ಬೆಂಗಳೂರು: ರಾಷ್ಟ್ರೀಯ ನಾಯಕರು ಚುನಾವಣೆ ಪ್ರಚಾರದಲ್ಲಿ (Election Campaign) ಭಾಗಿಯಾಗುತ್ತಿರುವ ಹಿನ್ನೆಲೆ ಪೊಲೀಸರು ಪ್ರಯಾಣಿಕರಿಗೆ (Public) ತೊಂದರೆ ಆಗದಂತೆ ಕೆಲವು ಮಾರ್ಗಗಳನ್ನು ಬದಲಾವಣೆ ಮಾಡಿದ್ದಾರೆ. ಇಂದು ನಾಲ್ಕು ಜಿಲ್ಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಿಂಚಿನ ಸಂಚಾರದಲ್ಲಿ ಪ್ರಚಾರ ನಡೆಸಲಿದೆ. ಪ್ರಧಾನಿಗಳು ತೆರಳುವ ಭಾಗದಲ್ಲಿ ಭದ್ರತಾದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಮಾರ್ಗ ಬದಲಾಯಿಸಿದ್ದಾರೆ. ಇತ್ತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಸಹ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ರೋಡ್ಶೋ ನಡೆಸಲಿದ್ದಾರೆ. ಪ್ರಧಾನಿಗಳು ಚಿತ್ರದುರ್ಗ, ಹೊಸಪೇಟೆ, ರಾಯಚೂರು ಮತ್ತು ಕಲಬುರಗಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಚಿಕ್ಕಬಳ್ಳಾಪುರ
ಇಂದು ಮಧ್ಯಾಹ್ನ ಚಿಂತಾಮಣಿಯಲ್ಲಿ ಸುಮಾರು ಎರಡು ಕಿ.ಮೀ. ರೋಡ್ಶೋನಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗಲಿದ್ದಾರೆ. ರೋಡ್ಶೋ ಹಿನ್ನೆಲೆ ಶಿಡ್ಲಘಟ್ಟದಿಂದ ಚಿಂತಾಮಣಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶಿಡ್ಲಘಟ್ಟದಿಂದ ವೈ ಹುಣಸೇನಹಳ್ಳಿ ಮಾರ್ಗವಾಗಿ ಕೈವಾರ ಕ್ರಾಸ್ ತಲುಪಬೇಕು. ಕೈವಾರ ಕ್ರಾಸ್ ನಿಂದ ಚಿನ್ನಸಂದ್ರ ಮಾರ್ಗವಾಗಿ ಚಿಂತಾಮಣಿಗೆ ಪ್ರಯಾಣಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಕಲಬುರಗಿ
ಪ್ರಧಾನಿಗಳ ರೋಡ್ಶೋ ಗಂಜ್ ಪ್ರದೇಶದ ಕೆಎಮ್ಎಫ್ನಿಂದ ಜಗತ್ ವೃತ್ತ ಮಾರ್ಗವಾಗಿ ಸರ್ಧಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಸಾಗಲಿದೆ. ರೋಡ್ ಶೋ ಮಾರ್ಗಗಳಲ್ಲಿ, ಹೆಲಿಪ್ಯಾಡ್ ಮತ್ತು ಐವಾನ್ ಎ ಶಾಹಿ ಸರ್ಕ್ಯೂಟ್ ಹೌಸ್ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಹಾರಾಟ ನಿಷೇಧಿಸಲಾಗಿದೆ. ರೋಡ್ ಶೋ ಹಿನ್ನೆಲೆ ನಗರದ ಜನತೆ ಈ ಮಾರ್ಗದಲ್ಲಿ ತೆರಳ ದಿರೋದು ಸೂಕ್ತ.
ಹೊಸಪೇಟೆ
ಪ್ರಧಾನಿಗಳ ಆಗಮನ ಹಿನ್ನೆಲೆ ಹೊಸಪೇಟೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ ಆದೇಶ ಹೊರಡಿಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಾಹನಗಳ ರಸ್ತೆ ಮಾರ್ಗ ಬದಲಾಯಿಸಲಾಗಿದೆ.
ರೈಲ್ವೆ ನಿಲ್ದಾಣ ರಸ್ತೆ,ಪುನೀತ್ ರಾಜಕುಮಾರ್ ವೃತ್ತ, ಕಾಲೇಜ್ ರಸ್ತೆ, ಸಾಯಿಬಾಬಾ ವೃತ್ತ ಮೂಲಕ ಸಂಚರಿಸುವ ಬಸ್, ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದು, ಎಪಿಎಂಸಿ, ವಾಲ್ಮೀಕಿ ವೃತ್ತದಿಂದ ರಾಮ ಟಾಕೀಸ್ ಮೂಲಕ ಬಸ್ಗಳು ನಿಲ್ದಾಣ ತಲುಪಬಹುದು.
ಚಿತ್ರದುರ್ಗ
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬರುವ ಪ್ರಯಾಣಿಕರು ಕ್ಯಾದಿಗೆರೆಯಿಂದ ಹೊಸ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 50ರಿಂದ ಚಿತ್ರದುರ್ಗ ಪ್ರವೇಶಿಸಬಹುದಾಗಿದೆ. ಇತ್ತ ದಾವಣಗೆರೆಯಿಂದ ಬರುವ ಪ್ರಯಾಣಿಕರು JMIT ಸರ್ಕಲ್ ಮುಖಾಂತರ ಚಿತ್ರದುರ್ಗವನ್ನು ಪ್ರವೇಶಿಸಬಹುದಾಗಿದೆ.
ಇದನ್ನೂ ಓದಿ: Karnataka Election 2023: ಇಂದು-ನಾಳೆ ಕರುನಾಡಲ್ಲಿ ಮತ್ತೆ ಮೋದಿ ಸುನಾಮಿ; ಇಲ್ಲಿದೆ ಪ್ರಧಾನಿಗಳ ವೇಳಾಪಟ್ಟಿ
ಇನ್ನು ದಾವಣಗೆರೆ, ಶಿವಮೊಗ್ಗ, ಬೆಂಗಳೂರು, ಹೊಸಪೇಟೆಯತ್ತ ಪ್ರಯಾಣಿಸಲು ಬಯಸುವವರು APMC ಮೇದೇಹಳ್ಳಿಯ ಮೂಲಕ ಸೀಬಾರ ಕ್ರಾಸ್ ಅಥವಾ ರಾಷ್ಟ್ರೀಯ ಹೆದ್ದಾರಿ 50ರ ಮುಖಾಂತರ ಬೈಪಾಸ್ ರಸ್ತೆಯನ್ನು ಸೇರಬಹುದಾಗಿದೆ. ಚಿತ್ರದುರ್ಗ ನಗರದ ಚಳ್ಳಕೆರೆ ಕ್ರಾಸ್ನಿಂದ ಮದಕರಿ ವೃತ್ತದವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ