ಆನೇಕಲ್(ಆ.10): ಕೊರೋನಾ ಮಾನವನಿಗೆ ಮಾರಕವಾದರೆ, ವನ್ಯಜೀವಿಗಳಿಗೆ ವರವಾದಂತೆ ಕಾಣುತ್ತಿದೆ. ಕೊರೋನಾ ಕಾಟಕ್ಕೆ ಜನ ಗೂಡು ಸೇರಿಕೊಂಡರೆ ಕಾಡು ಪ್ರಾಣಿಗಳು ಮಾತ್ರ ಕಾಡಿನಿಂದ ಹೊರಬಂದು ಸ್ವಚ್ಛಂದವಾಗಿ ವಿಹರಿಸುತ್ತಿವೆ.
ಹೌದು, ಅದಕ್ಕೆ ತಾಜ ಉದಾಹರಣೆ ಇತ್ತೀಚೆಗೆ ತೋಟವೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಹುಲಿ ಮತ್ತು ಕರಡಿ ಸಾಗುತ್ತಿರುವ ದೃಶ್ಯ ಸೆರೆಯಾಗಿದೆ. ಬೆಂಗಳೂರಿಗೆ ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತಿರುವ ಜೈಪುರದೊಡ್ಡಿ ಬಳಿಯ ತೋಟದ ಬಳಿ ಹುಲಿ ಮತ್ತು ಕರಡಿ ಚಲನವಲನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಅರಣ್ಯದಂಚಿನಲ್ಲಿರುವ ತಮ್ಮ ತೋಟದಲ್ಲಿ ವಿಷ್ಣು ನಾರಾಯಣ್ ಎಂಬುವವರು ರಕ್ಷಣೆಗಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಅವುಗಳಲ್ಲಿ ರಾತ್ರಿ ವೇಳೆ ಹುಲಿ ಮತ್ತು ಕರಡಿ ಸಾಗುತ್ತಿರುವ ದೃಶ್ಯ ಸೆರೆಯಾಗಿದೆ.
ಹುಲಿ ಮತ್ತು ಕರಡಿ ಸಿಸಿ ಕ್ಯಾಮರಾಗಳಲ್ಲಿ ಗೋಚರವಾಗಿರುವ ವಿಚಾರ ಕಾಡಂಚಿನ ಗ್ರಾಮ ವಾಸಿಗಳಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ಸಹ ಹುಲಿ ಮತ್ತು ಅದರ ಮರಿಗಳು ಕೃಷ್ಣದೊಡ್ಡಿ ಸಮೀಪದ ಗುಡ್ಡದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದ್ದವು. ಇದೀಗ ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳ ಸಮೀಪದ ತೋಟದ ಸಮೀಪವೇ ಹುಲಿ ಕರಡಿ ಹಾದು ಹೋಗಿದೆ. ಇದು ಅರಣ್ಯದಂಚಿನ ಗ್ರಾಮ ವಾಸಿಗಳಿಗೆ ಆತಂಕ ಮೂಡಿಸಿದ್ರೆ. ಪ್ರಾಣಿ ಪ್ರಿಯರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಹುಲಿ ಒಂದು ಕಾಡು ಪ್ರದೇಶವನ್ನು ತನ್ನ ವಾಸಸ್ಥಳವನ್ನಾಗಿ ಮಾಡಿಕೊಂಡರೇ ಆ ಪ್ರದೇಶ ಸಮೃದ್ಧವಾಗಿದೆ ಎನ್ನಲಾಗುತ್ತದೆ. ಹುಲಿ ವಾಸವಿದ್ದರೆ ಅಲ್ಲಿ ಹೇರಳವಾದ ಜೀವ ಸಂಕುಲವಿರುತ್ತದೆ. ಅದ್ರಲ್ಲು ಜಿಂಕೆ, ಕಡವೆ, ಹಂದಿ, ಕಾಡು ಕುರಿ ಹೀಗೆ ಅಪರೂಪದ ವನ್ಯಜೀವಿಗಳ ದಂಡೆ ಇರುತ್ತದೆ. ಹಾಗಾಗಿ ಹುಲಿ ಕಾಣಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದ್ರೆ ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಅರಣ್ಯ ಅಧಿಕಾರಿಗಳು ಕ್ರಮ ವಹಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ