ಹುಬ್ಬಳ್ಳಿ: ಕಿಮ್ಸ್ (Kims) ಆವರಣದಲ್ಲಿ ಮಗು ಕಳ್ಳತನ ಪ್ರಕರಣಕ್ಕೆ (Child Theft Case) ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಕಳ್ಳತನದ ಕಥೆ ಹಿಂದಿನ ಅಸಲಿಯತ್ತು ಬಹಿರಂಗಗೊಂಡಿದೆ. ಹೆತ್ತಮ್ಮಳಿಂದಲೇ (Mother) ನಡೆದ ನೀಚ ಕೃತ್ಯ ಜಗಜ್ಜಾಹೀರಾಗಿದೆ. ಕಳ್ಳತನ ಡ್ರಾಮಾ ಕ್ರಿಯೇಟ್ ಮಾಡಿದ ತಾಯಿ ಸಲ್ಮಾಳೇ ಇಲ್ಲಿ ವಿಲನ್ ಆಗಿದ್ದಾಳೆ. ಕಳ್ಳತನ ಕಹಾನಿಯ (Theft Story) ಹಿಂದಿನ ಅಸಲಿಯತ್ತನ್ನು ಹುಬ್ಬಳ್ಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ 40 ದಿನದ ಹೆಣ್ಣು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಕುಂದಗೋಳ ಪಟ್ಟಣದ ಸಲ್ಮಾ ಮತ್ತು ಹುಸೇನ್ ಶೇಖ್ ಎಂಬುವರಿಗೆ ಸೇರಿದ್ದ 40 ದಿನಗಳ ಹೆಣ್ಣು ಮಗುವಿಗೆ ಬಾಯಿಯಲ್ಲಿ ರಕ್ತ ಬರುತ್ತಿದೆ ಅನ್ನೋ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಡಿಸ್ಚಾರ್ಜ್ ಮಾಡುವ ದಿನವೇ ಮಗು ಮಾಯವಾಗಿತ್ತು. ತನ್ನ ಮಗುವನ್ನು ಯಾರೋ ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿದ್ದಾನೆಂದು ತಾಯಿ ಸಲ್ಮಾ ದೂರು ನೀಡಿದ್ದಳು. ಕಪ್ಪು ವರ್ಣದ ವ್ಯಕ್ತಿ ತನ್ನ ಮಗುವನ್ನು ಕಿತ್ತುಕೊಂಡ ಹೋದನೆಂದು ಹೇಳಿದ್ದಳು.
ಮಗುವನ್ನು ಎಸೆದಿರುವ ಪಾಪಿ ತಾಯಿ
ಜೂನ್ 13 ರಂದು ಮದ್ಯಾಹ್ನ ಮಗು ನಾಪತ್ತೆಯಾಗಿತ್ತು. ಆದರೆ ಅಸಲಿಗೆ ಆಗಿರೋದೇ ಬೇರೆ. ಮಗುವನ್ನು ಶೌಚಾಲಯದ ಕಿಟಕಿಯಿಂದ ಎಸೆದಿದ್ದ ಸಲ್ಮಾ, ನಂತರ ಕಣ್ಣೀರು ಹಾಕಿ ಡ್ರಾಮಾ ಮಾಡಿದ್ದಳು. ಮಗುವನ್ನು 104 ನೇ ವಾರ್ಡ್ ನಲ್ಲಿ ಅಡ್ಮಿಟ್ ಮಾಡಲಾಗಿತ್ತು. ಅದೇ ವಾರ್ಡ್ ನ ಶೌಚಾಲಯದಿಂದ ಮಗುವನ್ನು ಎಸೆಯಲಾಗಿದ್ದು, ಅದೃಷ್ಟವಶಾತ್ ಹುಲ್ಲಿನ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಮಗು ಬಚಾವಾಗಿತ್ತು.
ಇದನ್ನೂ ಓದಿ: Hassan Crime News: ತಾಳಿ ಕಟ್ಟಿದ ಪತಿಗೆ ಚಟ್ಟ ಕಟ್ಟಿದ ಪತ್ನಿ; ಪಾತಕಿಗೆ ಅಮ್ಮ, ಮಗ ಸಾಥ್
ಜೂನ್ 13 ರಂದು ಕಿಮ್ಸ್ ನ ವಿವಿಧೆಡೆ ಹುಡುಕಾಟ ಮಾಡಲಾಗಿತ್ತು. ಜೊತೆಗೆ ಸಿಸಿ ಕ್ಯಾಮರಾ ಪರಿಶೀಲಿಸಲಾಗಿತ್ತು. ಸಿಸಿ ಕ್ಯಾಮರಾದಲ್ಲಿ ಮಗುವನ್ನು ಯಾರೊಬ್ಬರೂ ಕೊಂಡೊಯ್ಯುತ್ತಿರೋ ದೃಶ್ಯಗಳು ಸೆರೆಯಾಗದೇ ಇದ್ದದ್ದು ಅಚ್ಚರಿಗೆ ಕಾರಣವಾಗಿತ್ತು. ಎಲ್ಲ ಕಡೆ ತಡಕಾಡಿದ್ದರೂ ಮಗು ಮಾತ್ರ ಸಿಕ್ಕಿರಲೇ ಇಲ್ಲ. ಆದರೆ ಮರುದಿನ ಮಗು ಆಸ್ಪತ್ರೆ ಸಿಬ್ಬಂದಿ ಕಣ್ಣಿಗೆ ಬಿದ್ದಿತ್ತು. ಶೌಚಾಲಯದ ಮೂಲಕ ಕೆಳಗೆ ಎಸೆದ ಸ್ಥಳದಲ್ಲಿಯೇ ಆ ಮಗು ಪತ್ತೆಯಾಗಿತ್ತು.
ಹೆತ್ತವರಿಂದಲೇ ಕೃತ್ಯ
ತಕ್ಷಣ ತೀವ್ರ ನಿಗಾ ಘಟಕಕ್ಕೆ ರವಾನಿಸಿದ್ದ ಸಿಬ್ಬಂದಿ, ಮಗುವಿಗೆ ಚಿಕಿತ್ಸೆ ಮುಂದುವರೆಸಿತ್ತು. ಮಗು ಹಿಮೊರಾಜಿಕಲ್ ಡಿಸೀಜ್ ನಿಂದ ಬಳಲುತ್ತಿತ್ತು. ಮಗುವಿನ ತಲೆ ಅತಿಯಾಗಿ ದೊಡ್ಡದಿತ್ತು, ತಲೆಯಲ್ಲಿ ನೀರು ಸಂಗ್ರಹವಾಗಿತ್ತು ಎನ್ನಲಾಗಿದೆ. ಸಲ್ಮಾಗೆ ಈ ಹುಟ್ಟಿದ ಎರಡು ಮಕ್ಕಳೂ ಈ ಹಿಂದೆ ಅನಾರೋಗ್ಯದಿಂದಲೇ ಸಾವನ್ನಪ್ಪಿದ್ದವು. ಈ ಮಗುವೂ ಅನಾರೋಗ್ಯಪೀಡಿತವಾಗಿರೋದು ಪೋಷಕರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಮಗುವನ್ನು ದೂರ ಮಾಡಿಕೊಳ್ಳಲು ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ತಾಯಿ
ಹೆತ್ತಮ್ಮಳಿಂದಲೇ ಮಗುವಿನ ಕೊಲೆ ಯತ್ನ ನಡೆದಿರೋದು ವಿಚಾರಣೆ ವೇಳೆ ಬಹಿರಂಗಗೊಂಡಿದೆ. ತಾನಾಗಿಯೇ ಮಗುವನ್ನು ಎಸೆದಿದ್ದರೂ, ನಂತರ ದೊಡ್ಡ ಡ್ರಾಮಾ ಕ್ರಿಯೇಟ್ ಮಾಡಿ ಸಲ್ಮಾ ಗೊಂದಲ ಸೃಷ್ಟಿ ಮಾಡಿದ್ದಳು. ಪೊಲೀಸರ ತನಿಖೆ ವೇಳೆ ಸಲ್ಮಾ ಎಲ್ಲವನ್ನೂ ಬಾಯ್ಬಿಟ್ಟಿದ್ದಾಳೆ. ನಿನ್ನೆ ಇಡೀ ದಿನ ಸಲ್ಮಾಳ ವಿಚಾರ ಮಾಡಲಾಗಿತ್ತು. ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಕೆಲಸ ಮಾಡಿರೋದಾಗಿ ಸಲ್ಮಾ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Vijayapura: ಹರೆಯದ ಹುಡುಗನ ಮೇಲೆ ಆಸೆ; ಗಂಡನಿಗೆ ಗುಂಡಿ ತೋಡಿದ ಆಂಟಿ
ಇದರ ಹಿಂದೆ ಆಕೆಯ ಕುಟುಂಬದ ಸದಸ್ಯರೂ ಇರೋ ಶಂಕೆ ವ್ಯಕ್ತವಾಗಿದೆ. ಅನಾರೋಗ್ಯಪೀಡಿತ ಮಗುವಿಗೆ ಚಿಕಿತ್ಸೆ ಕೊಡಿಸುವುಕ್ಕಿಂತ ಅದಕ್ಕೊಂದು ಮುಕ್ತಿ ಕಾಣಿಸಬೇಕೆಂಬ ಲೆಕ್ಕಾಚಾರದಲ್ಲಿ ಈ ಕೃತ್ಯ ಎಸಗಿರೋ ಅಂಶ ಬೆಳಕಿಗೆ ಬಂದಿದೆ. ಈ ಎಲ್ಲ ವಿಷಯ ತಿಳಿದ ನಂತರ ಅನಾರೋಗ್ಯಪೀಡಿತ ಮಗುವಿನ ಆರೈಕೆಯ ಜವಾಬ್ದಾರಿಯನ್ನು ಕಿಮ್ಸ್ ವೈದ್ಯರು ಹೊತ್ತುಕೊಂಡಿದ್ದಾರೆ. ಸದ್ಯ ಮಗುವಿನ ತಾಯಿ ಸಲ್ಮಾ ವಿದ್ಯಾನಗರ ಪೊಲೀಸರ ವಶದಲ್ಲಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ