ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Assembly Election 2023) ರಾಜ್ಯದಲ್ಲಿ ದಿನಗಣನೇ ಶುರುವಾಗಿದೆ. ಆಡಳಿತರೂಢ ಬಿಜೆಪಿ (BJP) ಮತ್ತೆ ಅಧಿಕಾರ ಹಿಡಿಯಬೇಕು ಎಂಬ ಹೆಬ್ಬಯಕೆಯ ಹೊಂದಿದ್ದರೆ, ಕಾಂಗ್ರೆಸ್ (Congress) ಬಿಜೆಪಿಯನ್ನು ಮಣ್ಣು ಮುಕ್ಕಿಸಲೇ ಬೇಕು ಎಂಬ ಪ್ರಯತ್ನದಲ್ಲಿದೆ. ಜೆಡಿಎಸ್ (JDS) ಕೂಡ ಈ ಪ್ರಯತ್ನದಲ್ಲಿ ಹಿಂದೆ ಬಿದ್ದಿಲ್ಲ. ರಾಜ್ಯದ ಪ್ರಬಲ ಪಕ್ಷಗಳ ಜೊತೆ ಸ್ವತಂತ್ರ್ಯ ಅಭ್ಯರ್ಥಿಗಳೂ ಸಹ ಗೆಲ್ಲುವ ನಿರೀಕ್ಷೆಯಲ್ಲಿ ಮತಬೇಟೆ, ರೋಡ್ ಶೋ, ಮನೆಮನೆ ಭೇಟಿ ಅಂತಾ ಬಿಡುವಿಲ್ಲದೇ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಚುನಾವಣೆಗೆ ದಿನಾಂಕ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯೂ ಮುಗಿದಿದೆ. ಈಗೇನಿದ್ದರೂ ಮೂರು ಪಕ್ಷಗಳಿಗೂ ಅಂತಿಮ ಹಂತದಲ್ಲಿ ಪ್ರಚಾರ ಒಂದೇ ಮುಖ್ಯವಾಗಿದೆ. ಹಾಗಿದ್ದರೆ ರಾಜ್ಯದಲ್ಲಿ ಕೊನೆಯ ಹಂತದ ಪ್ರಚಾರ ಪಕ್ಷಗಳಿಗೆ ಏಕೆ ನಿರ್ಣಾಯಕವಾಗಿದೆ ಎಂಬುದನ್ನು ನೋಡೋಣ.
ಬಿಜೆಪಿ
ಬಿಜೆಪಿ ಕಳೆದ ಒಂದು ವರ್ಷದಿಂದ ಪಕ್ಷದ ಪರವಾಗಿ ಅಲೆ ಎಬ್ಬಿಸಲು ರಾಜ್ಯದಲ್ಲಿ ಸುಮಾರು ಯಾತ್ರೆಗಳನ್ನು ಕೈಗೊಂಡಿತ್ತು. ಪರಿವರ್ತನಾ ಯಾತ್ರೆ, ಬೂತ್ ವಿಜಯ, ಜನ ಸಂಕಲ್ಪ ಯಾತ್ರೆ ಹೀಗೆ ಅನೇಕ ಯಾತ್ರೆಗಳನ್ನು ರಾಜ್ಯದ ತುಂಬೆಲ್ಲಾ ನಡೆಸಿತ್ತು.
ಪ್ರಧಾನಿ ಮೋದಿ ಕೂಡ ಜನರನ್ನು ಸೆಳೆಯಲು ರಾಜ್ಯದಲ್ಲಿ ರೋಡ್ ಶೋ ಹಮ್ಮಿಕೊಂಡಿದ್ದರು. ಈಗ ಪ್ರಮುಖ ಘಟ್ಟಕ್ಕೆ ಬಂದಿರುವ ಪಕ್ಷಕ್ಕೆ ಉಳಿದ ದಿನಗಳ ಪ್ರಚಾರ ತುಂಬಾ ನಿರ್ಣಾಯಕವಾಗಿದೆ.
ಬಿಜೆಪಿಗೆ ಈ ಚುನಾವಣೆ ನಿರ್ಣಾಯಕ
ಬಿಜೆಪಿಯ ಚುಕ್ಕಾಣಿ ಹಿಡಿಯುವ ಭರವಸೆಯು ಈ ಕೊನೆಯ ಹಂತದ ಪ್ರಚಾರದ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಸ್ಟಾರ್ ಪ್ರಚಾರಕರು ಉಳಿದ ಕೆಲ ದಿನಗಳಲ್ಲಿ ಮತದಾರರನ್ನು ಓಲೈಸುವ ಪ್ರಯತ್ನದಲ್ಲಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ನೊಂದಿಗೆ ತೀವ್ರ ಪೈಪೋಟಿಯಲ್ಲಿ ಸಿಲುಕಿರುವ ಬಿಜೆಪಿಗೆ ಈ ಚುನಾವಣೆ ನಿರ್ಣಾಯಕವಾಗಿದ್ದು, ಮೋದಿಯವರ ವರ್ಚಸ್ಸನ್ನು ಉಳಿಸುವ ಸಲುವಾಗಿ ಗೆಲ್ಲಲೇ ಬೇಕು ಎಂಬ ಅನಿವಾರ್ಯತೆ ಕೂಡ ಇದೆ.
ಬಿಜೆಪಿ ರಣತಂತ್ರ
ಮತದಾರರನ್ನು ತಲುಪುವ ಯೋಜನೆಗಳ ಭಾಗವಾಗಿ ಪಕ್ಷವು ಅಸ್ಸಾಂ, ಮಹಾರಾಷ್ಟ್ರ, ಕೇರಳ, ಗೋವಾ ಮತ್ತು ತಮಿಳುನಾಡುಗಳಿಂದ ವಿಶೇಷ ತಂಡಗಳನ್ನು ಸಹ ರಚಿಸಿದೆ. ಪ್ರಚಾರದ ಅಂತಿಮ ಹಂತದಲ್ಲಿ ಡಬಲ್-ಇಂಜಿನ್ ಸರ್ಕಾರದ ಪ್ರಯೋಜನಗಳ ಬಗ್ಗೆ ಹೆಚ್ಚು ಮಾತನಾಡಲು ಬಿಜೆಪಿ ನಿರ್ಧರಿಸಿದೆ.
ಕಾಂಗ್ರೆಸ್
ಕಾಂಗ್ರೆಸ್ ಗುರಿ ಒಂದೇ, ಹೇಗಾದರೂ ಕಮಲ ಕಲಿಗಳನ್ನು ಸೋಲಿಸುವುದು. ಭ್ರಷ್ಟ ಸರ್ಕಾರ ಎಂದು ಯಾವಾಗಲೂ ಬಿಜೆಪಿಯನ್ನು ದೂರುವ ಕಾಂಗ್ರೆಸ್ ರಾಜ್ಯದಲ್ಲಿ ಕೇಸರಿ ಪ್ರಾಬಲ್ಯವನ್ನು ಮುರಿಯುವ ಧಾವಂತದಲ್ಲಿದೆ.
ಅಂತಿಮ ಹಂತದಲ್ಲಿ, ಪಕ್ಷವು ಆವೇಗವನ್ನು ಉಳಿಸಿಕೊಳ್ಳಲು ಮತ್ತು ಬಿಜೆಪಿಯನ್ನು ಹಿಮ್ಮೆಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ವಿಶೇಷವಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪಗಳು ಮತ್ತು ಬಿಜೆಪಿ ಲಿಂಗಾಯತರನ್ನು ಕೆಟ್ಟದಾಗಿ ನಡೆಸಿಕೊಂಡ ವಿಷಯವನ್ನು ಅಸ್ತ್ರವಾಗಿರಿಕೊಂಡು ಬಿಜೆಪಿ ವರ್ಚಸ್ಸನ್ನು ಕುಗ್ಗಿಸುವ ಪ್ರಯತ್ನದಲ್ಲಿದೆ.
ಪರಿಣಾಮ ಬೀರುತ್ತಾ ಭಾರತ್ ಜೋಡೋ ಯಾತ್ರೆ?
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಸಾಕಷ್ಟು ಪರಿಣಾಮ ಬೀರಿತ್ತು. ಮೋದಿ-ಶಾ ಪ್ರಚಾರಗಳನ್ನು ಎದುರಿಸಲು, ಪಕ್ಷವು ಅವರ ಪ್ರಮುಖ ಪ್ರಚಾರಕರಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರಿಂದ ರಾಜಕೀಯ ರ್ಯಾಲಿಗಳು ಮತ್ತು ರೋಡ್ಶೋಗಳ ಸರಣಿಯನ್ನು ಸಹ ಆಯೋಜಿಸಿದೆ.
ಸೋನಿಯಾ ಗಾಂಧಿ ಕೂಡ ಚುನಾವಣೆ ಹತ್ತಿರ ಒಂದೆರಡು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಪಕ್ಷವು ರೈತರಿಗೆ ತನ್ನ ಐದನೇ ಮತ್ತು ಅಂತಿಮ ಚುನಾವಣಾ ಗ್ಯಾರಂಟಿಯನ್ನು ಘೋಷಿಸಲು ನಿರ್ಧರಿಸಿದೆ.
ಜೆಡಿಎಸ್
ವರ್ಷದ ಮೊದಲೇ ವಿಧಾನಸಭಾ ಚುನಾವಣಾ ತಯಾರಿಯನ್ನು ಜೆಡಿಎಸ್ ಆರಂಭಿಸಿತ್ತು. ಚುನಾವಣೆ ಮುನ್ನ ಯಾತ್ರೆ, ಯೋಜನೆ ಅಂತಾ ಅಡಿಪಾಯ ಹಾಕಿದ್ದ ಜೆಡಿಎಸ್ ದಿನಾಂಕ ಘೋಷಣೆ ಆದಮೇಲೆ ಮತ್ತಷ್ಟು ಚುರುಕಿನಿಂದ ಕೆಲಸ ಆರಂಭಿಸಿತು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ವ್ಯಾಪಕ ಪ್ರಚಾರ ಕೈಗೊಂಡಿದೆ. ಆದರೆ ಪಕ್ಷದ ಪ್ರಭಾವಿ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪಕ್ಷವು ಈಗ ಬಲ ಕಳೆದುಕೊಂಡಿದೆ.
ಪ್ರಚಾರದಲ್ಲಿ ದೇವೇಗೌಡರು ಸಕ್ರಿಯ
ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು, ಅನಾರೋಗ್ಯದಿಂದ ಬಳಲುತ್ತಿರುವ ಕುಮಾರಸ್ವಾಮಿಯವರು ಶೀಘ್ರದಲ್ಲೇ ಗುಣಮುಖರಾಗಲಿ ಮತ್ತು ಪ್ರಚಾರದ ಹಾದಿಗೆ ಬರಲಿ ಎಂದು ಆಶಿಸುತ್ತಿದ್ದಾರೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು.
ಇದನ್ನೂ ಓದಿ: Karnataka Politics: ಸಾಲು ಸಾಲು ರಾಜೀನಾಮೆಗಳಿಂದ ಇಳಿಮುಖವಾಗುತ್ತಿದೆ ಕರ್ನಾಟಕ ವಿಧಾನ ಪರಿಷತ್ತಿನ ಸಂಖ್ಯಾಬಲ
ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಹೊಂದಿರುವುದರಿಂದ ಪ್ರಚಾರ ಕಣದಿಂದ ಹಿಂದೆ ಸರಿದರೆ ಅಭ್ಯರ್ಥಿಗಳಿಗೆ ನಷ್ಟವಾಗಬಹುದು.
ಇಲ್ಲಿನ ಅನೇಕ ಅಭ್ಯರ್ಥಿಗಳು ಕುಮಾರಸ್ವಾಮಿ ಬಲದಿಂದಲೇ ಆಯ್ಕೆಯಾಗಿ ಬಂದಿದ್ದಾರೆ ಎಂದರೆ ತಪ್ಪಾಗಲಾರದು. ಒಟ್ಟಾರೆ ಕನಿಷ್ಠ 40 ಸ್ಥಾನಗಳನ್ನು ಗೆದ್ದು ಕಿಂಗ್ಮೇಕರ್ ಆಗಿ ಹೊರಹೊಮ್ಮುವ ಭರವಸೆಯಲ್ಲಿರುವ ಜೆಡಿಎಸ್ಗೆ ಈ ಉಳಿದ ದಿನಗಳು ತುಂಬಾನೇ ನಿರ್ಣಾಯಕವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ