ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ (Heavy Rain) ಆಗಿದೆ. ಬೆಂಗಳೂರಲ್ಲಿ ಮಳೆ (Bengaluru Rain) ಅನಾಹುತ ಮುಂದುವರಿದಿದ್ದು ಕೆಲವೆಡೆ ತಗ್ಗು ಪ್ರದೇಶ ಮುಳುಗಡೆ ಆಗಿದೆ. ಇನ್ನೊಂದಿಷ್ಟು ಕಡೆ ಮರಗಳು (Trees) ಉರುಳಿ ಬಿದ್ದಿವೆ. ಜೆಪಿ ನಗರದಲ್ಲಿ ಮರಬಿದ್ದು 4 ಕಾರುಗಳಿಗೆ (Car Damage) ಡ್ಯಾಮೇಜ್ ಆಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆಯೂ ಭಾರೀ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆಗಳಿವೆ. ರಾಜ್ಯದ ಕೆಲವೆಡೆ ಆಲಿಕಲ್ಲು ಮಳೆ ಆಗುವ ಸಾಧ್ಯತೆಗಳಿವೆ.
ಬೆಂಗಳೂರಲ್ಲಿ ಮಳೆ ಅಬ್ಬರ
ನಿನ್ನೆ ಸಂಜೆ ಮತ್ತು ರಾತ್ರಿ ಸುರಿದ ಮಳೆಗೆ 175 ಮರ, ಕೊಂಬೆಗಳು ಧರೆಗುರುಳಿವೆ. ಕಬ್ಬನ್ ಪಾರ್ಕ್ನಲ್ಲಿ 5 ಮರ ಬುಡಸಮೇತ ಧರೆಗೆ ಉರುಳಿದ್ರೆ, 80 ಮರಗಳ ಕೊಂಬೆಗಳು ಮುರಿದಿವೆ. ಲಾಲ್ಬಾಗ್ನಲ್ಲಿ 4 ಮರ ಬುಡಸಮೇತ ಧರೆಗೆ ಉರುಳಿದ್ದು, 15 ಮರಗಳ ಕೊಂಬೆ ಮುರಿತವಾಗಿವೆ.
ಕಾರ್ಪೊರೇಷನ್ ಹತ್ತಿರದ ಆಟೋ ಒಂದರ ಮೇಲೆ ಮರದ ಕೊಂಬೆ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಆಟೋ ಚಾಲಕ ಬಚಾವ್ ಆಗಿದ್ದಾರೆ. ನೃಪತುಂಗಾ ರಸ್ತೆಯಲ್ಲಿ ಬಿಎಂಟಿಸಿ ಬಸ್ ಮೇಲೆ ಮರ ಬಿದ್ದಿತ್ತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಯ್ತು. ಫುಟ್ಪಾಥ್ ಮೇಲೆ ತೆರಳಲು ಆಗದೆ ಸಾರ್ವಜನಿಕರಿಗೆ ಪರದಾಡಿದರು.
ರಾಮನಗರದಲ್ಲಿಯೂ ಮಳೆಯ ಅಬ್ಬರ
ಇತ್ತ ರಾಮನಗರ ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿತ್ತು. ಮಳೆ ಆರ್ಭಟಕ್ಕೆ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಜನ-ಜೀವನ ಅಸ್ತವ್ಯಸ್ತಗೊಂಡಿತ್ತು. ರಾಮನಗರ - ಚನ್ನಪಟ್ಟಣ ಸೇರಿ ಜಿಲ್ಲೆಯ ಹಲವೆಡೆ ಧಾರಕಾರ ಮಳೆಯಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ನೀರು
ರಾಮನಗರ ತಾಲೂಕಿನ ಮಾಯಾಗಾನಹಳ್ಳಿ ಗ್ರಾಮದ ಬಳಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಮತ್ತೆ ಎಡವಟ್ಟಾಗಿದೆ. ಅರ್ಧ ಗಂಟೆ ಸುರಿದ ಮಳೆಗೆ ಹೈವೇ ತುಂಬಿ ಹೋಗಿ ವಾಹನ ಸವಾರರು ಪರದಾಡುವಂತಾಗಿತ್ತು. ಹೊಳೆಯಂತಾದ ಹೆದ್ದಾರಿ ದಾಟಲು ಜನ ಪರದಾಡಿದರು.
ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿ ನೀರು ನಿಲ್ಲುತ್ತದೆ. ಈಗಲೂ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಕ್ತ ನಿರ್ವಹಣೆಯನ್ನೇ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮೈಸೂರು: ಗೋಡೆ ಕುಸಿತ
ಮೈಸೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ನಂಜನಗೂಡು ತಾಲೂಕಿನ ಗೆಜ್ಜಗನಹಳ್ಳಿ ಗ್ರಾಮದ 5ಕ್ಕೂ ಹೆಚ್ಚು ಮನೆಗಳ ಛಾವಣಿ ಗೋಡೆ ಕುಸಿತವಾಗಿದೆ. ಮೇಲ್ಛಾವಣಿ ಹಾರಿ ಗೋಡೆ ಕುಸಿದ ಪರಿಣಾಮ ಧವಸ ಧಾನ್ಯಗಳಿಗೆ ಹಾನಿಯುಂಟಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿಗೆ ಜನರು ತತ್ತರ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಯಾದಗಿರಿಯಲ್ಲಿ ಕೆಂಡದಂತಹ ತಾಪಮಾನ ಇನ್ನಷ್ಟು ಏರಿಕೆಯಾಗಿದ್ದು, ಜನರು ಕಂಗಾಲಾಗಿದ್ದಾರೆ. ರಣ ಬಿಸಿಲಿನಿಂದ ನವಜಾತ ಶಿಶುಗಳು, ಮಕ್ಕಳು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಮಕ್ಕಳು ಜ್ವರ, ವಾಂತಿಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜನ, ಬಿಸಿಲಿನಿಂದ ಎಚ್ಚರಿಕೆ ವಹಿಸಬೇಕು. ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದು ಮಕ್ಕಳ ತಜ್ಞ ವೈದ್ಯ ಡಾ. ಸಚಿನ್ ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ