ಕಲಬುರಗಿ: ಹುಡುಗರು (Boys) ಹುಡುಗಿಯರಿಗೆ (Girls) ಕಾಟ ಕೊಡೋದನ್ನ, ಪ್ರೀತ್ಸೆ (Love me)ಅಂತ ಹಿಂದೆ ಬೀಳೋದನ್ನ ಕೇಳಿದ್ದೀರಿ. ಆದ್ರೆ ಹುಡುಗಿಯೇ ಪ್ರೀತ್ಸೋ ಅಂತ ಹುಡುಗನ ಪ್ರಾಣ ತಿನ್ನೋದು ಕಡಿಮೆ. ಹೀಗೆ ಹುಡುಗಿಯರು ಹುಡುಗರ ಹಿಂದೆ ಬಿದ್ರೆ ಹುಡುಗರು ಹಬ್ಬ ಮಾಡೋದ್ರಲ್ಲಿ ಡೌಟೇ ಇಲ್ಲ! ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಹುಡುಗಿಯೊಬ್ಬಳು ಮೊದಲು ಒಬ್ಬ ಹುಡುಗನ್ನು ಪ್ರೀತಿಸುತ್ತಾ (Love) ಇದ್ದಳು. ಆತನೂ ಅವಳನ್ನು ಪ್ರೀತಿಸುತ್ತಿದ್ದ. ಆದ್ರೆ ಪ್ರೇಮಿಗಳ (Lovers) ಮಧ್ಯೆ ಅದೇನಾಯ್ತೋ ಏನೋ, ಇಬ್ಬರೂ ದೂರಾಗಿದ್ದರು (Break Up). ಇದೀಗ ಆಕೆಗೆ ಏನಾಯ್ತೋ ಗೊತ್ತಿಲ್ಲ, ಹಳೆ ಪ್ರೇಮಿ ಪಾದವೇ ಗತಿ ಅಂತ ಈತನ ಬಳಿ ಬಂದಿದ್ದಾಳೆ. ನಂಗೆ ನೀನೇ ಬೇಕು, ನೀನು ನನ್ನನ್ನು ಮದ್ವೆಯಾಗ್ಬೇಕು (Marriage) ಅಂತ ಕಾಟ ಕೊಡೋದಕ್ಕೆ ಶುರು ಮಾಡಿದ್ದಾಳೆ. ಆದ್ರೆ ಅದಕ್ಕೆ ಒಪ್ಪದ ಆತ, ಆಕೆ ಕಾಟಕ್ಕೆ ಹೆದರಿ ಮನೆಯಿಂದಲೇ ಓಡಿ ಹೋಗಿದ್ದಾನೆ!
ಹಳೆ ಪ್ರೇಯಸಿ ಕಾಟಕ್ಕೆ ಬೇಸತ್ತು ನಾಪತ್ತೆಯಾದ ಯುವಕ!
ಹಳೆ ಪ್ರೇಯಸಿಯ ಕಾಟಕ್ಕೆ ಬೇಸತ್ತು ಯುವಕನೋರ್ವ ಮನೆ ಬಿಟ್ಟು, ನಾಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ನಡೆದಿದೆ. ಈತ ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚಿಗಷ್ಟೇ ಮನೆಯವರು ನೋಡಿದ್ದ ಹುಡುಗಿಯೊಬ್ಬಳ ಜತೆ ನಿಶ್ಚಿತಾರ್ಥವೂ ನಡೆದಿತ್ತು.
ಈ ಬಳಿಕ ಈತನ ಮನೆಯಲ್ಲಿ ಮದುವೆ ತಯಾರಿಯೂ ನಡೆಸಿದ್ದರು. ಈ ವೇಳೆ ಹಳೆ ಹುಡುಗಿಯ ಹೊಸ ಕಾಟಕ್ಕೆ ಬೇಸತ್ತು ನವೆಂಬರ್ 13ರಿಂದ ಮನೆ ಬಿಟ್ಟು ಪರಾರಿಯಾಗಿದ್ದಾನೆ.
ಮೊದಲು ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ
ಈ ಯುವಕ ಮೊದಲು ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಗ್ರಾಮವೊಂದರ ಹುಡುಗಿಯನ್ನು ಪ್ರೀತಿಸುತ್ತಾ ಇದ್ದ ಎನ್ನಲಾಗಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಾ ಇದ್ದು, ಆಕೆಯನ್ನು ಮದುವೆಯಾಗಲು ಈತ ನಿರ್ಧರಿಸಿದ್ದ. ಆದ್ರೆ ಪ್ರೇಮಿಗಳ ಮಧ್ಯೆ ಅದೇನಾಯ್ತೋ ಗೊತ್ತಿಲ್ಲ, ನಾನು ನಿನ್ನ ಮದುವೆ ಆಗುವುದಿಲ್ಲ ಅಂತ ಈಕೆ ತಿರಸ್ಕಾರ ಮಾಡಿದ್ದಳಂತೆ. ಇದಾದ ಮೇಲೆ ಪ್ರೇಮಿಗಳು ಇಬ್ಬರೂ ದೂರ ದೂರವಾಗಿದ್ದರು.
ನಿಶ್ಚಿತಾರ್ಥದ ಬಳಿಕ ವಾಪಸ್ ಬಂದ ಹಳೆ ಹುಡುಗಿ
ಇದಾದ ಬಳಿಕ ಆತ ಹುಮನಾಬಾದ್ ತಾಲೂಕಿನಲ್ಲಿ ಮತ್ತೊಂದು ಹುಡುಗಿಯನ್ನು ನೋಡಿಕೊಂಡು ಬಂದಿದ್ದ. ಆ ನಂತರ ಇಬ್ಬರ ಮನೆಯವರು ಪರಸ್ಪರ ಒಪ್ಪಿಗೆಯಿಂದ ಅದ್ಧೂರಿಯಾಗಿ ಅ.28ರಂದು ನಿಶ್ಚಿತಾರ್ಥ ಮಾಡಿದ್ದರು. ಇಷ್ಟೆಲ್ಲಾ ಆಗುತ್ತಿದ್ದಂತೆ ಮೊದಲ ಹುಡುಗಿ, ವಾಪಸ್ ಬಂದಿದ್ದಾಳೆ. ಆತನನ್ನು ಹೇಗೋ ಸಂಪರ್ಕಿಸಿ, ಪ್ರೇಮ ನಿವೇದಿಸಿದ್ದಾಳೆ. ನಾನು ನಿನ್ನನ್ನೇ ಮದ್ವೆಯಾಗ್ತೇನೆ, ನೀನು ನನ್ನ ಬಿಟ್ಟು ಬೇರೆಯವರನ್ನು ಮದ್ವೆಯಾಗ್ಬೇಡ ಅಂತ ಹೇಳಿದ್ದಳಂತೆ.
ನವೆಂಬರ್ 13ರಂದು ಮನೆ ಬಿಟ್ಟು ಹೋದ ಯುವಕ
ಒಂದೆಡೆ ಮದುವೆಯ ಸಿದ್ಧತೆ, ಮತ್ತೊಂದೆಡೆ ಮದುವೆಯಾಗುವಂತೆ ಕಾಟ ಕೊಡುತ್ತಿರುವ ಹಳೆ ಹುಡುಗಿ.. ಇವುಗಳ ಮಧ್ಯೆ ಯುವಕ ತೊಳಲಾಟ ನಡೆಸಿದ್ದಾನೆ. ಹೀಗಾಗಿ ಇದರಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿ, ನವೆಂಬರ್ 13ರಂದು ಯಾರಿಗೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದಾನೆ.
ಮನೆ ಬಿಟ್ಟು ಹೋಗುವ ಮುನ್ನ ಪತ್ರ ಬರೆದ ಯುವಕ
ಇನ್ನು ಮನೆ ಬಿಟ್ಟು ಹೋಗುವ ಮುನ್ನ ಆ ಯುವಕ ಸುದೀರ್ಘ ಪತ್ರವೊಂದನ್ನು ಬರೆದಿದ್ದಾನೆ. “ಎಷ್ಟೇ ಕಷ್ಟ ಬಂದರೂ ಅಣ್ಣನ ಹಾಗೂ ಅಕ್ಕನ ಮಕ್ಕಳಿಗೆ ವಿದ್ಯಾಭ್ಯಾಸ ನಿಲ್ಲಿಸಬೇಡಿ. ಸುಮ್ಮಸುಮ್ಮನೆ ದೇವರ ಹೆಸರಲ್ಲಿ ಹಣ ಖರ್ಚು ಮಾಡಬೇಡಿ, ನನ್ನಿಂದ ಈ ಮನೆಗೆ ಒಳ್ಳೆ ಹೆಸರು ಬರುತ್ತದೆ ಎಂದು ಅಂದುಕೊಂಡಿದ್ದೀರಿ, ಆದರೆ, ಅದು ಸಾಧ್ಯವಾಗಿಲ್ಲ. ಇದಕ್ಕೆ ಕ್ಷಮೆ ಇರಲಿ. ನನ್ನ ಗುತ್ತಿಗೆ ಆಧಾರದ ನೌಕರಿಯನ್ನು ನನ್ನ ಸ್ನೇಹಿತನಿಗೆ ಕೊಡಿಸಿ” ಹೀಗಂತ ಪತ್ರದಲ್ಲಿ ಮನವಿ ಮಾಡಿದ್ದಾನೆ.
ಇದನ್ನೂ ಓದಿ: Crime News: ಅಣ್ಣನ ಮೇಲಿನ ದ್ವೇಷಕ್ಕೆ ತಂಗಿ ಹೆಸರಲ್ಲಿ ಫೇಕ್ ಅಕೌಂಟ್! ಅಶ್ಲೀಲ ಫೋಟೋ ಹಾಕಿದ್ದು ಮತ್ತೋರ್ವ ಯುವತಿ!
ತಂದೆ ತಾಯಿಯಿಂದ ಪೊಲೀಸರಿಗೆ ದೂರು
ಇನ್ನು ಮೊಬೈಲ್ ಮನೆಯಲ್ಲೇ ಬಿಟ್ಟು ಯುವಕ ನಾಪತ್ತೆಯಾಗಿದ್ದಾನೆ. ಇತ್ತ ವೃದ್ಧ ತಂದೆ ತಾಯಿ ಮಗನಿಗಾಗಿ ಕಣ್ಣಿರು ಹಾಕುತ್ತಾ ಕಾಯುತ್ತಿದ್ದಾರೆ. ಸದ್ಯ ಈ ಬಗ್ಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ