ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ಚುನಾವಣೆ (Karnataka Election 2023) ಕಣ ರಂಗೇರಿದೆ. ಎಲ್ಲಾ ಸ್ಪರ್ಧಿಗಳು ವಿರೋಧ ಅಭ್ಯರ್ಥಿಗಳಿಗೆ (Election Candidates) ಸವಾಲ್ ಹಾಕಿ ತಮ್ಮ ತಮ್ಮ ಕ್ಷೇತ್ರದಲ್ಲಿ ಭರ್ಜರಿ ಮತಬೇಟೆಗೆ ಇಳಿದಿದ್ದಾರೆ. ಇತ್ತ ಬಳ್ಳಾರಿ (Bellary) ಜಿಲ್ಲೆಯ ಕಂಪ್ಲಿ ಕ್ಷೇತ್ರದಿಂದ (Kampli Constituency) ಪ್ರಥಮ ಬಾರಿಗೆ ತೃತೀಯಲಿಂಗಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಟಿ. ರಾಮಕ್ಕ (T Ramakka) ʻದೇಶ ಪ್ರೇಮ ಪಕ್ಷʼದ (Desha Prema Party) ಮೂಲಕ ಸ್ಪರ್ಧಿಸುತ್ತಿದ್ದಾರೆ. ನೂತನವಾಗಿ ಅಸ್ತಿತ್ವಕ್ಕೆ ಬಂದ ಪಕ್ಷದಲ್ಲಿ ಟಿಕೆಟ್ ಪಡೆದ ರಾಮಕ್ಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಸ್ಪರ್ಧಿಸಿದ್ದಾರೆ.
ಬಿರು ಬೇಸಿಗೆಯಲ್ಲೂ ಮತಬೇಟೆ
ಪ್ರಥಮ ಬಾರಿಗೆ ತೃತೀಯಲಿಂಗಿ ಅಭ್ಯರ್ಥಿಯಾಗಿ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮದ ಟಿ.ರಾಮಕ್ಕ ಪ್ರಸ್ತುತ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸ್ಪರ್ಧಿಗಳ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ.
ಟಿ.ರಾಮಕ್ಕ ರಾಜ್ಯದಲ್ಲಿ ಸ್ಪರ್ಧಿಸುತ್ತಿರುವ ಏಕೈಕ ತೃತೀಯಲಿಂಗಿ ಅಭ್ಯರ್ಥಿ ಎಂಬ ಹೆಗ್ಗಳಿಕೆ ಕೂಡ ಪಡೆದಿದ್ದಾರೆ.
ಸದ್ಯ ಚುನಾವಣಾ ಕಣದಲ್ಲಿ ಬಿರುಸಿನ ಪ್ರಚಾರದಲ್ಲಿ ನಿರತವಾಗಿರುವ ರಾಮಕ್ಕ, ಬಳ್ಳಾರಿ ಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಹಳ್ಳಿ ಹಳ್ಳಿಗೆ ತೆರಳಿ ಮತದಾರರ ಮನ ಓಲೈಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿರುವ ರಾಮಕ್ಕ ಗೆಲ್ಲುವ ನಿರೀಕ್ಷೆಯಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಟ್ರಾನ್ಸ್ಜೆಂಡರ್ ಸಮುದಾಯದ ಕಲ್ಯಾಣಕ್ಕೆ ಶ್ರಮ
"ಎಲ್ಲಾ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಆಯಾ ಜಾತಿ ಮತ್ತು ಧರ್ಮದ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಘೋಷಿಸುತ್ತಿವೆ. ಟ್ರಾನ್ಸ್ಜೆಂಡರ್ ಸಮುದಾಯದ ಕಲ್ಯಾಣಕ್ಕಾಗಿ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ, ನಾವು ದಮನಕ್ಕೊಳಗಾದ ಸಮುದಾಯವಾಗಿರುವುದರಿಂದ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.
ಹೆಚ್ಚಿನ ಟ್ರಾನ್ಸ್ಜೆಂಡರ್ಗಳು ತಮ್ಮ ಜೀವನೋಪಾಯಕ್ಕಾಗಿ ಭಿಕ್ಷೆಯನ್ನು ಆಶ್ರಯಿಸಬೇಕಾಗಿದೆ. ನಮ್ಮ ಸಮುದಾಯ ಅತ್ಯಂತ ದಯನೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರಿಗೆ ಅಧಿಕಾರ ನೀಡುವ ಮೂಲಕ ಮುಖ್ಯ ವಾಹಿನಿಗೆ ತರಬೇಕು.
ಗೆಲ್ಲುವ ಭರವಸೆಯಲ್ಲಿದ್ದಾರೆ ರಾಮಕ್ಕ
ನಾನು ಇಡೀ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಏಕೈಕ ಟ್ರಾನ್ಸ್ಜೆಂಡರ್ ವ್ಯಕ್ತಿ. ನನ್ನ ಸಮುದಾಯದಿಂದ ನನಗೆ ಬೆಂಬಲ ಸಿಗುತ್ತಿದೆ. ಗೆಲ್ಲುವ ಭರವಸೆಯಲ್ಲಿದ್ದೇನೆ" ಎಂದು ರಾಮಕ್ಕ ತಿಳಿಸಿದರು.
"ಟ್ರಾನ್ಸ್ಜೆಂಡರ್ಗಳ ಸಮುದಾಯಕ್ಕೆ ಹೋರಾಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ಕ್ಷೇತ್ರದ ಬಡವರು ಮತ್ತು ರೈತರ ಬದುಕನ್ನು ಉನ್ನತೀಕರಿಸಲು ನಾನು ನಿರ್ಧರಿಸಿದೆ, ಅದಕ್ಕಾಗಿಯೇ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಚುನಾವಣಾ ಆಯೋಗವು ನನ್ನ ಚುನಾವಣಾ ಆಯ್ಕೆಯ ಚಿಹ್ನೆಯಾಗಿ 'ಟ್ರಕ್' ಅನ್ನು ನಿಗದಿಪಡಿಸಿದೆ" ಎಂದು ರಾಮಕ್ಕ ವಿವರಿಸಿದರು.
"ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ನೃತ್ಯ ಮಾಡುತ್ತೇನೆ. ನಾನು ಕೂಡ ವಾರಕ್ಕೊಮ್ಮೆ ಭಿಕ್ಷೆ ಬೇಡುತ್ತೇನೆ. ಈಗ ನನ್ನ ಕ್ಷೇತ್ರದ ನಮ್ಮ ಸಮುದಾಯದ ಬಗ್ಗೆ ಕಾಳಜಿ ಇರುವ ಕೆಲವರು ನನ್ನ ಚುನಾವಣಾ ವೆಚ್ಚವನ್ನು ಭರಿಸುತ್ತಿದ್ದಾರೆ" ಎಂದು ರಾಮಕ್ಕ ಹೇಳಿದರು.
ಉತ್ತಮ ರಸ್ತೆ ಮತ್ತು ನೀರಿನ ಸಮಸ್ಯೆಗೆ ಹೋರಾಟ
"ಕ್ಷೇತ್ರದ ಮನೆಗಳಿಗೆ ಭೇಟಿ ನೀಡಿದಾಗ, ಜನರು ನನ್ನನ್ನು ಗೌರವದಿಂದ ಬರಮಾಡಿಕೊಳ್ಳುತ್ತಾರೆ. ನಾನು ಚುನಾವಣೆಗೆ ಸ್ಪರ್ಧಿಸುವ ಹಿಂದಿನ ಕಾರಣವನ್ನು ಅವರಿಗೆ ವಿವರಿಸುತ್ತೇನೆ. ಹೆಚ್ಚಿನವರು ನನ್ನ ನಿರ್ಧಾರವನ್ನು ಸ್ವಾಗತಿಸುತ್ತಾರೆ.
ಇದನ್ನೂ ಓದಿ: Karnataka Election: ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್
ಗೆಲ್ಲುವುದು ಅಷ್ಟು ಸುಲಭವಲ್ಲ ಅಂತಾ ನನಗೆ ಗೊತ್ತು, ಆದರೆ ನಾನು ನನ್ನ ಪ್ರಯತ್ನ ಬಿಡುವುದಿಲ್ಲ. ಚುನಾವಣೆಯಲ್ಲಿ ಉತ್ತಮ ಪೈಪೋಟಿ ನೀಡಲು ನನ್ನ ಕೈಲಾದಷ್ಟು ಹೋರಾಟ ಮಾಡುತ್ತೇನೆ" ಎಂದು ರಾಮಕ್ಕ ಹೇಳಿದರು.
“ನನ್ನ ಕ್ಷೇತ್ರದ ರೈತರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಉತ್ತಮ ರಸ್ತೆ ಮತ್ತು ನೀರಿನ ಸಮಸ್ಯೆ ಕೂಡ ಇಲ್ಲಿದೆ. ಜನರು ನನ್ನನ್ನು ಗೆಲ್ಲಿಸಿದರೆ ನನ್ನ ಸಮುದಾಯದ ಜನರು, ಬಡವರು ಮತ್ತು ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ