ಬೆಂಗಳೂರು: ಸಾಮಾನ್ಯವಾಗಿ ನಾವು ರಸ್ತೆಯಲ್ಲಿ (Road) ಹೋಗುವಾಗ ನಮ್ಮ ಕಣ್ಣೆದುರಿಗೆ ಯಾರಾದರೂ ಬೈಕ್ (Bike) ಮೇಲಿಂದ ಬಿದ್ದರೆ, ತಕ್ಷಣವೇ ನಾವು ಅವರ ಬಳಿ ಹೋಗಿ ಅವರನ್ನು ಮೇಲಕ್ಕೆ ಎಬ್ಬಿಸಿ ಅವರಿಗೆ ಎಲ್ಲಾದರೂ ಗಾಯವಾಗಿದೆಯೇ ಅಂತ ನೋಡುತ್ತೇವೆ. ಅವರಿಗೆ ಸ್ವಲ್ಪ ನೀರು (Water) ಕುಡಿಯಲು ಕೊಟ್ಟು, ಉಪಚರಿಸುತ್ತೇವೆ. ಇನ್ನೂ ಕೆಲವರು ಬಂದು ತಕ್ಷಣವೇ ಕೆಳಕ್ಕೆ ಬಿದ್ದ ಆ ಬೈಕ್ ಅನ್ನು ಮೇಲಕ್ಕೆ ಎತ್ತುವ ಕೆಲಸ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಇಂತಹ ಅಪಘಾತಗಳು (Accident) ನಡೆದ ಸಂದರ್ಭದ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ ಕೆಲ ಕಳ್ಳ ಖದೀಮರು! ಹೌದು, ಹೀಗೆ ರಸ್ತೆಯ ಮೇಲೆ ಅಪಘಾತಕ್ಕೊಳಗಾದವರಿಗೆ ಅಪಘಾತದ ಆಘಾತದಲ್ಲಿ ಏನು ನಡೆಯುತ್ತಿದೆ ಅನ್ನೋದರ ಬಗ್ಗೆ ಸ್ವಲ್ಪವೂ ಅರಿವು ಇರುವುದಿಲ್ಲ. ಇದೇ ಒಳ್ಳೆಯ ಸಮಯ ಅಂತ ಕಳ್ಳ ಖದೀಮರು ಅಪಘಾತಕ್ಕಿಡಾದವರ ಮೈಮೇಲಿನ ಬೆಲೆಬಾಳುವ ಆಭರಣಗಳನ್ನು (jewelry), ಅವರ ಬಳಿ ಇರುವ ಪರ್ಸ್ ಗಳನ್ನು ಮತ್ತು ನಗದು ಹಣ ಮತ್ತು ಮೊಬೈಲ್ ಫೋನ್ ಗಳನ್ನು ಕ್ಷಣ ಮಾತ್ರದಲ್ಲಿ ಸಹಾಯ (Help) ಮಾಡುವಂತೆ ಮಾಡಿ ಕಳುವು ಮಾಡಿರುತ್ತಾರೆ.
ಅಪಘಾತ ನಡೆದ ಸ್ಥಳದಿಂದ ಬೈಕನ್ನೇ ಕದ್ದ ಕಳ್ಳರು..
ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.. ಇತ್ತೀಚೆಗೆ ಬೆಂಗಳೂರಿನ ಕಲಾಸಿಪಾಳ್ಯದ ದ್ರೌಪದಮ್ಮ ದೇವಸ್ಥಾನದ ಬಳಿ ಕಡಿದಾದ ರಸ್ತೆ ಉಬ್ಬಿಗೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ನೆಲಕ್ಕೆ ಬಿದ್ದಿದ್ದಾನೆ. ಸ್ವಲ್ಪ ಸಮಯದ ನಂತರ ಎದ್ದು ನೋಡುತ್ತಿದ್ದರೆ ಸ್ಕೂಟರ್ ಅಪಘಾತ ನಡೆದ ಸ್ಥಳದಿಂದ ಕಳವು ಮಾಡಲಾಗಿದೆಯಂತೆ. ಮಾರ್ಚ್ 3 ರಂದು ಕಲಾಸಿಪಾಳ್ಯ ಪೊಲೀಸರು ಸ್ಕೂಟರ್ ಕಳ್ಳತನಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದಾರೆ.
ಖರೀದಿಗಾಗಿ ಬಂದಿದ್ದ ಬೈಕ್ ಸವಾರ
ತರಕಾರಿ ಮಾರಾಟಗಾರರಾದ 25 ವರ್ಷ ವಯಸ್ಸಿನ ಅರುಣ್, ಜನವರಿ 30 ರಂದು ಮುಂಜಾನೆ 1.30 ರ ಸುಮಾರಿಗೆ ಲಾಲ್ಬಾಗ್ ಬಳಿಯ ಸಿದ್ದಾಪುರದಿಂದ ಕಲಾಸಿಪಾಳ್ಯಕ್ಕೆ ಭಜನೆ ಹಾಡಲು ಬಂದ ಜನರಿಗೆ ಆಹಾರವನ್ನು ಖರೀದಿಸಲು ತೆರಳುತ್ತಿದ್ದರು. ಇತ್ತೀಚೆಗೆ ಅಗಲಿದ ಅವರ ಚಿಕ್ಕಪ್ಪನಿಗೆ ಗೌರವ ಸಲ್ಲಿಸಲು ಈ ಭಜನೆಯನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ: Bengaluru: ಒಂದು ದಿನದ ಹಿಂದೆ ಕೈಹಿಡಿದ ಗಂಡ ಬೆಂಗಳೂರು ಟ್ರಾಫಿಕ್ನಲ್ಲಿ 'ಮಾಯ', ಹಿಡಿಯಲು ಹೋದ ಹೆಂಡತಿಗೆ 'ನಾಮ'!
ಹಂಪ್ನಿಂದಾಗಿ ಬೈಕ್ ಅಪಘಾತ
ದ್ರೌಪದಮ್ಮ ದೇವಾಲಯದ ಬಳಿಯ ಕಿರಿದಾದ ರಸ್ತೆಯಲ್ಲಿ, ಕತ್ತಲಾಗಿದ್ದರಿಂದ ಅರುಣ್ ಹಂಪ್ ಗೆ ಡಿಕ್ಕಿ ಹೊಡೆದಿದ್ದಾರೆ ಮತ್ತು ಆ ರಭಸಕ್ಕೆ ಅವರು ತಮ್ಮ ಸ್ಕೂಟರ್ ನೊಂದಿಗೆ ಕೆಲವು ಮೀಟರ್ ಗಳಷ್ಟು ದೂರ ಹೋಗಿ ಕೆಳಕ್ಕೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ತಮ್ಮ ಸಹೋದರ ಸ್ಥಳಕ್ಕೆ ಭೇಟಿ ನೀಡುವವರೆಗೂ ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ಹಾಗೆ ಮಲಗಿದ್ದಾಗಿ ಅರುಣ್ ಹೇಳಿದ್ದಾರೆ.
ಬೈಕ್ ಜೊತೆ ಬೆಲೆಬಾಳುವ ವಸ್ತುಗಳು ಕಳುವು
"ನಾನು ಮನೆಗೆ ಹಿಂತಿರುಗದ ಕಾರಣ ನನ್ನ ಸಹೋದರ ನನ್ನನ್ನು ಹುಡುಕುತ್ತಾ ಬಂದಿದ್ದಾರೆ. ಅವರು ಅದೇ ದಾರಿಯಲ್ಲಿ ಬಂದಾಗ ನಾನು ರಸ್ತೆಯ ಬದಿಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿರುವುದನ್ನು ನೋಡಿದರು" ಎಂದು ಅರುಣ್ ಹೇಳಿದರು. "ನಾನು ಎಚ್ಚರವಾದಾಗ, ನನ್ನ ಸ್ಕೂಟರ್ ಜೊತೆಗೆ ನನ್ನ ಮೊಬೈಲ್ ಫೋನ್, ಬೆಳ್ಳಿಯ ಸರ ಮತ್ತು 5,500 ರೂಪಾಯಿ ನಗದು ಹಣ ಕಳುವಾಗಿದ್ದವು" ಎಂದು ಅವರು ಹೇಳಿದ್ದಾರೆ.
ಬೈಕ್ ಕಾಣೆಯಾಗಿರೋ ಬಗ್ಗೆ ದೂರು
ಬಳಿಕ ಅರುಣ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, 10 ದಿನಗಳ ಕಾಲ ಚಿಕಿತ್ಸೆ ನೀಡಲಾಯ್ತು. ಹುಡುಕಲು ತುಂಬಾನೇ ಪ್ರಯತ್ನ ಪಟ್ಟಿದ್ದಾರೆ. “ಅಪಘಾತ ನಡೆದ ಆ ಸ್ಥಳವು ನಮಗೆ ಪರಿಚಿತವಾಗಿದೆ ಮತ್ತು ನಾವು ಎಲ್ಲರೊಂದಿಗೂ ವಿಚಾರಿಸಿದೆವು. ಆದರೆ ವಾಹನವನ್ನು ಯಾರು ತೆಗೆದುಕೊಂಡು ಹೋದರು ಎಂದು ಯಾರಿಗೂ ತಿಳಿದಿಲ್ಲ. ರಸ್ತೆ ಕಿರಿದಾಗಿದ್ದರಿಂದ, ಕಳ್ಳತನವನ್ನು ಯಾರೂ ಗಮನಿಸಿರಲಿಲ್ಲ. ನಾನು ಆಸ್ಪತ್ರೆಗೆ ದಾಖಲಾಗಿ 35,000 ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತು" ಎಂದು ಅರುಣ್ ಹೇಳಿದ್ದಾರೆ. ಒಂದು ತಿಂಗಳ ಹುಡುಕಾಟದ ನಂತರವೂ ವಾಹನ ಕಾಣೆಯಾಗಿದ್ದರಿಂದ ಅವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಲು ನಿರ್ಧರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ