ಬೆಂಗಳೂರಿನಲ್ಲಿರುವ (Bengaluru) ಒಂದೇ ಒಂದು ಕೆರೆ ಕೂಡ ಕುಡಿಯುವ ನೀರಿನ (Drinking Water) ಮೂಲವಾಗಲು ಯೋಗ್ಯವಾಗಿಲ್ಲ ಇದಕ್ಕೆ ಕಾರಣವೆಂದರೆ ಈ ಕೆರೆಗಳು ಸಂಸ್ಕರಿಸದ ಒಳಚರಂಡಿ (Drainage) ಹಾಗೂ ಕೈಗಾರಿಕೆಗಳ ತ್ಯಾಜ್ಯಗಳಿಂದ ಕಲುಷಿತಗೊಂಡಿರುವುದು ಎಂಬುದಾಗಿ ಕರ್ನಾಟಕ ರಾಜ್ಯ ಜಲಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತಿಳಿಸಿದೆ. ಮಂಡಳಿಯ ವರದಿಯ ಪ್ರಕಾರ ಬೆಂಗಳೂರಿನಲ್ಲಿರುವ 105 ಕೆರೆಗಳಲ್ಲಿ ಯಾವುದೂ ಕೂಡ ಎ,ಬಿ,ಸಿ ವರ್ಗಕ್ಕೆ ಒಳಪಡುವುದಿಲ್ಲ ಹಾಗೂ ಅವುಗಳಲ್ಲಿ 65 ಕೆರೆಗಳು (Lakes) ವರ್ಗ ಡಿಗೆ ಒಳಪಡುತ್ತವೆ ಹಾಗೂ 36 ಕೆರೆಗಳು ಇ ವಿಭಾಗಕ್ಕೆ ಬರುತ್ತವೆ. ಇತರ ನಾಲ್ಕು ಕೆರೆಗಳ ನೀರಿನ ಮಾದರಿಗಳನ್ನು (Water sample) ಜಲಮೂಲಗಳು ಬತ್ತಿರುವುದರಿಂದ ತೆಗೆದುಕೊಳ್ಳಲಾಗಲಿಲ್ಲ ಎಂದು ಮಂಡಳಿ ತಿಳಿಸಿದೆ.
ಯಾವ ನೀರು ಕುಡಿಯಲು ಯೋಗ್ಯ
ಕರ್ನಾಟಕ ರಾಜ್ಯ ಜಲಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ವಯ ವರ್ಗ ಎ ಯ ನೀರಿನ ಗುಣಮಟ್ಟವು ಯಾವುದೇ ಸಂಸ್ಕರಣೆಯಿಲ್ಲದೆ ಕುಡಿಯಲು ಯೋಗ್ಯವಾಗಿದೆ ಹಾಗೂ ವರ್ಗ ಬಿ ಹೊರಾಂಗಣ ಸ್ನಾನಕ್ಕೆ ಉತ್ತಮ ಎಂದೆನಿಸಿದೆ. ವರ್ಗ ಡಿ ಯಲ್ಲಿ ಬರುವ ಕೆರೆಗಳ ನೀರನ್ನು ವನ್ಯಜೀವಿ ಹಾಗೂ ಮೀನುಗಾರಿಕೆಯ ಪ್ರಸರಣಕ್ಕೆ ಬಳಸಬಹುದಾಗಿದ್ದು ಇ ವಿಭಾಗದ ಕೆರೆಯ ನೀರನ್ನು ನೀರಾವರಿಗೆ ಬಳಸಬಹುದು ಎಂದು ತಿಳಿಸಿದೆ.
ಕೆರೆಗಳ ಮಾಲಿನ್ಯಕ್ಕೆ ಮೂಲ ಕಾರಣ
ಇನ್ನು ಸರಕಾರಿ ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ ಪ್ರತೀ ದಿನ 1458.6 ಮಿಲಿ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತದೆ. ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 1,456 mld ಕೊಳಚೆ ನೀರಿನ ಪೈಕಿ 50% ದಷ್ಟು ಕೊಳಚೆ ನೀರು ಮಾತ್ರ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆಯಾಗುತ್ತಿದೆ. ಕೆರೆಗಳ ಮಾಲಿನ್ಯದ ಹಿಂದಿರುವ ಕಾರಣವೆಂದರೆ 80% ದಷ್ಟು ಒಳಚರಂಡಿ ಹಾಗೂ 20% ಕೈಗಾರಿಕಾ ತ್ಯಾಜ್ಯಗಳು ಎಂಬುದಾಗಿ ಮಂಡಳಿಯ ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.
110 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಇನ್ನೂ ಭೂಗತ ಒಳಚರಂಡಿ ವ್ಯವಸ್ಥೆಗಳನ್ನು ಮಾಡಿಲ್ಲ ಅಲ್ಲದೆ ಈ ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ನೇರವಾಗಿ ಕೆರೆಗಳಿಗೆ ಸೇರುತ್ತದೆ. ನಾವು ಕೆರೆಗಳನ್ನು ಮೇಲ್ವಿಚಾರಣೆ ಮಾಡುತ್ತೇವೆ ಹಾಗೂ ಮಾಲಿನ್ಯ ಹೊಂದಿರುವ ಏಜೆನ್ಸಿಗಳಿಗೆ ನೀರಿನ ಗುಣಮಟ್ಟ ಸೂಚ್ಯಾಂಕ ವಿವರವನ್ನು ಪ್ರಕಟಿಸುತ್ತೇವೆ ಎಂಬುದಾಗಿ ಅಧಿಕಾರಿ ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ ಕರ್ನಾಟಕ ಸರಕಾರ
ಬೆಂಗಳೂರು ನಗರ ಜಿಲ್ಲಾ ಪರಿಸರ ಯೋಜನೆಯನ್ನು ಆಗಸ್ಟ್ 31 ರಂದು ಕರ್ನಾಟಕ ಸರಕಾರದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು ತ್ಯಾಜ್ಯ ನೀರನ್ನು ಸಾಗಿಸುವ ಚರಂಡಿಗಳು ಜಲಮೂಲಗಳಿಗೆ ಸೇರದಂತೆ ನೋಡಿಕೊಳ್ಳಬೇಕು ಮತ್ತು ಈ ಕ್ರಮಗಳನ್ನು ಮಾರ್ಚ್ 31, 2023 ರೊಳಗೆ ಜಾರಿಗೊಳಿಸಬೇಕು ಎಂಬುದಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ.
ಪರಿಸರ ಯೋಜನಾ ವರದಿಯ ಪ್ರಕಾರ ಯಾವೆಲ್ಲ ಕೆರೆಗಳು ಕಲುಷಿತಗೊಂಡಿವೆ ನೋಡಿ
ನಗರಾಭಿವೃದ್ಧಿ ನಿಗಮದ ಬೊಮ್ಮಸಂದ್ರ ಕೆರೆ, ಚಂದಾಪುರ ಕೆರೆ, ಹೆಬ್ಬಗೋಡಿ ಕೆರೆ, ಜಿಗಣಿ ಕೆರೆ ಮತ್ತು ಮಾದನಾಯಕನಹಳ್ಳಿ ಕೆರೆ, ಹೆನ್ನಾಗರ ಕೆರೆ, ಜುಜುಕೆರೆ, ಬಿದರುಗುಪ್ಪೆ ಕೆರೆ, ಕಮ್ಮಸಂದ್ರ ಕೆರೆಗಳಿಗೆ ಸಮೀಪದ ಪ್ರದೇಶಗಳ ಕೊಳಚೆ ನೀರು ಸೇರುತ್ತಿದೆ ಎಂದು ಪರಿಸರ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ.
ಬಂಡೆಕೊಡಿಗೆಹಳ್ಳಿ ಕೆರೆ, ದೊಡ್ಡಜಾಲ ಕೆರೆ, ಸಿಂಗನಾಯಕನಹಳ್ಳಿ ಕೆರೆ, ಹಾಲೂರು ಕೆರೆ, ಸೊಂಡೆ ಕೊಪ್ಪ ಕೆರೆ, ಕೊಡತಿ ಕೆರೆ, ಚಿಕ್ಕನಹಳ್ಳಿ ಕೆರೆ, ದೊಡ್ಡಗುಬ್ಬಿ ಕೆರೆ, ಆನೇಕಲ್ ಕೆರೆ, ಜಿಗಣಿ ಕೆರೆ, ಸಕಲವರ ಭುಜಂಗದಾಸನ ಕೆರೆ, ಹೆನ್ನಾಗರ ಅಮ್ಮಣಿಕೆರೆ ಕೆರೆ, ಮುತ್ತನಲ್ಲೂರು ಅಮಾನಿಕೆರೆ ಕೆರೆ, ಬಿದರಗುಪ್ಪೆ ಅಮಾನಿಕೆರೆ ಕೆರೆಗಳು ಕೊಳಚೆಯಿಂದ ಭಾಗಶಃ ಕಲುಷಿತಗೊಂಡಿವೆ.
ಸಣ್ಣ ನೀರಾವರಿ ಇಲಾಖೆಯ ವಿವರಗಳ ಪ್ರಕಾರ, ರಾಂಪುರ ಕೆರೆ, ಯಲ್ಲಮಲ್ಲಪ್ಪ ಶೆಟ್ಟಿ ಕೆರೆ, ವಡೇರಹಳ್ಳಿ ಕೆರೆ, ಹೂಡಿ ಪಾಳ್ಯ ಕೆರೆ, ಬೊಮ್ಮಸಂದ್ರ ಕೆರೆ, ಅಡ್ಡೇವಿಶ್ವನಾಥಪುರ ಕೆರೆಗಳು ಸಂಪೂರ್ಣ ಕಲುಷಿತಗೊಂಡಿದ್ದು, ಕೊಳಚೆ ನೀರು ನೇರವಾಗಿ ಕೆರೆಗಳಿಗೆ ಸೇರುತ್ತಿದೆ ಎಂಬುದು ವರದಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ