ಚಿಕ್ಕಮಗಳೂರು (ಡಿ. 22) : ಹೊಸ ವರ್ಷಾಚರಣೆ ಹಿನ್ನಲೆ ಡಿಸೆಂಬರ್ ಕೊನೆ ವಾರದಲ್ಲಿಯೇ ಕಾಫಿನಾಡಿಗೆ ಹೊರಡಲು ಸಿದ್ದರಾಗಿದ್ದಾರೆ. ಈ ಯೋಜನೆಯನ್ನು ಬದಲಾಯಿಸಿಕೊಳ್ಳುವುದು ಒಳಿತು. ಕಾರಣ ಕಾಫಿನಾಡಿನಲ್ಲಿ ದತ್ತಜಯಂತಿ ಹಿನ್ನೆಲೆ ಆರು ದಿನಗಳ ಕಾಲ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ.ಬಗಾಧಿ ಗೌತಮ್ ಆದೇಶ ಹೊರಡಿಸಿದ್ದಾರೆ. ಡಿ. 25ರಿಂದ ಡಿ. 30ರವರೆಗೆ ಆರು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲೆಯ ಯಾವುದೇ ಪ್ರವಾಸಿತಾಣಕ್ಕೆ ಅವಕಾಶ ಇಲ್ಲ. ಆದರೆ, ಡಿ. 31ರ ಬಳಿಕ ಜಿಲ್ಲೆಗೆ ಆಗಮಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇದೇ ತಿಂಗಳ 19ನೇ ತಾರೀಖಿನಿಂದ ದತ್ತಜಯಂತಿ ಆರಂಭವಾಗಿದ್ದು, 29ನೇ ತಾರೀಖಿನಿವರೆಗೂ ಇರುತ್ತೆ. ಈಗಾಗಲೇ ದತ್ತಭಕ್ತರು ಮಾಲೆ ಧರಿಸಿ ವೃತ್ತದಲ್ಲಿದ್ದಾರೆ. ವೃತದಲ್ಲಿರೋ ಭಕ್ತರು ಡಿಸೆಂಬರ್ 27 ರಂದು ಅನಸೂಯ ಜಯಂತಿ, 28ರಂದು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತಪೀಠದಲ್ಲಿ ಪೂಜೆ ನಡೆಸಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಈ ಮೂರು ದಿನಗಳ ಕಾಲ ಕೂಡ ದತ್ತಪೀಠದಲ್ಲಿ ಪೂಜೆ ನಡೆಯಲಿದೆ. ಜೊತೆಗೆ, ರಾಜ್ಯಾದ್ಯಂತ ಮಾಲೆ ಧರಿಸಿರುವ ಭಕ್ತರು ಕೂಡ ಅಂದು ದತ್ತಪೀಠಕ್ಕೆ ಬಂದು ಪೂಜೆ ಸಲ್ಲಿಸಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಹಾಗೂ ಮಾಣಿಕ್ಯಧಾರ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಡಿಸೆಂಬರ್ 25 ಸಂಜೆ ಆರು ಗಂಟೆಯಿಂದ ಡಿಸೆಂಬರ್ 30ರ ಬೆಳಗ್ಗೆ ಆರು ಗಂಟೆಯವರೆಗೆ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿದೆ.
ಈಗಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಬಜರಂಗದಳದ 70ಕ್ಕೂ ಅಧಿಕ ದತ್ತಭಕ್ತರು ದತ್ತಮಾಲೆ ಧರಿಸುವ ಮೂಲಕ ದತ್ತಜಯಂತಿಗೆ ಅಧಿಕೃತ ಚಾಲನೆ ನೀಡಿದ್ದಾರೆ. ಹೀಗಾಗಿ 27 ರಿಂದ ಮೂರು ದಿನಗಳ ಕಾಲ ದತ್ತಜಯಂತಿ ನಡೆಯುತ್ತಿರುವುದರಿಂದ ಪ್ರವಾಸಿಗರು ಹಾಗೂ ದತ್ತಭಕ್ತರಿಗೆ ನಡುವೆ ಯಾವುದೇ ಗೊಂದಲ ಸೃಷ್ಟಿಯಾಗಬಾರದೆಂದು ಮುಜಾಗ್ರತಾ ಕ್ರಮವಾಗಿ ಆರು ದಿನಗಳ ಕಾಲ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಕರ್ನಾಟಕದ ಊಟಿ ಎಂದೇ ಪ್ರಸಿದ್ಧಿ ಪಡೆದಿರುವ ಜಿಲ್ಲೆ ಕೇವಲ ರಾಜ್ಯ ಮಾತ್ರವಲ್ಲದೇ ಅಂತರ್ರಾಜ್ಯ ಪ್ರಸಾಸಿಗರ ನೆಚ್ಚಿನ ತಾಣ. ಹಚ್ಚ ಹಸಿರಿನ ಪ್ರಕೃತಿ, ಗಿರಿ-ಶಿಖರಗಳ ಜೊತೆ ಅದ್ಭುತ ಪ್ರವಾಸಿ ತಾಣ ಹೊಂದಿರುವ ಜಿಲ್ಲೆಗೆ ಸದಾ ಪ್ರವಾಸಿಗರ ದಂಡು ಆಗಮಿಸುತ್ತಲೆ ಇರುತ್ತದೆ. ಜಿಲ್ಲೆ ಪ್ರವಾಸಿ ತಾಣದ ಜೊತೆಗೆ ಸೂಕ್ಷ್ಮ ಪ್ರದೇಶವೂ ಆಗಿರುವ ಹಿನ್ನಲೆ ಈ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲಿಯೂ ವರ್ಷಾಂತ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ