ಕೊಡಗು: ಬ್ಯಾಂಕ್ ದರೋಡೆಗೆ ವಿಫಲ ಯತ್ನ, ಬರಿಗೈಲಿ ವಾಪಸ್ಸಾದ ಖದೀಮರು
ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ. ದರೋಡೆಗೆ ವಿಫಲಯತ್ನ ಮಾಡಿದ್ದು, ಯಾವುದೇ ಕಾಗದ ಪತ್ರಗಳಿಗೆ ತೊಂದರೆಯಾಗಿಲ್ಲ. ಹಣವನ್ನು ದೋಚಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಲೀಲಾವತಿ ತಿಳಿಸಿದ್ದಾರೆ.
ಕೊಡಗು(ಜು.29): ಖದೀಮರ ತಂಡವೊಂದು ಬ್ಯಾಂಕ್ ಗೋಡೆಗೆ ಕನ್ನ ಹಾಕಿ ದರೋಡೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮಕ್ಕಂದೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ನಡೆದಿದೆ.
ಬ್ಯಾಂಕ್ ಗೋಡೆಯನ್ನು ಹೊಡೆದಿರುವ ದರೋಡೆಕೋರರು ಸ್ರ್ಟಾಂಗ್ ರೂಮ್ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಬ್ಯಾಂಕಿನ ಒಳಗೆ ತಡಕಾಡಿದ್ದಾರೆ. ಆದರೂ ಏನು ಸಿಗದೆ ಹಿಂದಿರುಗಿದ್ದಾರೆ.
ಪೂರ್ವ ಯೋಜಿತವಾಗಿ ಸಂಚು ರೂಪಿಸಿರುವ ಖದೀಮರು ಮೊದಲು ಬ್ಯಾಂಕ್ಗೆ ಕಲ್ಪಿಸುವ ವಿದ್ಯುತ್ ತಂತಿಯನ್ನು ಕತ್ತರಿಸಿದ್ದಾರೆ. ಬಳಿಕ ಸಿಸಿಟಿವಿಯ ವೈಯರ್ ಗಳನ್ನು ಕತ್ತರಿಸಿದ್ದಾರೆ. ನಂತರ ಕಬ್ಬಿಣದ ಹಾರೆ ಮತ್ತು ಸಲಾಕೆಗಳಿಂದ ಬ್ಯಾಂಕ್ನ ಹಿಂಬದಿಯ ಗೋಡೆಯನ್ನು ಹೊಡೆದಿದ್ದಾರೆ.
ಇದಾದ ಮೇಲೆ ಸ್ರ್ಟಾಂಗ್ ರೂಮ್ಗೆ ನುಗ್ಗಲು ಸ್ಟ್ರಾಂಗ್ ರೂಮಿನ ಗೋಡೆಯನ್ನು ಹೊಡೆಯಲು ಯತ್ನಿಸಿ ಸಾಧ್ಯವಾಗಿಲ್ಲ. ಹೀಗಾಗಿ ಖದೀಮರು ಬಂದ ದಾರಿಗೆ ಸುಂಕವಿಲ್ಲದಂತೆ ಸ್ಥಳದಿಂದ ವಾಪಸ್ ಆಗಿದ್ದಾರೆ. ಈ ಘಟನೆಯನ್ನು ಸ್ಥಳೀಯರು ಬೆಳಗ್ಗೆ ಗಮನಿಸಿ ವಿಷಯವನ್ನು ಅಚ್ಚರಿಯಿಂದ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾರೆ.
ಬ್ಯಾಂಕಿನ ವ್ಯವಸ್ಥಾಪಕರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಸಿಪಿಐ ದಿವಾಕರ್ ಮತ್ತು ಪೊಲೀಸ್ ಠಾಣೆಯ ಸಿಬ್ಬಂದಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನಪತ್ತೆ ದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಹಾರೆ ಹಾಗೂ ಬ್ಯಾಂಕ್ ಹಿಂಬದಿ ಮದ್ಯ ಸೇವಿಸಿ ಬಿಸಾಡಿದ್ದ ಮದ್ಯದ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ. ದರೋಡೆಗೆ ವಿಫಲಯತ್ನ ಮಾಡಿದ್ದು, ಯಾವುದೇ ಕಾಗದ ಪತ್ರಗಳಿಗೆ ತೊಂದರೆಯಾಗಿಲ್ಲ. ಹಣವನ್ನು ದೋಚಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಲೀಲಾವತಿ ತಿಳಿಸಿದ್ದಾರೆ.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ