ನವದೆಹಲಿ: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಜಾಮೀನು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸುತ್ತಿರುವ ನ್ಯಾ. ಉದಯ ಲಲಿತ್ ಪೀಠ ವಿಚಾರಣೆಯಲ್ಲಿ ಜುಲೈ 26ಕ್ಕೆ ಮುಂದೂಡಿದೆ. ಜುಲೈ 24ರೊಳಗೆ ಪ್ರತಿಕ್ರಿಯೆ ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ನೊಟೀಸ್ ನೀಡಿದೆ. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಕಳೆದ ವರ್ಷ ನವೆಂಬರ್ 5ರಿಂದ ಜೈಲಿನಲ್ಲಿದ್ದಾರೆ.
ಈ ವರ್ಷ ಫೆ.10ರಂದು ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಂಪ್ಲಿಮೆಂಟರಿ ಚಾರ್ಜಶೀಟ್ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ ನಡೆದ ಎಲ್ಲ ಮಾಹಿತಿಯನ್ನು ಕಲೆಹಾಕಿದ್ದಾರೆ. ಯೋಗೇಶಗೌಡ ಕೊಲೆಗೆ ಸಂಬಂಧಿಸಿದಂತೆ ಹಲವರನ್ನು ಕರೆಸಿ ತನಿಖೆ ಆರಂಭ ಮಾಡಿದ್ದರು. ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಸಂಪ್ಲಿಮೆಂಟರಿ ಚಾರ್ಜಶೀಟ್ ನಲ್ಲಿ ಕೊಲೆಗೆ ಸಂಬಂಧಿಸಿದಂತೆ ಇಂಚಿಂಚು ಮಾಹಿತಿ ಕಲೆ ಉಲ್ಲೇಖಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಓರ್ವನನ್ನು ಬಿಟ್ಟಿರುವುದು ಗಮನಕ್ಕೆ ಬಂದಿತ್ತು. ಸಿಬಿಐ ತನಿಖೆ ಆರಂಭದ ಬಳಿಕ ನಾವು ಮತ್ತಷ್ಟು ಜನರನ್ನು ಬಂದಿಸಿದ್ದೇವೆ. ವಿನಯ ಕುಲಕರ್ಣಿಯನ್ನು ನ. 5 ರ 2020 ರಂದು ಬಂಧಿಸಲಾಗಿದೆ. ವಿನಯ ಪ್ರಕರಣದ 15ನೇ ಆರೋಪಿಯಾಗಿದ್ದಾರೆ.
ಯೋಗೀಶಗೌಡ ಜೊತೆ ವಿನಯ್ ಅವರ ಸಂಬಂಧ ವೈಯಕ್ತಿಕ ದ್ವೇಷ, ರಾಜಕೀಯ ಪೈಪೋಟಿ ನಡೆದಿತ್ತು. ಯೋಗೀಶಗೌಡನನ್ನು ಜಿಪಂ ಚುನಾವಣೆಯಿಂದ ಹಿಂದೆ ಸರಿಯುವಂತೆ ವಿನಯ ಕುಲಕರ್ಣಿ ಯೋಗೀಶ ಸಹೋದರ ಗುರುನಾಥನಿಗೆ ಹೇಳಿದ್ದರು. ಆದರೂ ಚುನಾವಣೆಗೆ ಯೋಗೀಶಗೌಡ ನಿಂತಿದ್ದರು.
ಇದನ್ನೂ ಓದಿ: ದೇವೇಗೌಡರ ಕುಟುಂಬ ಒಡೆಯಲು ನನ್ನ ಮಗ ಪ್ರಜ್ವಲ್ನ ಎತ್ತಿಕಟ್ಟುತ್ತಿದ್ದಾರೆ : ಸುಮಲತಾ ವಿರುದ್ಧ ರೇವಣ್ಣ ಕಿಡಿ
ಚುನಾವಣೆ ವೇಳೆ ಚುನಾವಣೆಗೆ ಸ್ಪರ್ಧಿಸಿದ್ದ ಯೋಗೀಶಗೌಡನನ್ನು ವಿನಯ ಅರೆಸ್ಟ್ ಮಾಡಿಸಿದ್ದರು. ತದನಂತರ ನಡೆದ ಜಿಪಂ ಸಭೆಯಲ್ಲಿ ಇಬ್ಬರ ಮಧ್ಯೆ ಜಟಾಪಟಿ ನಡೆದಿತ್ತು. 23 ಎಪ್ರಿಲ್ 2016 ರಂದು ಸಭೆ ನಡೆದಿತ್ತು.. ತನ್ನ ಕ್ಷೇತ್ರದ ಪ್ರತಿನಿಧಿಯಾಗಿ ಯೋಗೀಶಗೌಡ ಸಭೆಗೆ ಭಾಗಿಯಾಗಿದ್ದರು ಸಭೆಯಲ್ಲಿ ಇಬ್ಬರ ವಾದ ವಿವಾದ ನಡೆದಿತ್ತು. ಇದೇ ದ್ವೇಷ ಇಟ್ಟುಕೊಂಡು ಮುಂದೆ ಸಾಗಿದ ವಿನಯ ಕುಲಕರ್ಣಿ ಯೋಗೀಶಗೌಡ ಕೊಲೆ ಮಾಡಿಸಲು ಬಸವರಾಜ ಮುತ್ತಗಿ ಮತ್ತು ವಿನಯ ಸೋದರ ಮಾವ ಚಂದ್ರಶೇಖರ ಇಂಡಿ ಸೇರಿ ವಿನಯಗೆ ಭರವಸೆ ಕೊಡುತ್ತಾರೆ.
ಮುತ್ತಗಿ, ಮೊದಲಿನಿಂದಲೂ ವಿನಯಗೆ ಆಪ್ತನಾಗಿದ್ದ ವ್ಯಕ್ತಿಯಾಗಿರುತ್ತಾರೆ. ಪೊಲೀಸರಿಂದ ಜಮೀನು ವಿವಾದದ ಕೊಲೆ ಎಂದು ತನಿಖೆ ವಿಚಾರ ಕೊಲೆಗೂ ಮುಂಚೆಯೇ ಜಮೀನು ವಿವಾದ ಹರಿದ ಬಗ್ಗೆ ಸಿಬಿಐ ನಮೂದು ಮಾಡಿದೆ. 2016ರ ಮೇ 24ರಂದೇ ಜಮೀನು ವಿವಾದ ಮುಗಿದು ಹೋಗಿತ್ತು. ಮುತ್ತಗಿ ಮತ್ತು ನಾಗೇಂದ್ರ ತೋಡಕರ ಎಂಬುವವರ ಮಧ್ಯದ ವಿವಾದ ಇತ್ತು. ಆದರೆ ಉದ್ದೇಶಪೂರಕವಾಗಿಯೇ ಕೊಲೆ ಕೇಸ್ನಲ್ಲಿ ಜಮೀನು ವಿವಾದ ಪ್ರಸ್ತಾಪ ಮಾಡಲಾಗಿದ್ದು, ಕೊಲೆ ಕೇಸ್ ದಿಕ್ಕು ಬದಲಿಸುವುದಕ್ಕೆ ಜಮೀನು ವಿವಾದ ಸೃಷ್ಟಿಸಲಾಗಿದೆ. ಈಗ ಜೈಲಿನಿಂದ ಹೊರ ಬರಲು ಜಾಮೀನಿಗಾಗಿ ವಿನಯ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ