ನವದೆಹಲಿ(ಜೂ. 30): ಸುಮಾರು ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಈಗ ಆಗುವ ಲಕ್ಷಣಗಳು ಗೋಚರಿಸಿವೆ. ಇದೇ ಹಿನ್ನೆಲೆಯಲ್ಲಿ ಇಂದು ಹಾಲಿ ಕೇಂದ್ರ ಸಚಿವರಿಗೆ ಬಹಳ ನಿರ್ಣಾಯಕವಾದ ದಿನ ಆಗಿದೆ. ಏಕೆಂದರೆ ಪುನರ್ರಚನೆ ವೇಳೆ ಕೆಲ ಸಚಿವರನ್ನು ಕೈ ಬಿಡಲು ನಿರ್ಧರಿಸಲಾಗಿದ್ದು, ಅಂತಹವರಿಗೆ ಧನ್ಯವಾದ ಹೇಳಲೆಂದೇ ಇಂದು ಕೇಂದ್ರ ಸರ್ಕಾರದ 'ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆ' ಕರೆಯಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಜೆ 4 ಗಂಟೆಗೆ ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆ ಕರೆದಿದ್ದು ಆ ವೇಳೆ ಎಲ್ಲಾ ಸಚಿವರಿಗೂ ಧನ್ಯವಾದ ಹೇಳಲಿದ್ದಾರೆ. ಈ ಮೂಲಕ ಪುನ್ರರಚನೆ ವೇಳೆ ಕೆಲ ಸಚಿವರು ಸ್ಥಾನ ಬಿಡಬೇಕೆಂಬ ಸಂದೇಶ ರವಾನೆ ಮಾಡಲಿದ್ದಾರೆ. ಹಾಗಾಗಿ ಇಂದು ಕೇಂದ್ರ ಸಚಿವರ ಪಾಲಿಗೆ ನಿರ್ಣಾಯಕವಾದ ದಿನ. ಆದರೆ ರಾಜ್ಯದಿಂದ ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದಗೌಡ ಅಥವಾ ಪ್ರಹ್ಲಾದ್ ಜೋಶಿ ಇಬ್ಬರೂ ಕೇಂದ್ರ ಸಂಪುಟದಲ್ಲಿ ಮುಂದುವರೆಯಲಿದ್ದಾರೆ. ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಮೈಕ್ರೋಸಾಫ್ಟ್ ಕ್ಲೌಡ್ ಸಿಸ್ಟಮ್ನಲ್ಲಿ ದೋಷ ಪತ್ತೆಹಚ್ಚಿದ 20 ವರ್ಷದ ಯುವತಿಗೆ 22 ಲಕ್ಷ ರೂ. ಬಹುಮಾನ
ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆಯ ಬಳಿಕ ರಾಷ್ಟ್ರಪತಿಗಳಿಗೆ ಹೊಸ ಸಚಿವ ಸಂಪುಟದ ಪಟ್ಟಿ ರವಾನೆ ಆಗಲಿದೆ. ನಾಳೆ ಸಂಜೆ ಅಥವಾ ನಾಳಿದ್ದು ರಾಷ್ಟ್ರಪತಿಗಳಿಗೆ ಪಟ್ಟಿ ರವಾನೆ ಆಗಲಿದ್ದು ಬಳಿಕ ಅವರು ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಸಮಯ ನಿಗದಿ ಮಾಡಲಿದ್ದಾರೆ. ಸದ್ಯ ಕೇಂದ್ರ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳು 27. ಈ ಪೈಕಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಈಗ ತುಂಬಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ವರ್ಷ ಚುನಾವಣೆ ನಡೆಯುವ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕರಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ರಾಜ್ಯದಿಂದ ಇಬ್ಬರು ಸಂಸದರು ಹೊಸದಾಗಿ ಕೇಂದ್ರ ಸಂಪುಟ ಸೇರುವ ಸಾಧ್ಯತೆ ಇದೆ. ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಗುಲ್ಬರ್ಗ ಸಂಸದ ಉಮೇಶ್ ಜಾಧವ್ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ನಡುವೆ ತೀವ್ರ ಸ್ಪರ್ಧೆ ಇದೆ. ಲಿಂಗಾಯತರ ಪೈಕಿ ಬಿ.ವೈ. ರಾಘವೇಂದ್ರ ಅಥವಾ ಶಿವಕುಮಾರ್ ಉದಾಸಿ ಅವರನ್ನು ಪರಿಗಣಿಸಬಹುದು.
ಇದನ್ನೂ ಓದಿ:Karnataka Weather Today: ಇಂದು ಮತ್ತು ನಾಳೆ ರಾಜ್ಯದಲ್ಲಿ ವ್ಯಾಪಕ ಮಳೆ; ಕರಾವಳಿಯಲ್ಲಿ ಹಳದಿ ಅಲರ್ಟ್ ಘೋಷಣೆ
ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಸಾವಿನಿಂದ ಖಾಲಿಯಾಗಿರುವ ಸ್ಥಾನಕ್ಕೆ ಲಿಂಗಾಯತ ಸಮುದಾಯದವರಿಗೇ ಅವಕಾಶ ನೀಡಲಾಗುತ್ತದೆ. ರಾಜ್ಯದಲ್ಲಿ ಈಗ ಯಡಿಯೂರಪ್ಪ ನಾಯಕತ್ವ ಬದಲಾವಣೆ ಚರ್ಚೆಯ ಹಿನ್ನಲೆಯಲ್ಲಿ ಅವರನ್ನು ಬದಲಿಸಬೇಕು ಎಂದು ಹೈಕಮಾಂಡ್ ನಿರ್ಧರಿಸಿದ್ದರೆ ಅವರ ಪುತ್ರ ರಾಘವೇಂದ್ರಗೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ