ಬೆಂಗಳೂರು(ಡಿಸೆಂಬರ್. 05): ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳ ಇಂಟರ್ನ್ಶಿಪ್ ಅವಧಿ ಮತ್ತು ಅದರ ರೂಪುರೇಷೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಕಾರ್ಯಪಡೆಯ ಮೊದಲ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಂಜಿನಿಯರಿಂಗ್ ಇಂಟರ್ನ್ಶಿಪ್ ಅವಧಿ ಈಗ 4 ವಾರ ಇದೆ. ಅದು ತುಂಬಾ ಕಡಿಮೆ ಅವಧಿ. ಆ ಅವಧಿಯನ್ನು 3ರಿಂದ 6 ತಿಂಗಳಿಗೆ ವಿಸ್ತರಿಸುವ ಪ್ರಸ್ತಾವನೆ ಬಂದಿದೆ. ಆದರೆ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಹೆಚ್ಚೆಚ್ಚು ಆಗಬೇಕು ಎಂಬ ಕಾರಣಕ್ಕೆ ಇಂಟರ್ನ್ಶಿಪ್ ಅನ್ನೇ ಒಂದು ಸೆಮಿಸ್ಟರ್ ಮಾಡುವ ಯೋಚನೆಯೂ ನನ್ನಲ್ಲಿ ಬಂತು. ಆದಾಗ್ಯೂ ಈ ಬಗ್ಗೆ ತಜ್ಞರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಈ ಹಿನ್ನೆಲೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದರು.
ವ್ಯಾಸಂಗ ಮಾಡುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಬರಬೇಕು. ಆಗ ಮಾತ್ರ ಅವರ ಭವಿಷ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ನ್ಯಾಸ್ಕಾಂ ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಪ್ರತಿನಿಧಿಗಳು ಕೂಡ ಇದನ್ನೇ ಸಲಹೆ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಬಿಡಿಎ ಸಿಬ್ಬಂದಿಗಳಿಂದಲೇ ಅಕ್ರಮ; ಪೊಲೀಸರ ದಾಳಿ ವೇಳೆ ಅದೆಷ್ಟು ಕೋಟಿ ಆಸ್ತಿ ದಾಖಲೆ ಸಿಕ್ಕಿದೆ ಗೊತ್ತಾ?
ಪ್ರಸ್ತುತ, ಉದ್ಯೋಗ ಮಾರುಕಟ್ಟೆ ಬಹಳ ಸ್ಪರ್ಧಾತ್ಮಕವಾಗಿದೆ. ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕಾದರೆ, ಕಾಲೇಜುಗಳಿಂದ ಹೊರಬರುವಾಗಲೇ ವಿದ್ಯಾರ್ಥಿಗಳು ಸಂಪೂರ್ಣ ನೈಪುಣ್ಯತೆ ಸಾಧಿಸಿ ಬರಬೇಕು ಎಂದು ಉಪ ಮುಖ್ಯಮಂತ್ರಿ ಅಶ್ವತ್ಹನಾರಾಯಣ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ