ಬೆಂಗಳೂರು: ಭಿನ್ನರ ಬಣದಲ್ಲಿ ಗುರುತಿಸಿಕೊಂಡು ಸರ್ಕಾರದ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಸಚಿವ ಸಿ.ಪಿ ಯೋಗೀಶ್ವರ್ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕರೆದಿದ್ದ ಸಭೆಗೆ ತಡವಾಗಿ ಆಗಮಿಸುವ ಮೂಲಕ ತಮಗೆ ಅಸಮಧಾನ ಇದೆ ಎನ್ನುವ ಸಂದೇಶವನ್ನು ರವಾನಿಸಿದ್ದಾರಾ? ಎನ್ನುವ ಅನುಮಾನ ಇದೀಗ ಮೂಡಿದೆ. ಬಿಜೆಪಿ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಸಚಿವರ ಸಭೆ ಕರೆಯಲಾಗಿತ್ತು. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಯಕ್ಕೆ ಸರಿಯಾಗಿ ಆಗಮಿಸಿ ಸಭೆಗಾಗಿ ಕಾದು ಕುಳಿತಿದ್ದರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಹಾಗು 30 ಸಚಿವರು ಸಕಾಲಕ್ಕೆ ಆಗಮಿಸಿದ್ದರು. ಆದರೆ ಸಿ.ಪಿ ಯೋಗೀಶ್ವರ್ ಮಾತ್ರ ಆಗಮಿಸಲಿಲ್ಲ, ಅವರ ನಿರೀಕ್ಷೆಯಲ್ಲಿ ಸ್ವಲ್ಪ ಸಮಯ ಕಾದು ನೋಡಿದ ನಾಯಕರು ನಂತರ 5.30 ಕ್ಕೆ ಸಭೆ ಆರಂಭಿಸಿದ್ದಾರೆ.
ಸಭೆ ಆರಂಭಗೊಂಡ ನಂತರ 1 ಗಂಟೆ ತಡವಾಗಿ ಸಂಜೆ 6.30 ಕ್ಕೆ ಮಲ್ಲೇಶ್ವರಂ ಕಚೇರಿಗೆ ಯೋಗೀಶ್ವರ್ ಆಗಮಿಸಿದರು. ತಡವಾಗಿಯೇ ಸಭೆಯಲ್ಲಿ ಭಾಗಿಯಾದರು. ಈಗಾಗಲೇ ಭಿನ್ನ ರೀತಿಯ ಹೇಳಿಕೆ ಮೂಲಕ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಯೋಗೀಶ್ವರ್, ತಡವಾಗಿ ಸಭೆಗೆ ಆಗಮಿಸುವ ಮೂಲಕ ಅಸಮಧಾನದ ಸಂದೇಶ ರವಾನಿಸಿದರಾ? ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಕ್ಷಮದಲ್ಲಿ ನೇರವಾಗಿ ಬಿಎಸ್ವೈ ವಿರುದ್ಧ ಹೇಳಿಕೆ ನೀಡಲು ಸಾಧ್ಯವಿಲ್ಲ, ನಾಯಕತ್ವದ ವಿರುದ್ಧ ಮಾತನಾಡಲೂ ಸಾಧ್ಯವಿಲ್ಲ ಹಾಗಾಗಿ ತಡವಾಗಿ ಸಭೆಗೆ ಆಗಮಿಸುವ ಮೂಲಕ ತಮಗೆ ಅಸಮಧಾನ ಇದೆ ಎನ್ನುವುದನ್ನು ತೋರಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಅರುಣ್ ಸಿಂಗ್ ಅವರನ್ನು ರಾಜ್ಯಕ್ಕೆ ಕಳಿಸಲಾಗಿತ್ತು. ಹೀಗಾಗಿ ಸಿಎಂ ಯಡಿಯೂರಪ್ಪ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಎಲ್ಲಾ ಶಾಸಕರ ಮತ್ತು ಸಚಿವರುಗಳನ್ನು ಭೇಟಿ ಮಾಡಿ ಖುದ್ದು ಮಾತನಾಡಿರುವ ಅರುಣ್ ಸಿಂಗ್, "ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಯಡಿಯೂರಪ್ಪ ಅವರ ಮೇಲೆ ಹೈಕಮಾಂಡ್ಗೆ ವಿಶ್ವಾಸ ಇದೆ. ಮುಂದಿನ ದಿನಗಳಲ್ಲೂ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅರುಣ್ ಸಿಂಗ್, " ಸರ್ಕಾರ, ಶಾಸಕರು, ಸಚಿವರು ಮತ್ತು ಸಿಎಂ ಯಡಿಯೂರಪ್ಪ ಹಗಲು ರಾತ್ರಿ ದುಡಿದಿದ್ದಾರೆ. ನಮಗೆ ಎಲ್ಲಾ ಶಾಸಕರು, ಸಂಸದರು ಒಂದೇ. ನಾಯಕತ್ವ ಬದಲಾವಣೆ ಬಗ್ಗೆ ಅವರು ಮಾತನಾಡುವುದು ಸಹಜ. ಆದರೆ, ಹೈಕಮಾಂಡ್ ಪ್ರತಿ ಬಾರಿಯೂ ಹೇಳಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ" ಎಂದು ತಿಳಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ