ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ (Ayodhye of Karnataka) ಎಂದೇ ಕರೆಸಿಕೊಳ್ಳೋ ಕಾಫಿನಾಡ ದತ್ತಪೀಠದಲ್ಲಿ (Datta Peetha) ಒಂದಾದ ಮೇಲೊಂದು ವಿವಾದಗಳು (Controversy) ತಲೆ ಎತ್ತುತ್ತಲೇ ಇವೆ. ಹೋಮ ಮಂಟಪದಲ್ಲಿ ಮಾಂಸದೂಟ, ಗುಹೆಯಲ್ಲಿ ಗೋರಿ ಪೂಜೆ ಬಳಿಕ ಪೀಠದ ಆವರಣದಲ್ಲಿ ನಮಾಜ್ (Namaz) ಮಾಡುವ ವಿಡಿಯೋ ವೈರಲ್ (Video Viral) ಆಗಿದ್ದು ಹಿಂದೂ ಸಂಘಟಕರ ಕಣ್ಣನ್ನ ಕೆಂಪಾಗಿಸಿದೆ. ಆದರೆ, ನಮಾಜ್ ಮಾಡುವುದನ್ನ ಮುಸ್ಲಿಮರು (Muslim) ಸಮರ್ಥಿಸಿಕೊಳ್ತಿದ್ದಾರೆ. ಜಿಲ್ಲಾಧಿಕಾರಿ (DC) ಅದು ವಿವಾದಿತ ಪ್ರದೇಶವೇ ಅಲ್ಲ ಅಂತಿದ್ದಾರೆ. ಹಾಗಾದ್ರೆ ಅಂದು ನಮ್ಮ ಮೇಲೇಕೆ ಕೇಸ್ (Case) ಹಾಕಿದ್ರು ಅಂತ ಹಿಂದೂಗಳು ಪ್ರಶ್ನಿಸಿದ್ದಾರೆ. ಇದು ಕಾಫಿನಾಡಲ್ಲಿ ದತ್ತಪೀಠದ ಧರ್ಮದ ಗೋಡೆ ದೊಡ್ಡದ್ದಾಗ್ತಿರೋ ಕಥೆ..
ದತ್ತಪೀಠದ ಆವರಣದಲ್ಲಿ ನಡೆಯಿತಾ ನಮಾಜ್?
ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ. ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೊ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರ. ಆದ್ರೆ, ಕಳೆದೊಂದು ವಾರದಿಂದ ಕಾನೂನು-ಕಟ್ಟಲೆಗಳಿಗೂ ಮೀರಿದ ಇಲ್ಲಿನ ಬೆಳವಣಿಗೆಯಿಂದ ಕಾಫಿನಾಡಲ್ಲಿ ಧರ್ಮದ ಗೋಡೆ ದೊಡ್ಡದ್ದಾಗ್ತಿರುವಂತೆ ಕಾಣುತ್ತಿದೆ. ನಿಷೇಧಿತ ಹಾಗೂ ಹಿಂದೂಗಳ ಹೋಮ ಮಂಟಪದಲ್ಲಿ ಮಾಂಸದೂಟ, ಗೋರಿಪೂಜೆ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿ ಸರ್ಕಾರ ಹಾಗೂ ಮುಸ್ಲಿಮರ ವಿರುದ್ಧ ಕಿಡಿಕಾರಿದ್ದರು. ಅದರ ಬೆನ್ನಲ್ಲೇ ಇಂದು ಅದೇ ನಿಷೇಧಿತ ಪ್ರದೇಶದಲ್ಲಿ ನಮಾಜ್ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ. ಅದನ್ನ ಮುಸ್ಲಿಮರು ಸಮರ್ಥಿಕೊಳ್ತಿದ್ದಾರೆ.
ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಅಸಮಾಧಾನ
1975ರ ಹಿಂದಿನ ಆಚರಣೆಯ ಜಾರಿಯಲ್ಲಿರಬೇಕು. ಹೊಸ ಆಚರಣೆಗೆ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಹಾಗಾದ್ರೆ, ನೀವು ಹೇಗೆ ದತ್ತಜಯಂತಿ, ದತ್ತಮಾಲೆ, ಅನುಸೂಯ ಜಯಂತಿ, ಹುಣ್ಣಿಮೆ ಪೂಜೆ ಮಾಡುತ್ತೀರಾ ಎಂದು ಮುಸ್ಲಿಮರು ಪ್ರಶ್ನಿಸಿದ್ದಾರೆ. ಸುಪ್ರಿಂಕೋರ್ಟ್ ಆಹಾರದ ಪದ್ಧತಿ ಮೇಲಾಗಲಿ, ನಮಾಜ್ ಮೇಲಾಗಲಿ ನಿರ್ಬಂಧ ಹೇರಿಲ್ಲ. ಈ ವಿವಾದಕ್ಕೆ ಜಿಲ್ಲಾಡಳಿತವೇ ನೇರ ಕಾರಣ. ಹೊರಗಿನ ಭಕ್ತರು ಬರುತ್ತಾರೆ. ಅವರಿಗೆ ಗೊತ್ತಿರುತ್ತೋ-ಗೊತ್ತಿರಲ್ವೋ. ನ್ಯಾಯಾಲಯದ ಆದೇಶವನ್ನ ದತ್ತಪೀಠದಲ್ಲಿ ಬೋರ್ಡ್ ಹಾಕಿಸಬೇಕೆಂದು ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Datta Peetha: ದತ್ತಪೀಠದ ಹೋಮ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಾಹಾರ! ಗೋರಿಗೆ ಅರ್ಪಿಸಿದರಾ ಕಿಡಿಗೇಡಿಗಳು?
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ
ಈ ಮಧ್ಯೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಎಲ್ಲಾ ಧರ್ಮದವರಿಗೂ ಪ್ರಾರ್ಥನೆ ಮಾಡಲು ಹಾಲ್ ಇದೆ. ಅಲ್ಲೇ ಮಾಡಬೇಕು. ಈಗಿನ ವೈರಲ್ ವಿಡಿಯೋವನ್ನ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದಿದ್ದು, ಗರ್ಭಗುಡಿ, ಪೂಜೆ ಹಾಗೂ ಉಮೇದುವಾರಿಕೆ ವಿಷಯ ಮಾತ್ರ ಕೋರ್ಟ್ ಮುಂದಿರೋ ವಿವಾದ ಎಂದಿದ್ದಾರೆ.
“ನಮ್ಮ ಮೇಲೆ ಯಾಕೆ ಕೇಸ್ ಹಾಕಿದ್ದು?”
ಈಗಿನ ನಮಾಜ್ ವಿಡಿಯೋ ನಿಷೇಧಿತ ಪ್ರದೇಶದ ಒಳಗೆ ಬರೋದಿಲ್ಲ, ಈ ಜಾಗ ದೂರ ಇದೆ ಎಂದಿದ್ದಾರೆ. ಹಾಗಾದ್ರೆ, ಕಳೆದ ಎರಡ್ಮೂರು ವರ್ಷಗಳ ಹಿಂದೆ ಬೇಲಿ ಹಾರಿ ನಿಷೇಧಿತ ಪ್ರದೇಶಕ್ಕೆ ಹೋಗಿದ್ದಾರೆಂದು ಹಿಂದೂ ಕಾರ್ಯಕರ್ತರ ಮೇಲೆ ಏಕೆ ಕೇಸ್ ಮಾಡಿದ್ರಿ ಎಂದು ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಹಿಂದೂ ಸಂಘಟನೆಳ ಸವಾಲ್
ಮುಜರಾಯಿ ಇಲಾಖೆ ಕೀ ಯಾರ ಬಳಿ ಇರುತ್ತೆ. ಮುಜರಾಯಿ ಇಲಾಖೆ ಅಧಿಕಾರಿಗಳ ಸಹಾಯವಿಲ್ಲದೆ ಅಲ್ಲಿಗೆ ನಮಾಜ್ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದನ್ನೆಲ್ಲಾ ಸಹಿಸಿಕೊಂಡು ಸಾಕಾಗಿದೆ. ಮುಂದಿನ ದತ್ತಜಯಂತಿಯಲ್ಲಿ 2004ರ ಹಿಂದಿನ ತುಳಸಿಕಟ್ಟೆ ಇದ್ದ ಜಾಗದಲ್ಲೇ ಹೋಮ ಮಾಡೋದು ಶತಸಿದ್ಧ ಎಂದು ಜಿಲ್ಲಾಡಳಿತಕ್ಕೆ ಸವಾಲ್ ಹಾಕಿದ್ದಾರೆ.
“ಕೋರ್ಟ್ ಆದೇಶ ಉಲ್ಲಂಘನೆಯಾಗಲು ಬಿಡುವುದಿಲ್ಲ”
ಒಟ್ಟಾರೆ, ದತ್ತಪೀಠದ ವಿಚಾರದಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯವೇ ಈ ವಾದ-ವಿವಾದ-ವೈಮನಸ್ಸಿಗೆ ಕಾರಣವಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಅತ್ತ ಹಿಂದೂಗಳು ಜಿಲ್ಲಾಡಳಿತ-ಮುಜಾರಾಯಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಇತ್ತ ಮುಸ್ಲಿಮರು ಇದಕ್ಕೆಲ್ಲಾ ಜಿಲ್ಲಾಡಳಿತವೇ ಕಾರಣ ಅಂತಿದ್ದಾರೆ. ಜಿಲ್ಲಾಡಳಿತ ಮಾತ್ರ ಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ. ಆಗೋಕೆ ಬಿಡೋದಿಲ್ಲ ಅಂತಿದ್ದಾರೆ.
ಇದನ್ನೂ ಓದಿ: Sangolli Rayanna Statue: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮತ್ತೆ ಕಲ್ಲೆಸೆತ, ಪುಂಡರ ಬಂಧನಕ್ಕೆ ಆಗ್ರಹ
ಹಾಗಾದ್ರೆ, ಈ ವಿವಾದಕ್ಕೆ ಕಾರಣ-ಮೂಲ ಏನು ಮತ್ತೊಂದು ಪ್ರಶ್ನೆಯೂ ಮೂಡೋದು ಸಹಜ. ಹಾಗಾಗಿ, ಜಿಲ್ಲಾಡಳಿತ ದತ್ತಪೀಠದ ವಿಚಾರವಾಗಿ ಮತ್ತೊಮ್ಮೆ ಪರಿಶೀಲಿಸಿ ಸೂಕ್ತ ಕ್ರಮ ಕೈಗಳ್ಳಬೇಕಾದ ಅನಿವಾರ್ಯತೆ ಇದೆ ಅನ್ಸತ್ತೆ. ಜಿಲ್ಲೆಯ ಜನ ಕೂಡ ಅದನ್ನೇ ಬಯಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ