ಕೊಡಗು(ಏ.13): ರಾಜ್ಯದಲ್ಲಿ ಹಿಂದೂ ಮುಸಲ್ಮಾನರ (Hindu Muslim) ನಡುವೆ ವೈಮನಸ್ಯದ ಸ್ಥಿತಿ ನಿರ್ಮಾಣವಾಗಿದೆ. ಹಿಜಬ್ (Hijab) ವಿಷಯ ಮುಗಿಯುವಷ್ಟರಲ್ಲಿ ಹಿಂದೂ ಧರ್ಮಿಯರ ಹಬ್ಬ ಜಾತ್ರೆಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಮಾಡದಂತೆ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡಿನ ಶ್ರೀ ಬಸವೇಶ್ವರ ಜಾತ್ರೆಯಲ್ಲಿ (Basaveshwara) ಹಿಂದೂ ಮುಸನ್ಮಾನ, ಕ್ರೈಸ್ತರು ಭಾಗವಹಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾನೆ. ಬಸವೇಶ್ವರ ಜಾತ್ರೆಯಲ್ಲಿ ಹಿಂದೂ, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ನಿರಾತಂಕವಾಗಿ ವ್ಯಾಪಾರ ಮಾಡಿದ್ದಾರೆ.
ಹೌದು ಎರಡು ಶತಮಾನಗಳಿಂದ ನೆಲೆಸಿರುವ ಬಸವೇಶ್ವರ ದೇವಾಲಯಕ್ಕೆ ಕರಡಿಗೋಡು, ಸಿದ್ದಾಪುರ, ಬರಡಿ ಮತ್ತು ನೆಲ್ಯಹುದಿಕೇರಿ ಸೇರಿದಂತೆ ವಿವಿಧ ಗ್ರಾಮಗಳ ಸರ್ವಧರ್ಮಿಯರು ಭಕ್ತಿ ಭಾವದಿಂದ ಭಾಗವಹಿಸಿದ್ದರು. ಬಸವಣ್ಣ ದೇವರು ತಮ್ಮಿಷ್ಟಾರ್ಥಗಳನ್ನು ಈಡೇರಿಸುವುದೆಂಬ ನಂಬಿಕೆ ಇರುವುದರಿಂದ ಹಿಂದೂಗಳು ಅಷ್ಟೇ ಅಲ್ಲ ಮುಸ್ಲಿಂ, ಕ್ರೈಸ್ತರು ಕೂಡ ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.
ಹಣ್ಣು ತರಕಾರಿ ಅಕ್ಕಿ ಬೇಳೆ ನೀಡುವ ಭಕ್ತರು
ಜಾತ್ರೆಗೆ ಬೇಕಾಗುವ ಹಣ್ಣು ತರಕಾರಿ ಅಕ್ಕಿ ಬೇಳೆಗಳನ್ನು ನೀಡಿ ತಮ್ಮ ಭಕ್ತಿ ಮೆರೆಯುತ್ತಾರೆ. ಮಂಗಳವಾರ ನಡೆದ ವಾರ್ಷಿಕ ಪೂಜೆ ಅಂಗವಾಗಿ ದೇವಾಲಯದ ಬಳಿಯಿಂದ ಕಾವೇರಿ ನದಿಗೆ ಮೆರವಣಿಗೆಯಲ್ಲಿ ಸಾಗಿದ ಬಸವಣ್ಣ ದೇವರು ಕಾವೇರಿ ನದಿಯಲ್ಲಿ ಮಜ್ಜನ ಮುಗಿಸಿ ಬಳಿಕ ಕರಡಿಗೋಡು ಗ್ರಾಮದಲ್ಲಿ ಸಾಗಿತು.
ಕರಡಿಗೋಡಿನಲ್ಲಿ ಹಿಂದೂ, ಮುಸ್ಲಿಂ ಎನ್ನದೆ ಎಲ್ಲರ ಮನೆ ಬಳಿಗೆ ಮೆರವಣಿಗೆ ತೆರಳಿದಾಗ ಮುಸಲ್ಮಾನರು, ಕ್ರೈಸ್ತರು ಕೂಡ ಹಣ್ಣು ಕಾಯಿ ಹೂವು ನೀಡಿ ಪೂಜೆ ಸಲ್ಲಿಸಿದರು.
ಇದರಿಂದಲೇ ಜೀವನ
ಈ ಸಂದರ್ಭ ಮಾತನಾಡಿದ ಮುಸ್ಲಿಂ ವ್ಯಾಪಾರಿಗಳು ಹದಿನೈದು ಇಪ್ಪತ್ತು ವರ್ಷಗಳಿಂದ ಜಾತ್ರೆಗಳಲ್ಲಿ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದೇವೆ. ಕೊಡಗು ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಗಲ್ಲೂ ನಡೆಯುವ ಎಲ್ಲಾ ಹಿಂದೂ ಮುಸ್ಲಿಂ ಜಾತ್ರೆ ಸಮಾರಂಭಗಳಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ.
ಇದನ್ನೂ ಓದಿ: Ramanagara: ಸಿ.ಎಂ ಇಬ್ರಾಹಿಂಗೆ ಒಲಿಯಿತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ; H.D ದೇವೇಗೌಡರಿಂದ ಘೋಷಣೆ
ಮಂಗಳೂರು ಭಾಗದಲ್ಲಿ ಕೆಲವೆಡೆ ಅವಕಾಶವಿಲ್ಲ
ಇದುವರೆಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ ಈಗ ಮಂಗಳೂರು ಭಾಗದಲ್ಲಿ ಕೆಲವು ಜಾತ್ರೆಗಳಲ್ಲಿ ಅಂಗಡಿ ಹಾಕುವುದಕ್ಕೆ ಬಿಡಲಿಲ್ಲ. ನಮ್ಮ ಜಿಲ್ಲೆಯಲ್ಲಿ ಮಾತ್ರ ಯಾವುದೇ ತೊಂದರೆಯಿಲ್ಲದೆ ವ್ಯಾಪಾರ ಮಾಡುತ್ತಿದ್ದೇವೆ. ಈಗಾಗಲೇ ಐದಾರು ಊರುಗಳ ಜಾತ್ರೆಗಳಲ್ಲಿ ವ್ಯಾಪಾರ ಮಾಡಿದ್ದೇವೆ. ಎಲ್ಲರೂ ಅಣ್ಣ ತಮ್ಮಂದಿರು, ಅಕ್ಕ ತಂಗಿಯರಂತೆ ಬದುಕುತ್ತಿದ್ದೇವೆ. ಮುಂದೆಯೂ ಇದೇ ರೀತಿ ಮುಂದುವರೆಯಬೇಕು ಎನ್ನೋದು ನಮ್ಮ ಆಶಯ ಎಂದಿದ್ದಾರೆ.
ಇದನ್ನೂ ಓದಿ: SSLC ಪರೀಕ್ಷೆಯ Key Answers ಪ್ರಕಟ; ಈ ವೆಬ್ಸೈಟ್ ಮೂಲಕ ಸರಿ ಉತ್ತರಗಳನ್ನು ನೋಡಬಹುದು
ನಮ್ಮ ಹೊಟ್ಟೆಗೆ ಹೊಡೆಯಬೇಡಿ
ಇನ್ನು ಎಜಾಸ್ ಎಂಬ ವ್ಯಾಪಾರಿ ಮಾತನಾಡಿ ನಾವು ಹಲವು ವರ್ಷಗಳಿಂದ ಜಾತ್ರೆಗಳಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ವರ್ಷದ ನಾಲ್ಕೈದು ತಿಂಗಳು ಮಾತ್ರ ಜಾತ್ರೆ ಸಮಾರಂಭಗಳು ನಡೆಯುವುದರಿಂದ ಆ ನಾಲ್ಕೈದು ತಿಂಗಳು ಮಾತ್ರವೇ ದುಡಿದು ನಮ್ಮ ಇಡೀ ವರ್ಷದ ಜೀವನ ನಡೆಸಬೇಕು. ದಯವಿಟ್ಟು ಯಾರೂ ಇದಕ್ಕೆ ಕಲ್ಲು ಹಾಕಿ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ. ಇಂತಹ ಸ್ಥಿತಿ ಬರದಂತೆ ಸರ್ಕಾರ ದಯವಿಟ್ಟು ತಡೆಯಬೇಕು. ಇಲ್ಲದಿದ್ದರೆ ಬಡವರ ಬದುಕು ಹಾಳಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ