ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅನ್ನದಾಸೋಹ ಯೋಜನೆಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದರಾ ಸಂಬಂಧ ಕೆಪಿಸಿಸಿ ವತಿಯಿಂದ ಯು.ಟಿ.ಖಾದರ್ ಹಾಗೂ ವಿ.ಎಸ್.ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ, ಅಕ್ರೋಶ ವ್ಯಕ್ತಪಡಿಸಿದರು.
ಅನ್ನದಾಸೋಹ ಯೋಜನೆ ರದ್ಧು ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದ ಯು.ಟಿ.ಖಾದರ್, ಯೋಜನೆ ರದ್ದು ಮಾಡಿದರೆ ವೃದ್ಧರು, ಅಂಗವಿಕಲರು ಏನಾಗಬೇಡ? ಸಂಸ್ಥೆಗಳಿಗೆ ಆಹಾರ ಧಾನ್ಯ ನೀಡುವ ಈ ಯೋಜನೆ ನಿಲ್ಲಿಸಿದ್ದು ಏಕೆ. ಅಂದು ಕಾಂಗ್ರೆಸ್ ಸರ್ಕಾರದ ವೇಳೆ
ಶ್ರೀರಾಮ ಶಾಲೆಗೆ ಅಕ್ಕಿ ನಿಲ್ಲಿಸಿದ್ರು ಅಂತ ಬಿಜೆಪಿ ನಾಯಕರು ಬಾಯಿ ಬಡಿದುಕೊಂಡಿದ್ದರು. ರಮಾನಾಥ್ ರೈ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಈಗ ಅನ್ನದಾಸೋಹ ಯೋಜನೆಯನ್ನು ಸಂಪೂರ್ಣ ರದ್ದು ಮಾಡಿದ್ದಾರೆ. ಇದರಿಂದ ಅನಾಥಾಶ್ರಮ, ವೃದ್ಧಾಶ್ರಮಗಳ ಕಥೆ ಏನಾಗಬೇಡ? ಇವತ್ತು ತಿನ್ನಲು ಅನ್ನ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಾಸೋಹ ಯೋಜನೆ ರದ್ಧು ಪಡಿಸಿದ್ದರಿಂದ ತೊಂದರೆಯಾಗಿದೆ ಎಂದು ಆರೋಪ ಮಾಡಿದರು.
464 ಸಂಸ್ಥೆಗಳು, 41 ಸಾವಿರ ಫಲಾನುಭವಿಗಳಿಗೆ ಅನ್ನ ದಾಸೋಹದಡಿ ಕೊಡುವ ಅಕ್ಕಿ, ಗೋಧಿ ನಿಲ್ಲಿಸಲಾಗಿದೆ. ಸಿದ್ದಗಂಗಾ ಮಠದಲ್ಲಿ ಏಳು ಸಾವಿರದ ಮುನ್ನೂರ ಐವತ್ತೊಂಬತ್ತು ವಿದ್ಯಾರ್ಥಿಗಳಿದ್ದಾರೆ. 73, 590 ಕೆ.ಜಿ ಅಕ್ಕಿ, 36,794 ಕೆ.ಜಿ. ಗೋಧಿ ಕೊಡಲಾಗುತ್ತಿತ್ತು. ಒಬ್ಬ ವಿದ್ಯಾರ್ಥಿಗೆ ತಲಾ ಹತ್ತು ಕೆಜಿ ಅಕ್ಕಿ ಮತ್ತು ಐದು ಕೆಜಿ ಗೋಧಿಯನ್ನು ಅನ್ನ ದಾಸೋಹದ ಅಡಿ ಈ ಹಿಂದಿನ ಸರ್ಕಾರ ನೀಡುತ್ತಿತ್ತು. ಇದೀಗ ಬಿಜೆಪಿ ಸರ್ಕಾರ ಕಳೆದ ಎರಡು ತಿಂಗಳ ಹಿಂದೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯಿಂದ ಈ ಯೋಜನೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಮತ್ತು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ದಾಖಲೆ ಸಮೇತ ಗಂಭೀರ ಆರೋಪ ಮಾಡಿದರು.
![]()
ಈ ಹಿಂದೆ ಸಿದ್ಧಗಂಗಾ ಮಠಕ್ಕೆ ಸರ್ಕಾರದಿಂದ ನೀಡಲಾಗುತ್ತಿದ್ದ ಅಕ್ಕಿ, ಗೋಧಿ ವಿವರ.
ಇದನ್ನು ಓದಿ: ಹೆಗಡೆ ವಿವಾದ: ಬಿಜೆಪಿಗರು ರಾವಣನ ಮಕ್ಕಳು ಎಂದು ಸದನದಲ್ಲಿ ಅಬ್ಬರಿಸಿದ ಪ್ರತಿಪಕ್ಷಗಳು
ಗಾಂಧೀಜಿ ಬಗ್ಗೆ ನಿಮ್ಮ ನಿಲುವೇನು?: ಖಾದರ್
ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಯು.ಟಿ.ಖಾದರ್, ಹೆಗಡೆಯಿಂದ ಇಂತಹ ಹೇಳಿಕೆಗಳು ಬರುತ್ತಲೇ ಇವೆ. ಮಹಾತ್ಮ ಗಾಂಧಿ ಬಗ್ಗೆ ಅವಹೇಳನ ಮಾಡ್ತಾರೆ. ಸಂವಿಧಾನದ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡ್ತಾರೆ. ಇಂತವರ ಮೇಲೆ ಯಾಕೆ ಪ್ರಕರಣ ದಾಖಲಿಸುತ್ತಿಲ್ಲ. ಇದನ್ನು ನೋಡಿದರೆ ಇದರ ಹಿಂದೆ ಬಿಜೆಪಿಯವರ ಹಸ್ತಕ್ಷೇಪವಿದೆ ಎಂಬ ಅನುಮಾನ ಮೂಡುತ್ತದೆ. ಅನಂತ್ ಕುಮಾರ್ ಹೆಗಡೆಗೆ ಕುಮ್ಮಕ್ಕು ಕೊಟ್ಟಿದ್ದಾರೆ. ಇದರ ಬಗ್ಗೆ ಬಿಜೆಪಿಯ ಸ್ಪಷ್ಟ ನಿಲುವೇನು?. ಒಂದು ಕಡೆ ಗಾಂಧೀಜಿಯನ್ನು ಪೂಜೆ ಮಾಡುವುದು, ಮತ್ತೊಂದು ಕಡೆ ಗಾಂಧೀಜಿ ಬಗ್ಗೆ ದೂರುವುದು ಎರಡೂ ಬೇಡ. ಗಾಂಧೀಜಿ ಬಗ್ಗೆ ನಿಮ್ಮ ನಿಲುವು ಏನು ಎಂಬುದರ ಬಗ್ಗೆ
ಬಿಜೆಪಿ ಒಮ್ಮತದ ತೀರ್ಮಾನ ಮಾಡಬೇಕು ಎಂದು ಮಾರ್ಮಿಕವಾಗಿ ಖಾದರ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ