ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ. ನಿರೀಕ್ಷೆಗೂ ಮೀರಿದ ಜಯದಿಂದ ಕಾಂಗ್ರೆಸ್ (Congress) ಫುಲ್ ಖುಷ್ ಆಗಿದೆ. ಅತ್ತ ಬಿಜೆಪಿ (BJP) ಸೋಲಿನ ಆಘಾತದಿಂದ ಇನ್ನೂ ಹೊರಬರೋಕೆ ಸಾಧ್ಯವಾಗಿಲ್ಲ. ಈ ಮಧ್ಯೆ ಮತ್ತೊಂದು ಶಾಕಿಂಗ್ ನ್ಯೂಸ್ ಬಿಜೆಪಿಗೆ ತಟ್ಟಿದ್ದು, ಕಳೆದ ಹಲವು ದಶಕಗಳಿಂದ ಬಿಜೆಪಿಯ ಕೈ ಹಿಡಿದಿದ್ದ ಲಿಂಗಾಯತ ಸಮುದಾಯ (Lingayat Communityಬಿಜೆಪಿಗೆ ) ಈ ಬಾರಿ ಕಮಲ ಪಾಳಯಕ್ಕೆ ಕೈ ಕೊಟ್ಟು ಕಾಂಗ್ರೆಸ್ ಕೈ ಹಿಡಿದಿದೆ.
ಹೌದು.. ಈ ಬಾರಿ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸಿದ್ದ 51 (ರೆಡ್ಡಿ ಲಿಂಗಾಯತ, ವೀರ ಶೈವ ಲಿಂಗಾಯತ ಸೇರಿದಂತೆ) ಲಿಂಗಾಯತ ಅಭ್ಯರ್ಥಿಗಳ ಪೈಕಿ 39 ಕ್ಷೇತ್ರಗಳಲ್ಲಿ ಲಿಂಗಾಯತರು ಭರ್ಜರಿ ಜಯಭೇರಿ ಬಾರಿಸಿದ್ದು, ವೀರೇಂದ್ರ ಪಾಟೀಲ್ ಪದಚ್ಯುತಿ ಬಳಿಕ ಕಾಂಗ್ರೆಸ್ನಿಂದ ದೂರ ಸರಿದು ಬಿಜೆಪಿಯತ್ತ ವಾಲಿದ್ದ ಲಿಂಗಾಯತ ಸಮುದಾಯದ ಜನರು ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಬಿಜೆಪಿ 68 ಮಂದಿ ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಆದರೆ ಆ ಪೈಕಿ ಗೆದ್ದಿದ್ದು 18 ಮಂದಿ ಮಾತ್ರ. ಉಳಿದ ಬಹುತೇಕ ಅಭ್ಯರ್ಥಿಗಳಿಗೆ ಸೋಲುಂಟಾಗಿದೆ.
ಇದನ್ನೂ ಓದಿ: Political Retirement: ಹೀನಾಯ ಸೋಲಿನಿಂದ ಕಂಗೆಟ್ಟ ಬಿಎಸ್ವೈ ಆಪ್ತ, ಬಿಕ್ಕಿ ಬಿಕ್ಕಿ ಅಳುತ್ತಲೇ ರಾಜಕೀಯ ನಿವೃತ್ತಿ ಘೋಷಣೆ!
ಈ ಹಿಂದೆ ಏನಾಗಿತ್ತು?
ಹಾಗೆ ನೋಡಿದರೆ 2018ರ ವಿಧಾನಸಭಾ ಚುನಾವಣೆಗೂ ಮುನ್ನ ಆಗಿನ ಸಿಎಂ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾಪನೆ ವಿಷಯವನ್ನು ಘೋಷಣೆ ಮಾಡಿದ್ದರು. ಈ ವಿಷಯವನ್ನು ಬಿಜೆಪಿ ರಾಜಕೀಯಗೊಳಿಸಿ ಲಿಂಗಾಯತ ಸಮುದಾಯದ ಜನರು ಕಾಂಗ್ರೆಸ್ ವಿರುದ್ಧ ತಿರುಗಿಬೀಳುವಂತೆ ಮಾಡಿತ್ತು. ಇದರಿಂದ ಲಿಂಗಾಯತ ಸಮುದಾಯದ ಜನರು ಬಿಜೆಪಿ ಪರ ನಿಂತಿದ್ದರ ಪರಿಣಾಮ ಕಾಂಗ್ರೆಸ್ಗೆ ಆ ಭಾಗದಲ್ಲಿ ಹಿನ್ನಡೆ ಉಂಟಾಗಿ ಬಿಜೆಪಿಗಿಂತ ಕಡಿಮೆ ಸ್ಥಾನ ಬರುವಂತೆ ಮಾಡಿತ್ತು. ಮುಂದಿನ ದಿನಗಳಲ್ಲಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಹೊಡೆದುರುಳಿಸಿ ಬಿಜೆಪಿ ಅಧಿಕಾರಕ್ಕೆ ಏರಿತ್ತು.
ಬಿಎಲ್ ಸಂತೋಷ್ ವಿರುದ್ಧ ಕಿಡಿ
ಅಧಿಕಾರಕ್ಕೆ ಬಂದ ಬಿಜೆಪಿ ಪ್ರತೀ ಹಂತದಲ್ಲೂ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗುತ್ತಲೇ ಹೋಯಿತು. ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ಕೊಡೋದರಿಂದ ಹಿಡಿದು, ಹಿರಿಯ ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಟಿಕೆಟ್ ನೀಡದೆ ನಿರ್ಲಕ್ಷ್ಯ ಮಾಡಿದ್ದು, ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂಬ ಬಿಎಲ್ ಸಂತೋಷ್ ಹೇಳಿದ್ದಾರೆನ್ನಲಾದ ಪೋಸ್ಟ್ ವೈರಲ್ ಆಗಿದ್ದು ಬಿಜೆಪಿಗೆ ದೊಡ್ಡದ ಮಟ್ಟದ ಹೊಡೆತ ನೀಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ರಾಜ್ಯ ಬಿಜೆಪಿ ಮಾತ್ರವಲ್ಲದೇ, ಲಿಂಗಾಯತ ಸಮುದಾಯದ ನಾಯಕರ ಮೇಲೆ ಟಾರ್ಗೆಟ್ ಮಾಡಿ ಕಡೆಗಣನೆ ಮಾಡುತ್ತಿದ್ದಾರೆ ಎಂಬ ಸಂದೇಶ ಲಿಂಗಾಯತ ಸಮುದಾಯದ ಜನರ ಮನಸ್ಸಿಗೆ ತಲುಪಿದ್ದು ಕೂಡ ಬಿಜೆಪಿಗೆ ನಕರಾತ್ಮಕವಾಗಿ ಪರಿಣಮಿಸಿದೆ.
ಇದನ್ನೂ ಓದಿ: Karnataka Police: ಸರ್ಕಾರ ಬದಲಾದ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ? ಏನಿದು ಕೇಂದ್ರದ ಪ್ಲಾನ್!
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಶೆಟ್ಟರ್ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯದ ನೆಲೆಯಲ್ಲಿ ವಾಗ್ದಾಳಿ ನಡೆಸಿದ್ದು ಕೂಡ ಕಮಲ ಪಾಳಯಕ್ಕೆ ಹೊಡೆತ ನೀಡಿದೆ. ಹೀಗಾಗಿ ವೀರೇಂದ್ರ ಪಾಟೀಲ್ ಬಳಿಕ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷದತ್ತ ವಾಲುತ್ತಿದೆ ಅನ್ನೋದು ಸ್ಪಷ್ಟ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ