ಚಾಮರಾಜನಗರ (ಫೆ.29): ಕಾಡು ಪ್ರಾಣಿಗಳ ರಕ್ಷಣೆಗೆ ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಅದು ಸಾಧ್ಯವಾಗುತ್ತಿಲ್ಲ. ಬೆಳೆ ರಕ್ಷಣೆ ಹೆಸರಿನಲ್ಲಿ ಪ್ರಾಣಿಗಳ ಮಾರಣಹೋಮ ಸಾಗಿಯೇ ಇದೆ. ಈಗ ಚಾಮರಾಜ ನಗರದಲ್ಲಿ ಇಂಥದ್ದೇ ಘಟನೆ ನಡೆದಿದೆ. ಮನುಷ್ಯ ಮಾಡಿದ ತಪ್ಪಿಗೆ ಎರಡು ಗಂಡಾನೆಗಳು ಮೃತಪಟ್ಟಿವೆ.
ಚಾಮರಾಜನಗರ ಜಿಲ್ಲೆ ಹಾಗೂ ತಮಿಳುನಾಡಿನ ತಾಳವಾಡಿಗೆ ಹೊಂದಿಕೊಂಡಿರುವ ಕರಳವಾಡಿಯಲ್ಲಿ ಈ ಘಟನೆ ನಡೆದಿದೆ. ಬೆಳೆ ರಕ್ಷಣೆಗೆಂದು ಜಮೀನಿನ ಸುತ್ತ ಅಕ್ರಮವಾಗಿ ತಂತಿಬೇಲಿ ಹಾಕಲಾಗಿತ್ತು. ಇದಕ್ಕೆ ಹೈ ಟೆನ್ಶನ್ ವಿದ್ಯುತ್ ಸಂಪರ್ಕ ಮಾಡಲಾಗಿತ್ತು. ಆಹಾರ ಅರಸಿ ಬಂದ ಕಾಡಾನೆಗಳಿಗೆ ವಿದ್ಯುತ್ ತಗುಲಿ ಮೃತಪಟ್ಟಿವೆ.
ಮೃತಪಟ್ಟ ಎರಡು ಆನೆಗಳ ವಯಸ್ಸು 20 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಜಮೀನು ಮಾಲೀಕ ಪಳನಿಸ್ವಾಮಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸತ್ಯಮಂಗಲಂ ಅರಣ್ಯಾಧಿಕಾರಿಗಳ ಭೇಟಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊರುವ ಆನೆ ಅರ್ಜುನನಿಗೆ ಎದುರಾಗಿದೆ ಸಂಕಷ್ಟ
ಪುತ್ತೂರಿನಲ್ಲಿ ಆನೆ ಮರಿ ಸಾವು:
ಸುಳ್ಯ ತಾಲೂಕಿನ ಕಲ್ಮಕಾರು ಕೋಪಡ್ಕ ಸತೀಶ್ ಗೌಡ ಎಂಬುವವರ ತೋಟದಲ್ಲಿ ಮರಿಯಾನೆ ಶವ ಪತ್ತೆಯಾಗಿದೆ. ಇದು ಸಾಕಷ್ಟು ಅನುಮಾನ ಹುಟ್ಟಿಸಿದೆ. ಮರಿಯಾನೆ ಮೃತಪಟ್ಟು ನಾಲ್ಕು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಕೊಳೆತ ವಾಸನೆ ಬಂದಾಗ ಆನೆ ಸಾವನ್ನಪ್ಪಿದ ವಿಚಾರ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
(ವರದಿ: ಎಸ್ಎಂ ನಂದೀಶ್ ಮತ್ತು ಅಜಿತ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ