ಬೆಂಗಳೂರು; ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಇದುವರೆಗೂ 29 ಎಫ್ಐಆರ್ ದಾಖಲಾಗಿವೆ. ಇಂದು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 7 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಕಿಡಿಗೇಡಿಗಳು ಮನೆಯ ಒಳಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದು, ಹಣ ಹಾಗೂ ನಗದನ್ನು ದೋಚಿರುವುದನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇದರ ಜೊತೆಗೆ ಮನೆಯ ಮುಂಭಾಗ ನಿಲ್ಲಿಸಿದ್ದ ವಾಹನಗಳಿಗೂ ಸಹ ಬೆಂಕಿ ಹಚ್ಚಿದ್ದಾರೆ. ಹಾಗಾಗಿ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ನಿನ್ನೆಯವರೆಗೂ ಡಿಜೆ ಹಳ್ಳಿಯಲ್ಲಿ 11 ಹಾಗೂ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ 11 ಎಫ್ಐಆರ್ಗಳು ದಾಖಲಾಗಿದ್ದವು. ಇಂದು ದಾಖಲಾದ ಎಲ್ಲಾ ಎಫ್ಐಆರ್ಗಳಲ್ಲಿಯೂ ಅನಾಮಧೇಯ ವ್ಯಕ್ತಿಗಳನ್ನು ಆರೋಪಿಗಳಾಗಿ ಮಾಡಲಾಗಿದೆ. ಒಂದು ಕಡೆ ಸಿಸಿಬಿ ಪೊಲೀಸರು ಒಟ್ಟು 7 ತಂಡಗಳನ್ನು ರಚನೆ ಮಾಡಿಕೊಂಡಿದ್ದು, ಇದುವರೆಗೂ 206 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದರೆ ಜೈಲು ಬಳಿ ಗಲಾಟೆ ಮಾಡುವ ಸಾಧ್ಯತೆ ಇರುವ ಕಾರಣಕ್ಕೆ, ಮುನ್ನೆಚ್ಚರಿಕೆಯಾಗಿ 80 ಜನ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಕಳುಹಿಸಿಕೊಡಲಾಗಿದೆ.
ಇದನ್ನು ಓದಿ: ಶಂಕರಾಚಾರ್ಯರ ಪುತ್ಥಳಿಗೆ ಹಸಿರು ಬಾವುಟ ಪ್ರಕರಣಕ್ಕೆ ತೆರೆ; ಕುಡಿದ ನಶೆಯಲ್ಲಿ ಕೃತ್ಯ, ತಪ್ಪೊಪ್ಪಿಕೊಂಡ ಆರೋಪಿ
ಇತ್ತ ಸಿಸಿಬಿ ಪೊಲೀಸರು ಸುಮಾರು 20ಕ್ಕೂ ಹೆಚ್ಚು ಆರೋಪಿಗಳನ್ನು 5 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಾ ಇದ್ದಾರೆ. ಅದ್ರಲ್ಲಿ ಎಸ್ಡಿಪಿಐ ಮುಖಂಡ ಹಾಗೂ ಕಾರ್ಯಕರ್ತರು ಸಹ ಇದ್ದು, ಸಿಸಿಬಿ ಪೊಲೀಸರು ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಘಟನೆ ನಡೆದ ಸ್ಥಳದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವುಗಳ ಪರಿಶೀಲನೆ ಬಳಿಕ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಅಲ್ಲದೇ ಘಟನೆ ಸಂಬಂಧ ಮತ್ತಷ್ಟು ಎಫ್ಐಆರ್ಗಳು ದಾಖಲಾಗುವ ಸಾಧ್ಯತೆಯೂ ಸಹ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ