ಬೆಂಗಳೂರು(ನವೆಂಬರ್. 06): ಒಂದನೇ ತರಗತಿಯಿಂದಲ್ಲ, ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ವ್ಯವಸ್ಥಿತವಾದ ಶಿಕ್ಷಣ ನೀಡಬೇಕಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಇದೆಲ್ಲ ರಾಜ್ಯದಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಬೆಂಗಳೂರಿನ ಮಲ್ಲೇಶ್ವರದಲ್ಲಿ .ಸಿ.ಎನ್.ಅಶ್ವತ್ಥನಾರಾಯಣ ಪ್ರತಿಷ್ಠಾನ ಹಾಗೂ ಅಕಾಡೆಮಿ ಆಫ್ ಕ್ರಿಯೇಟಿವ್ ಲರ್ನಿಂಗ್ ವತಿಯಿಂದ ಅಂಗನವಾಡಿ ಶಿಕ್ಷಕಿಯರ ತರಬೇತಿಯ ಮುಕ್ತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಗನವಾಡಿ ಹಂತದಲ್ಲಿಯೇ ಮಕ್ಕಳಿಗೆ ಭಾಷೆ ಸೇರಿದಂತೆ ಬಹುವಿಷಯಗಳ ಕಲಿಕೆಯ ಶಕ್ತಿ ಹೆಚ್ಚಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ ನಾಲ್ಕರಿಂದ ಆರು ವರ್ಷದ ವಯಸ್ಸಿನ ಮಗುವಿಗೆ ಹದಿಮೂರು ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ಪುಟ್ಟ ಮಕ್ಕಳಿಗೆ ಬೋಧನೆ ಮಾಡಬೇಕಿದೆ ಎಂದರು.
ನಮ್ಮಲ್ಲಿ ಈಗ ಅಂಗನವಾಡಿಯಲ್ಲಿ ವ್ಯವಸ್ಥಿತ, ಅಂದರೆ ಔಪಚಾರಿಕವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಈವರೆಗೆ ಇರಲಿಲ್ಲ. ಇದು ಮುಂದೆ ಈ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಲಿದೆ. ಆರಂಭದ ಹಂತದಲ್ಲಿಯೇ ಮಕ್ಕಳಿಗೆ ಶೈಕ್ಷಣಿಕವಾಗಿ ಗಟ್ಟಿ ತಳಪಾಯ ಬೀಳುವ ಅಗತ್ಯವಿದೆ. ಈ ಬಗ್ಗೆ ಸರಕಾರವೂ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಅವರು ನುಡಿದರು.
ಇದನ್ನೂ ಓದಿ : ಹತಾಶರಾಗಿ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಅಕಾಡೆಮಿ ಆಪ್ ಕ್ರಿಯೇಟಿವ್ ಚೇರ್ಮನ್ ಡಾ. ಗುರುರಾಜ ಕರ್ಜಗಿ, ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಷ್ಠಾನ ಅಧ್ಯಕ್ಷ ಡಾ.ಜಯಪ್ರಕಾಶ್ ಶೆಟ್ಟಿ ಕೂಡ ಅಂಗನವಾಡಿ ಶಿಕ್ಷಕಿಯರನ್ನು ಉದ್ದೇಶಿಸಿ ಮಾತನಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ