news18-kannada Updated:January 21, 2021, 4:43 PM IST
ಸಾಂದರ್ಭಿಕ ಚಿತ್ರ
ಕೊಡಗು(ಜ.21): ಆಗ ತಾನೇ ನಿರ್ಮಾಣಗೊಂಡ ಶೆಡ್ ನಲ್ಲಿಯ ಅಂಗನವಾಡಿ ಮುಂಭಾಗ ನಿಂತು ನೋಟ್ ಪುಸ್ತಕಗಳ ಪಡೆದು ಸಂಭ್ರಮಿಸುತ್ತಿರುವ, ಪುಟಾಣಿಗಳು. ನಮಗೂ ಒಂದು ಅಂಗನವಾಡಿ ಆಯ್ತಲ್ಲಾ ಎನ್ನೋ ಸಂತಸ. ಆದರೆ ಈ ಸಂತಸದ ಹಿಂದೆ ಊಹೆಗೂ ಮೀರಿದ ನೋವು, ಸಂಕಟವಿದೆ. ಹೌದು ಈ ಪುಟಾಣಿಗಳಿಗೂ ತಾವೂ ಅಂಗನವಾಡಿಗೆ ಹೋಗಬೇಕೆಂಬ ಬೆಟ್ಟದಷ್ಟು ಆಸೆ ಇದೆ. ಆದರೆ ತಾವಿರುವ ಊರಿನಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಅಂಗನವಾಡಿಗೆ ಹೋಗಲು ಸಾಧ್ಯವಾಗದೆ ಸುಮ್ಮನಿದ್ದರು. ಆದರೆ ಅಂಗನವಾಡಿ ಯಾಕಿಲ್ಲ ಎನ್ನೋ ಪ್ರಶ್ನೆಯನ್ನು ಕೆದಕಿದರೆ, ಇಡೀ ಊರಿನ ಹೀನಾಯ ಸ್ಥಿತಿಯ ಚಿತ್ರಣಗಳು ಒಂದೊಂದೇ ಬಿಚ್ಚಿಕೊಳ್ಳುತ್ತವೆ.
ಭಾರತ ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಅಷ್ಟೇ ಏಕೆ ಈಗ ಡಿಜಿಟಲ್ ದೇಶವಾಗುತ್ತಿದೆ. ಆದರೆ ಈ ಗ್ರಾಮಕ್ಕೆ ಮಾತ್ರ ಸೈಕಲ್ ಚಲಿಸಲು ಸಾಧ್ಯವಿಲ್ಲ. ಅಷ್ಟೇ ಏಕೆ 21ನೇ ಶತಮಾನದಲ್ಲಿರುವ ಇವರಿಗೆ ಇಂದಿಗೂ ಕುಡಿಯಲು ಬೆಟ್ಟದಿಂದ ಜಿನುಗುವ ನೀರೇ ಗತಿ. ಹೌದು ಇಂತಹ ಹೀನಾಯ ಸ್ಥಿತಿ ಇರೋದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕೆರೆತಟ್ಟು ಪೈಸಾರಿಯಲ್ಲಿ. ಕುಡಿಯ ಸಮುದಾಯ ಅಡಿಯರ ಕಾಲೋನಿಯ ದುಃಸ್ಥಿತಿ ಇದು.
ತಲಾತಲಾಂತರಗಳಿಂದ ಎಸ್ಸಿ ಕಮ್ಯುನಿಟಿಗೆ ಸೇರಿದ ಅಡಿಯ ಜಾತಿಯ 43 ಕುಟುಂಬಗಳು ಇಲ್ಲಿ ಬದುಕುತ್ತಿವೆ. ವಿಪರ್ಯಾಸವೆಂದರೆ ಕನಿಷ್ಠ ರಸ್ತೆ ಇಲ್ಲ. ಎಂತಹದ್ದೇ ಸ್ಥಿತಿಯಲ್ಲೂ ಕಾಡು ನಡುವೆ ಇರುವ ಕಾಲು ದಾರಿಯಲ್ಲಿ ನಡೆದೇ ಸಾಗಬೇಕು. ಯವಕಪಾಡಿಯಿಂದ 8 ಕಿಲೋಮೀಟರ್ ದೂರದಲ್ಲಿರುವ ಕೆರೆತಟ್ಟು ಪೈಸಾರಿಗೆ ಸಾಗಬೇಕಾದರೆ ನಡೆಯದೇ ಬೇರೆ ವಿಧಿಯಿಲ್ಲ. ಕೆರೆತಟ್ಟು ಪೈಸಾರಿಯಿಂದ ಐದು ಕಿಲೋಮೀಟರ್ ದೂರದಲ್ಲಿ ಪ್ರಸಿದ್ಧ ರೆಸಾರ್ಟ್ ಇದೆ. ರೆಸಾರ್ಟ್ವರೆಗೆ ರೆಸ್ತೆ ಇದ್ದು, ರೆಸಾರ್ಟ್ ಬಳಿಯಿಂದ ಮೂರು ಕಿಲೋ ಮೀಟರ್ ಪುನಃ ಕಾಲ್ನಡಿಗೆಯಲ್ಲೇ ಕೆರೆತಟ್ಟು ಪೈಸಾರಿ ಕಾಲೋನಿಯನ್ನು ತಲುಪಬೇಕು.
ಗಣರಾಜ್ಯೋತ್ಸವದಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಾರ್ವಜನಿಕರಿಗೆ ಮುಕ್ತ
“ಒಮ್ಮೆ ಮಧ್ಯರಾತ್ರಿ ಮೂರು ಗಂಟೆಗೆ ತನಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ರಸ್ತೆ ಸಮಸ್ಯೆಯಿಂದಾಗಿ ವಾಹನಗಳೇ ಇಲ್ಲದೆ, ನಡೆದು ಹೋಗಿ ನನ್ನ ಮಗುವಿಗೆ ಜನ್ಮ ನೀಡಿದೆ” ಎನ್ನುತ್ತಾರೆ ಅಲ್ಲಿನ ನಿವಾಸಿ ಸವಿತಾ. ಮತ್ತೊಂದು ಸಮಸ್ಯೆಯೆಂದರೆ, ಯವಕಪಾಡಿಯಿಂದ ರೆಸಾರ್ಟ್ ವರೆಗೆಯಾದರೂ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ. ಖಾಸಗೀ ಜೀಪುಗಳನ್ನು ಸಾವಿರ ರೂಪಾಯಿ ಕೊಟ್ಟು ಬಾಡಿಗೆ ಮಾಡಿಕೊಂಡು ಹೋಗಬೇಕು. ಹೀಗಾಗಿಯೇ ಪಿಯುಸಿ ಮುಗಿಸಿದ್ದರೂ ಓಡಾಡಲು ವ್ಯವಸ್ಥೆಯಿಲ್ಲದೆ, ಮುಂದಿನ ಶಿಕ್ಷಣವನ್ನು ಬಿಟ್ಟು ಮನೆಯಲ್ಲಿದ್ದೇನೆ ಎನ್ನುತ್ತಾನೆ ಯುವಕ ಧರ್ಮರಾಜ್.
ಇಂದಿಗೂ ಬೆಟ್ಟದಿಂದ ಜಿನುಗುವ ಝರಿಯ ನೀರನ್ನು ಸಂಗ್ರಹಿಸಿ ಒತ್ತುತಂದು ಜನರು ಕುಡಿಯುತ್ತಿದ್ದಾರೆ. ಕಾಡಿನೊಳಗೆ ಹೋಗುವ ವೃದ್ಧೆಯರು ಝರಿಯಿಂದ ನೀರು ಸಂಗ್ರಹಿಸಿ ಹೊತ್ತು ತರುತ್ತಾರೆ. ಕೆಲವರು ಈ ಝರಿಗೆ ಸ್ವಂತ ಖರ್ಚಿನಿಂದ ಪೈಪುಗಳನ್ನು ಜೋಡಿಸಿಕೊಂಡಿದ್ದು ನೀರನ್ನು ತಲೆ ಮೇಲೆ ಹೊರುವುದರಿಂದ ಪಾರಾಗಿದ್ದಾರೆ. ಆದರೆ ಬೇಸಿಗೆ ಶುರುವಾಯಿತೆಂದರೆ ಈ ಝರಿ ನೀರು ಕೂಡ ಬತ್ತಿಹೋಗಿ ಕುಡಿಯುವ ನೀರಿಗೆ ಆಹಾಕಾರ ಶುರುವಾಗುತ್ತದೆ.
ಗ್ರಾಮದಲ್ಲಿ 15 ಕ್ಕೂ ಹೆಚ್ಚು ಅಂಗನವಾಡಿಗೆ ಹೋಗುವ ಮಕ್ಕಳಿದ್ದು, ಅಂಗನವಾಡಿಯೂ ಇಲ್ಲ ಎನ್ನೋದು ಆಶ್ಚರ್ಯದ ಸಂಗತಿ. ಇದೆಲ್ಲವನ್ನೂ ಗಮನಿಸಿದ ಭೂಮಿ ಮತ್ತು ವಸತಿ ರಹಿತ ಹೋರಾಟ ಸಮಿತಿ ಗ್ರಾಮದ ಯುವಕರ ನೆರವಿನಿಂದ ಶೆಡ್ ನಿರ್ಮಿಸಿ ಅಂಗನವಾಡಿ ಆರಂಭಿಸಿದ್ದೇವೆ ಎನ್ನುತ್ತಾರೆ ಯುವಕ ದಿಲೀಶ್. ಸಮಸ್ಯೆಗಳ ಕುರಿತು ಅಧಿಕಾರಿಗಳನ್ನು ಕೇಳಿದರೆ, ಹಿಂದೆಯೇ ಅಂಗನವಾಡಿ ತೆರೆಯಲು ಪ್ರಯತ್ನಿಸಲಾಗಿತ್ತು. ಆದರೆ ಗ್ರಾಮದವರಲ್ಲೇ ಒಗ್ಗಟ್ಟಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿ ನುಳುಚಿಕೊಳ್ಳುತ್ತಿದ್ದಾರೆ.
Published by:
Latha CG
First published:
January 21, 2021, 4:43 PM IST