗಳೇ ಅಪರಾಧಿ ಮುಂದೆ ಕೈಯೊಡ್ಡುತ್ತಾರೆ. ಕೆಳಗಿನವನಿಗೆ ನಾವು ಕೊಡುವ ಸಂಬಳ ಸಾಕಾಗಲ್ಲ. ಅವನೂ ಕೂಡ ದಾರಿ ತಪ್ಪುತ್ತಿದ್ದಾನೆ. ಕೆಳ ದರ್ಜೆಯ ಪೊಲೀಸ್ ಮೇಲ್ದರ್ಜೆಯ ಆಫೀಸರ್ ಮಕ್ಕಳ ಶೂ ಪಾಲಿಷ್ ಮಾಡುತ್ತಾನೆ. ಅಂಥವರ ಪರವಾಗಿ ಕಾನೂನು ತನ್ನಿ ಎಂದು ರಮೇಶ್ ಕುಮಾರ್ ಸಲಹೆ ನೀಡಿದರು.
ಶಾಸಕ ಅನ್ನದಾನಿ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಜೈಲಿನಲ್ಲಿ ಖೈದಿಗಳಿಗೆ ಕಾನೂನು ಬಾಹಿರ, ಅಕ್ರಮ ವಸ್ತುಗಳು ಸಿಗುತ್ತಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಜೈಲುಗಳಲ್ಲಿ ಗನ್, ಡ್ರಗ್ಸ್ ಸಿಗುತ್ತೆ. ಅಧಿಕಾರಿಗಳೇ ಇದನ್ನ ವ್ಯವಸ್ಥೆ ಮಾಡಿಕೊಡುತ್ತಾರೆ. ಹೊರಗೆ ಸಿಗೋದು ಜೈಲಿನ ಒಳಗೇ ಸಿಕ್ಕರೆ ಖೈದಿಗಳು ಆರಾಮವಾಗಿ ಇರುತ್ತಾರೆ. ಜೈಲಿನೊಳಗೆ ಇರುವಾಗಲೇ ಸ್ಕೆಚ್ ಹಾಕಿ ತಮಗೆ ಆಗದವರ ಮೇಲೆ ಹಲ್ಲೆ, ಕೊಲೆ ಮಾಡಿಸುತ್ತಾರೆ. ಇವೆಲ್ಲಾ ಜೈಲಿನ ಅಧಿಕಾರಿಗಳ ಬೆಂಬಲ ಇಲ್ಲದೇ ನಡೆಯಲ್ಲ. ಜೈಲಿನಂದಲೇ ಅಪರಾಧಗಳು, ಕುಮ್ಮಕ್ಕು, ಡೀಲ್ಗಳು ನಡೆಯುತ್ತವೆ. ಮೊದಲು ಇದಕ್ಕೆ ಕಡಿವಾಣ ಹಾಕಿ ಎಂದು ಅನ್ನದಾನಿ ಒತ್ತಾಯ ಮಾಡಿದರು.
ಇದನ್ನೂ ಓದಿ: Online Gambling: ಜೂಜು-ಬೆಟ್ಟಿಂಗ್ ಆಡಿದ್ರೆ ಇನ್ಮೇಲೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
ಪೊಲೀಸ್ ಬಂಧೀಖಾನೆ ಮಂಡಳಿ ವಿಧೇಯಕಕ್ಕೆ ಮುನ್ನ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಮಂಡಿಸಿದರು. ಅನ್ಲೈನ್ ಜೂಜು, ಬೆಟ್ಟಿಂಗ್ಗಳಿಗೆ ಕಡಿವಾಣ ಹಾಕುವ ಉದ್ದೇಶ ಈ ತಿದ್ದುಪಡಿ ವಿಧೇಯಕಕ್ಕಿದೆ. ಹಣ ನೀಡಿ ಗಳಿಸುವ ಟೋಕನ್ಗಳನ್ನ ಬಳಕೆ ಮಾಡಿ ಆಡುವ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಸಾಧನದ ಮೂಲಕ ನಡೆಯುವ ಜೂಜನ್ನು ಈ ತಿದ್ದುಪಡಿ ವಿಧೇಯಕವು ನಿಷೇಧ ಮಾಡುವ ಗುರಿ ಹೊಂದಿದೆ. ಈ ವಿಧೇಯಕ ಪಾಸ್ ಆಗಿ ಕಾನೂನಾಗಿ ಬದಲಾದರೆ ಆನ್ಲೈನ್ ಜೂಜು, ಬೆಟ್ಟಿಂಗ್ ಆಡಿದವರಿಗೆ ಒಂದು ವರ್ಷದಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ, ಒಂದು ಲಕ್ಷ ರೂವರೆಗೆ ದಂಡ ವಿಧಿಸಲಾಗುತ್ತದೆ. ಅನ್ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಆಡುವವರಿಗೆ ಸಹಾಯ ಮಾಡಿದ ವ್ಯಕ್ತಿಗಳಿಗೆ 10 ಸಾವಿರ ರೂ ದಂಡ ಹಾಗೂ 6 ತಿಂಗಳವರೆಗೆ ಜೈಲುಶಿಕ್ಷೆ ಇರಲಿದೆ. ಬಾಜಿ ಕಟ್ಟಿ ಆಡಿದವರು, ಜೂಜಾಟಕ್ಕೆ ಸ್ಥಳ ಕೊಟ್ಟವರು ಹಾಗು ಅದಕ್ಕೆ ಬೆಂಬಲಿಸಿದವರೆಗೂ ಇರುವ ಶಿಕ್ಷೆಯ ಪ್ರಮಾಣ ಇನ್ನಷ್ಟು ಏರಿಕೆ ಆಗಲಿದೆ.
ವರದಿ: ಕೃಷ್ಣ ಜಿ.ವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ