ವಿಜಯಪುರ(ಡಿಸೆಂಬರ್. 22): ಬಸವನಾಡಿನಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನ ಹಲವಾರು ಸ್ವಾರಸ್ಯ ಮತ್ತು ಕಾನೂನು ಉಲ್ಲಂಘನೆಗೆ ಸಾಕ್ಷಿಯಾಗಿದೆ. ಬೆಳಿಗ್ಗೆ ಮತದಾನ ಆರಂಭವಾಗುತ್ತಿದ್ದಂತೆ ವೃದ್ಧ ದಂಪತಿ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಬಂದು ಮತಹಾಕಲು ಬಟನ್ಗಾಗಿ ಹುಡುಕಾಡಿದ ಘಟನೆ ವಿಜಯಪುರ ಜಿಲ್ಲೆಯ ಐನಾಪುರ ಎಲ್ ಟಿಯಲ್ಲಿರುವ ಮತಗಟ್ಟೆ ಸಂಖ್ಯೆ 57 A ನಲ್ಲಿ ನಡೆದಿದೆ. ವಾರ್ಡ್ ನಂಬರ್ 3ರ ಮತದಾರರಾಗಿರುವ ರಾಮು ಬಾಳು ರಾಠೋಡ ಮತ್ತು ರಾಣುಬಾಯಿ ರಾಮು ರಾಠೋಡ ದಂಪತಿ ಆಗಮಿಸಿದ್ದರು. ಆಗ ಚುನಾವಣಾ ಸಿಬ್ಬಂದಿ ಅವರ ಎಡಗೈ ಹೆಬ್ಬೆರಳಿಗೆ ಶಾಹಿ ಹಚ್ಚಿ ಮತ ಚಲಾಯಿಸಲು ಮತಪತ್ರ ನೀಡಿದ್ದಾರೆ. ಮೊದಲಿಗೆ ರಾಮು ಬಾಳು ರಾಠೋಡ ಮತ ಚಲಾಯಿಸಲು ಮುಂದಾದಾಗ ಆತನ ಹೆಂಡತಿ ಹಿಂಬಾಲಿಸಿದರು. ಆಗ, ತಡೆದ ಚುನಾವಣೆ ಅಧಿಕಾರಿ ಅವರೊಬ್ಬರೆ ಹೋಗಿ ಮತ ಹಾಕಲಿ ಎಂದು ಹೇಳಿದರು. ಆಗ ವೃದ್ಧೆ ತನ್ನ ಗಂಡನಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ ಎಂದಾಗ ಗಂಡನ ಜೊತೆ ತೆರಳಲು ಅವಕಾಶ ನೀಡಲಾಯಿತು.
ಆಗ, ತನ್ನ ಕೈಯಲ್ಲಿದ್ದ ಮತ ಪತ್ರವನ್ನು ಮತ ಚಲಾಯಿಸುವ ಬಾಕ್ಸ್ ಬಳಿ ಇಟ್ಟು ಬಂದ ಮಹಿಳೆಯ ಸಾಹೇಬ್ರೆ ಅಲ್ಲಿ ಒತ್ತಲು ಬಟನ್ ಇಲ್ಲ ಎಂದಳು. ಆಗ ತಬ್ಬಿಬ್ಬಾದ ಚುನಾವಣೆ ಸಿಬ್ಬಂದಿ ಮತಪತ್ರಗಳಲ್ಲಿ ನಿಮಗಿಷ್ಠವಾದ ಅಭ್ಯರ್ಥಿಯ ಹೆಸರು ಮತ್ತು ಚಿನ್ಹೆಯ ಮೇಲೆ ತಾವು ನೀಡಿರುವ ಮುದ್ರೆ ಒತ್ತುವಂತೆ ಸಲಹೆ ನೀಡಿದರು. ಬಳಿಕ ಗಂಡ ಮತ್ತು ಹೆಂಡತಿ ಅಬ್ಬರೂ ಮತ ಚಲಾಯಿಸಿ ಬಂದು ಮತಪೆಟ್ಟಿಗೆಯಲ್ಲಿ ತಮ್ಮ ಮತಪತ್ರ ಹಾಕಿ ಮನೆಗೆ ತೆರಳಿದರು.
ಮತದಾನದ ಗೌಪ್ಯತೆ ಉಲ್ಲಂಘಿಸಿದ ಮಹಿಳೆಯರು ವಿಡಿಯೋ ವೈರಲ್
ಈ ಮಧ್ಯೆ ಮೂರು ಜನ ಮಹಿಳೆಯರು ರಾಜಾರೋಷವಾಗಿ ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ನಡೆದಿದೆ. ನೇಬಗೆರಿ ಗ್ರಾಮದ 94ನೇ ಮತಗಟ್ಟೆಯಲ್ಲಿ ಒಬ್ಬರು ಹಾಕಿದ ಇತರ ಇಬ್ಬರು ಮಹಿಳೆಯರು ವೀಕ್ಷಿಸಿದ್ದಾರೆ. ಮುದ್ದೇಬಿಹಾಳ ತಾಲೂಕಿನ ಕೋಳೂರು ಗ್ರಾ. ಪಂ. ವ್ಯಾಪ್ತಿಯ ನೇಬಗೇರಿಯಲ್ಲಿ ಈ ಘಟನೆ ನಡೆದಿದೆ.
ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳಲ್ಲಿ ಬಾಕ್ಸ್ ಹಾಕಲಾಗಿರುತ್ತದೆ. ಈ ಬಾಕ್ಸ್ ಬಳಿ ನಿಂತು ಮತದಾರರು ಗೌಪ್ಯವಾಗಿ ತಮಗಿಷ್ಠವಾದವರಿಗೆ ಮತ ಚಲಾಯಿಸಬೇಕು. ಆದರೆ, ಇಲ್ಲಿ ಆಗಿದ್ದೇ ಬೇರೆ. ಮತ ಹಾಕಲು ಒಬ್ಬರಿಗಿಂತ ಹೆಚ್ಚು ಜನರನ್ನು ಚುನಾವಣೆ ಅಧಿಕಾರಿಗಳು ಒಳಗೆ ಬಿಟ್ಟಿದ್ದರಿಂದ ಈ ಘಟನೆ ನಡೆದಿದೆ.
ಗೌಪ್ಯವಾಗಿ ಮತದಾನ ಮಾಡುವ ಸ್ಥಳದಲ್ಲೇ ನಿಂತ ಮಹಿಳೆಯೊಬ್ಬಳು, ಇನ್ನಿಬ್ಬರು ಮಹಿಳೆಯರಿಗೆ ಯಾರಿಗೆ ಮತ್ತು ಯಾವ ಚಿನ್ನೆಗೆ ಮತ ಹಾಕಬೇಕು ಎಂಬುದರ ತಿಳುವಳಿಕೆ ನೀಡಿದ ಘಟನೆಗೆ ನೇಬಗೇರಿ ಗ್ರಾಮ ಸಾಕ್ಷಿಯಾಗಿದೆ. ಮತಗಟ್ಟೆ ಸಿಬ್ಬಂದಿ ಅನಗತ್ಯವಾಗಿ ಮಹಿಳೆಯನ್ನು ಒಳಗೆ ಬಿಟ್ಟಿದ್ದರಿಂದಾಗಿ ಈ ಅಚಾತುರ್ಯ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.
ಮತ ಹಾಕಲು ಬಂದ ಮಹಿಳೆಯರಿಗೆಲ್ಲ ಮತಗಟ್ಟೆಯಲ್ಲೇ ನಿಂತು ಇದಕ್ಕೆ ಓಟು ಹಾಕು ಎಂದು ಮತ್ತೋರ್ವ ಮಹಿಳೆ ತೋರಿಸುತ್ತಿರುವುದು ಚುನಾವಣಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ನಿಯಮ ಉಲ್ಲಂಘಿಸಿ ಇಷ್ಟೆಲ್ಲಾ ಗೋಲಮಾಲ್ ಆದರೂ ಕೂಡ ಚುನಾವಣೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಮತದಾರರನ್ನು ಕರೆತಂದ ಚಾಲಕನಿಗೆ ಎಚ್ಚರಿಕೆ ನೀಡಿದ ಸಿಪಿಐ:
ಮತ್ತೊಂದೆಡೆ 24 ಜನ ಮಹಿಳೆಯರು ಸಾಲಿನಲ್ಲಿ ನಡೆದುಕೊಂಡು ಬಂದು, ಪಾಳಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ ಘಟನೆ ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಿಟ್ಟಿನಹಳ್ಳಿ ಗ್ರಾಮದ ವಾರ್ಡ್ ಸಂಖ್ಯೆ 2 ರ ಮತಗಟ್ಟೆಗೆ ಸಾಲಾಗಿ ಬಂದ 24 ಜನ ಮಹಿಳೆಯರು ಮೊದಲಿಗೆ ಸರದಿಯಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ನಂತರ ತಂತಮ್ಮ ಪಾಳಿ ಬಂದ ಮೇಲೆ ಮತದಾನ ಮಾಡುವ ಮೂಲಕ ಶಿಸ್ತು ಮೆರೆದಿದ್ದಾರೆ.
ಹಿಟ್ಟಿನಹಳ್ಳಿ ಗ್ರಾಮದಲ್ಲಿ ಮತ ಚಲಾಯಿಸಲು ಬರುವ ಮತದಾರರನ್ನು ಆಶಾ ಕಾರ್ಯಕರ್ತೆಯರು ಥರ್ಮಿಲ್ ಸ್ಕೀನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಮತಗಟ್ಟೆಯೊಳಗೆ ಬಿಡುವ ಮೂಲಕ ಕೊರೋನಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ : ಕೇಶ ದಾನದ ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೆರವಾಗುತ್ತಿರುವ ಪುತ್ತೂರಿನ ವಿದ್ಯಾರ್ಥಿಗಳು
ಈ ಮಧ್ಯೆ, ಇದೇ ಹಿಟ್ಟಿನಹಳ್ಳಿಯಲ್ಲಿ ಮತಾದರರನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಟಂ ಟಂ ಗಳಲ್ಲಿ ಮತದಾರರನ್ನು ಕರೆತರುತ್ತಿದ್ದಾರೆ. ಮತದಾರರ ಓಲೈಕೆಗೆ ಟಂ ಟಂ ಗಳ ಬಳಕೆ ನಡೆಯುತ್ತಿದೆ. ಮತಗಟ್ಟೆಗಳ ಎದುರೇ ಟಂಟಂಗಳಲ್ಲಿ ಮತದಾರರನ್ನು ಕರೆತರಲಾಗುತ್ತಿದೆ. ಪೊಲೀಸರ ಎದುರೇ ಟಂಟಂ ಗಳ ಓಡಾಟ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ವಿಜಯಪುರ ನಗರದ ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ, ಕೂಡಲೇ ಸ್ಥಳಕ್ಕೆ ದೌಡಾಯಿಸಿ ಟಂ ಟಂ ಚಾಲಕರಿಗೆ ಮತ್ತು ಸ್ಥಳದಲ್ಲಿದ್ದ ಮುಖಂಡರಿಗೆ ಎಚ್ಚರಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ