ಮಂಡ್ಯ (ಏ.18) : ನಟಿ ಸುಮಲತಾ ಅಂಡ್ ಟೀಮಿನ ಟೂರಿಂಗ್ ಟಾಕೀಸ್ ಟೆಂಟ್ ಮಂಡ್ಯದಿಂದ ಇಂದು ಸಂಜೆಯೇ ಖಾಲಿಯಾಗಲಿದೆ ಎಂದು ಜೆಡಿಎಸ್ ಮುಖಂಡ ಹಾಲಿ ಸಂಸದ ಶಿವರಾಮೇಗೌಡ ಮತ್ತೊಮ್ಮೆ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ.
ನಾಗಮಂಗಲದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು. ನಟಿ ಸುಮಲತಾ ಹಾಗೂ ನಟರಾದ ದರ್ಶನ್, ಯಶ್ ಕುರಿತು ಪರೋಕ್ಷ ದಾಳಿ ನಡೆಸಿರುವ ಅವರು, ಇಂದು ಸಂಜೆಯೇ ಟೂರಿಂಗ್ ಟಾಕೀಸ್ ಟೆಂಟ್ ಮಂಡ್ಯದಿಂದ ಖಾಲಿಯಾಗಲಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಹೀನಾಯವಾಗಿ ಸೋಲಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಮೈತ್ರಿ ಅಭ್ಯರ್ಥಿ ನಿಖಿಲ್ ಸುಮಾರು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಿಂಡಿಗಾಗಿ ಮತದಾನವೇ ಸ್ಥಗಿತ; ಮುಖ್ಯಮಂತ್ರಿ ಮತಚಲಾಯಿಸಿದ ಮತಗಟ್ಟೆಯಲ್ಲೇ ಹೀಗೊಂದು ಉಡಾಫೆ?
ಮಂಡ್ಯದಲ್ಲಿ ಚುನಾವಣಾ ಪ್ರಚಾರ ರಂಗೇರಿದ ದಿನದಿಂದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಅವರ ಪರವಾಗಿ ಪ್ರಚಾರನಿರತ ಸಿನಿಮಾ ನಟರಾದ ದರ್ಶನ್ ಹಾಗೂ ಯಶ್ ವಿರುದ್ಧ ಒಂದಲ್ಲಾ ಒಂದು ಬಗೆಯಲ್ಲಿ ಕಿಡಿಕಾರುತ್ತಿರುವ ಹಾಲಿ ಸಂಸದ ಶಿವರಾಮೇಗೌಡ ಮತದಾನದ ದಿನವಾದ ಇಂದೂ ಸಹ ತಮ್ಮ ದಾಳಿ ಮುಂದುವರೆಸಿದ್ಧಾರೆ. ಸುಮಲತಾ ವಿರುದ್ಧ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.
ಈ ಹಿಂದೆ ಸುಮಲತಾ ಅವರನ್ನು ಜಯಲಲಿತಾ ಅವರನ್ನೇ ಮೀರಿಸುವ ‘ಮಾಯಾಂಗನೆ’ ಎಂದು ಹೀಗೆಳೆಯುವ ಮೂಲಕ ಜನರ ಆಕ್ರೋಶಕ್ಕೆ ತುತ್ತಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ