ಬೆಂಗಳೂರು(ಡಿ. 05): ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು (Karnataka Bandh) ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಈ ಬಂದ್ ನಡೆಯಲಿದೆ. ಸರ್ಕಾರ ಬಂದ್ಗೆ ಯಾವುದೇ ಅವಕಾಶ ನೀಡುವುದಿಲ್ಲ. ಆದೇಶ ಮೀರಿ ಪ್ರತಿಭಟಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದೆ. ಆದರೆ ಸರ್ಕಾರದ ಎಚ್ಚರಿಕೆಗೂ ಮಣಿಯದ ಕನ್ನಡಪರ ಹೋರಾಟಗಾರರು ಇಂದು ಬಂದ್ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ. ಇಂದು ಬಂದ್ ನಡೆಯುತ್ತಾ? ಒಂದು ವೇಳೆ ಕರ್ನಾಟಕ ಬಂದ್ ನಡೆದರೆ ಯಾರೆಲ್ಲಾ ಬೆಂಬಲ ನೀಡಲಿದ್ದಾರೆ? ಎಲ್ಲೆಲ್ಲಿ ಬಂದ್ ನಡೆಯಲಿದೆ? ಬಂದ್ ದಿನ ಏನಿರುತ್ತೆ? ಏನಿರಲ್ಲ ಎಂಬೆಲ್ಲಾ ಮಾಹಿತಿ ಇಲ್ಲಿದೆ.
ರಾಜ್ಯ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಮರಾಠ ಅಭಿವೃದ್ದಿ ನಿಗಮ ರಚನೆ ಮಾಡುವುದಾಗಿ ಆದೇಶ ಹೊರಡಿಸಿತ್ತು. ಇದಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಜೊತೆಗೆ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ವಾಟಾಳ್ ನಾಗರಾಜ್ ನವೆಂಬರ್ 30ರವರೆಗೆ ಗಡುವು ಕೊಟ್ಟಿದ್ದರು. ಆದರೆ ಸರ್ಕಾರ ಮಾತ್ರ ಹೋರಾಟಗಾರರ ಗಡುವಿಗೆ ಮಣಿದಿಲ್ಲ. ಇತ್ತ ಕನ್ನಡಪರ ಹೋರಾಟಗಾರರು ಸಹ ಸರ್ಕಾರದ ನಡೆಯನ್ನು ವಿರೋಧಿಸಿ ಡಿ.5ರಂದು ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ನಿರ್ಧರಿಸಿದ್ದಾರೆ.
ಇನ್ನು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಬಂದ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕರ್ನಾಟಕ ಬಂದ್ಗೆ ಕನ್ನಡ ರಕ್ಷಣಾ ವೇದಿಕೆ ಬೆಂಬಲ ನೀಡಿದೆ. ಜೊತೆಗೆ 50ಕ್ಕೂ ಹೆಚ್ಚು ಸಂಘಟನೆಗಳು ಬಹಿರಂಗವಾಗಿ ಇಂದಿನ ಬಂದ್ಗೆ ಬೆಂಬಲ ನೀಡಿವೆ. ಇದೇ ರೀತಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪರೋಕ್ಷವಾಗಿ ಬಂದ್ಗೆ ಬೆಂಬಲ ಸೂಚಿಸಿವೆ. ಬಿಜೆಪಿ ನಾಯಕರು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಕಿಡಿಕಾರಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಬಂದ್ ಮಾಡದಂತೆ ಕನ್ನಡಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪರ-ವಿರೋಧಗಳ ನಡುವೆ ಇಂದು ಬಂದ್ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಓಲಾ-ಊಬರ್-ಬಸ್-ಮೆಟ್ರೋ ಸಂಚಾರ ಇರುತ್ತಾ?
ಇಂದಿನ ಕರ್ನಾಟಕ ಬಂದ್ ನಡೆಯುವ ಹಿನ್ನೆಲೆ, ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಸಹ ಹೇಳಿದ್ದಾರೆ. ಕೆಎಸ್ಆರ್ಟಿಸಿ ಬಸ್ಗಳೂ ಸಹ ಎಂದಿನಂತೆ ಸಂಚಾರ ನಡೆಸಲಿದೆ ಎಂದು ತಿಳಿದು ಬಂದಿದೆ.
ಇನ್ನು, ಬೆಂಗಳೂರಿನಲ್ಲಿ ಮೆಟ್ರೋ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಬಂದ್ಗೆ ಓಲಾ, ಉಬರ್ ಚಾಲಕರ ಸಂಘವು ಬೆಂಬಲ ನೀಡಿದೆ. ಇದರಿಂದಾಗಿ ಆಟೋ, ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿರುತ್ತವೆ. ಬೀದಿ ಬದಿ ವ್ಯಾಪಾರಿಗಳು ಕರ್ನಾಟಕ ಬಂದ್ಗೆ ಬೆಂಬಲ ನೀಡಿವೆ. ಹೋಟೆಲ್ ಮಾಲೀಕರ ಸಂಘವು ಬಂದ್ಗೆ ನೈತಿಕ ಬೆಂಬಲ ನೀಡಿದೆ. ಹೀಗಾಗಿ ಹೋಟೆಲ್ಗಳು ತೆರೆದಿರುತ್ತವೆ.
ಇದನ್ನು ಓದಿ: 3 ವರ್ಷದಿಂದ ಸಗಣಿ ಎತ್ತಿಕೊಂಡು ಜೀವನ ಮಾಡುತ್ತಿದ್ದೇನೆ, ಸುಳ್ಳುಸುದ್ದಿ ಹಬ್ಬಿಸಿ ನನ್ನ ಜೀವನ ಹಾಳು ಮಾಡಬೇಡಿ; ವರ್ತೂರು ಪ್ರಕಾಶ್
ಬಂದ್ ಹಿನ್ನೆಲೆ: ಪೊಲೀಸ್ ಬಂದೋಬಸ್ತ್
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಬಂದ್ಗೆ 50ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ಹೀಗಾಗಿ, 15 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬೆಳಗ್ಗೆಯಿಂದ ಪೊಲೀಸರು ಎಲ್ಲಾ ಕಡೆ ಗಸ್ತು ತಿರುಗಲಿದ್ದಾರೆ. 5 ಜನ ಅಡಿಷನ್ ಸಿಪಿಗಳು, ಡಿಸಿಪಿಗಳು, ಎಸಿಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ. ಇದುವರೆಗೂ ಬೆಂಗಳೂರಿನಲ್ಲಿ ಕರ್ನಾಟಕ ಬಂದ್ಗೆ ಯಾರೂ ನಮ್ಮ ಬಳಿ ಅನುಮತಿ ಕೇಳಿಲ್ಲ, ನಾವೂ ಕೊಟ್ಟಿಲ್ಲ ಎಂದು ಕಮಲ್ ಪಂತ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ