ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ (MP Sumalatha Ambareesh) ರಾಜ್ಯ ರಾಜಕಾರಣಕ್ಕೆ (State Politics) ಬರುವ ಬಗ್ಗೆ ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಆದರೆ, ಕಾಂಗ್ರೆಸ್ (Congress), ಬಿಜೆಪಿ (BJP) ಹೆಸರು ಹೇಳುವ ಮೂಲಕ ಒತ್ತಡ ಏರುವ ತಂತ್ರ ಅನುಸರಿಸಿದ್ದಾರೆ. ಮಂಡ್ಯದಲ್ಲಿ (Mandya) ಮಾತಾಡಿದ ಅವರು, ಬೆಂಬಲಿಗರು ಸಭೆ ನಡೆಸಿದ್ದಾರೆ. ನಾನಿನ್ನು ತೀರ್ಮಾನ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದು ಕೊಳ್ಳುತ್ತೇನೆ. ಲೋಕಸಭೆ ಚುನಾವಣೆಯ (Lok Sabha Election) ವೇಳೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಪಕ್ಷಾತೀತವಾಗಿ ಬೆಂಬಲಿಸಿದ್ದರು. ಎರಡೂ ಪಕ್ಷಗಳ ಜತೆ ಉತ್ತಮವಾದ ಸಂಬಂಧವಿದೆ ಎಂದು ಹೇಳಿದ್ದಾರೆ.
ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದೀನಿ!
ಚುನಾವಣೆಗೆ ಎರಡು ತಿಂಗಳು ಇದೆ, ಒಂದು ತಿಂಗಳು ಇದೆ ಅಂತ ತರಾತುರಿಯಲ್ಲಿ ನಿರ್ಧಾರ ಮಾಡಲು ಆಗೋದಿಲ್ಲ. ನಮ್ಮ ಬೆಂಬಲಿಗರಲ್ಲಿ ಈ ಬಗ್ಗೆ ಮೆಜಾರಿಟಿ ವಾಯ್ಸ್ ಬರಬೇಕು. ನನಗೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ಆಗುವ ಸಂದರ್ಭ ಮುಖ್ಯ. ಪ್ರತಿ ಚುನಾವಣೆಯಲ್ಲಿ ನಾನು ನಿಂತುಕೊಳ್ಳಬೇಕು ಅಥವಾ ಅಧಿಕಾರದಲ್ಲಿ ಇರ್ಬೇಕು ಅಂತ ನನಗೆ ಇಲ್ಲ. ಆಕಸ್ಮಿಕವಾಗಿ ನಾನು ಈ ಸ್ಥಾನಕ್ಕೆ ಬಂದಿದ್ದೀನಿ ಎಂದರು.
ಇದನ್ನೂ ಓದಿ: Govt Employees Strike: ಮುಷ್ಕರ ಹಿಂಪಡೆದ ಸರ್ಕಾರಿ ನೌಕರರು; ಸಂಬಳ ಹೆಚ್ಚಾಗಿದೆಷ್ಟು ? ಇಲ್ಲಿದೆ ಮಾಹಿತಿ
ನನಗೆ ಯಾರ ಮೇಲೆ ದ್ವೇಷ ಇಲ್ಲ. ನನಗೆ ಯಾವುದೇ ಒತ್ತಡ ಕೂಡ ಇಲ್ಲ. ಪ್ರಮಾಣಿಕವಾಗಿ ಇಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂಬುವುದು ನನ್ನ ನಂಬಿಕೆ. ನಾಲ್ಕು ಜನರಿಗೆ ಒಳ್ಳೆದಾಗುತ್ತೆ ಅನ್ನೋ ನಂಬಿಕೆ ಬಂದಾಗ ಹೆಜ್ಜೆ ಹಾಕುತ್ತೇನೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಶಾಸಕನಿಗೆ ಮಾತಿನಲ್ಲೇ ತಿವಿದ ಸುಮಲತಾ!
ಇದೇ ವೇಳೆ ಮತ್ತೆ ದಳಪತಿಗಳ ವಿರುದ್ದ ಗುಡುಗಿದ ಸುಮಲತಾ ಅವರು ರವೀಂದ್ರ ಶ್ರೀಕಂಠಯ್ಯ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ತಮ್ಮ ಬೆಂಬಲಿಗ ಇಂಡವಾಳು ಸಚ್ಚಿದಾನಂದ ಕುರಿತು ಉಡಾಫೆ ಉತ್ತರ ಕೊಟ್ಟಿದ್ದ ಶ್ರೀಕಂಠಯ್ಯ ಅವರು ರಸ್ತೆ ಗುದ್ದಲಿ ಪೂಜೆಗೆ ಹೋಗಿದ್ದ ಅವರನ್ನು ಗ್ರಾಮಸ್ಥರು ವಾಪಸ್ ಕಳುಹಿಸಿದ್ದ ವಿಚಾರ ಪ್ರಸ್ತಾಪಿಸಿ ಜೆಡಿಎಸ್ ಶಾಸಕನಿಗೆ ಮಾತಿನಲ್ಲೇ ತಿವಿದಿದ್ದಾರೆ.
ಅವರ ಬೆಂಬಲಿಗರೇ ಅವರನ್ನು ವಾಪಸ್ ಕಳುಹಿಸುವ ವಿಡಿಯೋ ಮೊನ್ನೆ ನೋಡಿದ್ದೀನಿ. ನಾನು ಯಾವುದೇ ಪಕ್ಷ ಕಟ್ಟಿ, ಅವರೊಂದಿಗೆ ಚುನಾವಣೆ ಮಾಡಿ ನಾನು ಬಂದಿಲ್ಲ. ಮೈಯಲ್ಲಿ ದುರಂಕಾರ ತುಂಬಿರುವಾಗ ಯೋಚನೆ ಮಾಡಲು ಆಗೋದಿಲ್ಲ. ಆದ್ದರಿಂದ ಅವರ ಹೇಳಿಕೆಗೆ ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ಸುಮಲತಾ ಹೇಳಿದ್ದಾರೆ.
ಕೆಲವೊಂದು ಜೆಡಿಎಸ್ ನಾಯಕರು ಅವರ ಕೆಲಸವನ್ನು ಬಿಟ್ಟು, ಯಾರು ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ? ಯಾರೊಂದಿಗೆ ಮಾತನಾಡುತ್ತಿದ್ದಾರೆ ಅಂತ ಸ್ಪೈ ಮಾಡುವುದೇ ಕೆಲಸ ಆಗಿದೆ. ಚಲುವರಾಯ ಸ್ವಾಮಿ ಅವರು ನನ್ನನ್ನು ಭೇಟಿ ಮಾಡಲು ಅನುಮತಿ ಪಡೆದುಕೊಂಡು ಬರುವ ಸ್ಥಿತಿ ಇಲ್ಲ. ನಮ್ಮ ನಡುವೆ ಉತ್ತಮ ಮಾತುಕತೆ ಇದೆ. ಆದ್ದರಿಂದ ಜೆಡಿಎಸ್ ಶಾಸಕರು ಅವರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಮನಹರಿಸಿದರೆ ಉತ್ತಮ ಎಂದು ಹೇಳಿದರು.
ಇದನ್ನೂ ಓದಿ: Bhaskar Rao: ಪೊರಕೆ ಬಿಟ್ಟು, ಕಮಲ ಹಿಡಿದ ನಿವೃತ್ತ IPS ಅಧಿಕಾರಿ; ಆಪ್ ತೊರೆದಿದ್ಯಾಕೆ ಪ್ರಶ್ನೆಗೆ ನೀಡಿದ ಉತ್ತರ ಹೀಗಿತ್ತು
ನಾನು ಯಾರ ವಿರೋಧವಾಗಿಯೂ ಮಾತನಾಡಿಲ್ಲ. ಯಾರನ್ನು ನಾನು ಬಲವಂತ ಮಾಡಲು ಆಗೋದಿಲ್ಲ ಅಲ್ವಾ. ನಾನು ಯಾರನ್ನು ಪಕ್ಷಕ್ಕೆ ಸೇರಿ ಅಂತ ಹೇಳಲು ಆಗೋದಿಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದೀರಾ ಎಂಬ ಪ್ರಶ್ನೆಗೆ ಇಲ್ಲ ಅಂತ ಉತ್ತರಿಸಿದರು. ಅಲ್ಲದೆ, ರಾಜ್ಯ ರಾಜಕಾರಣಕ್ಕೆ ಬರಬೇಕು ಅಂತ ಬೆಂಬಲಿಗರು ಆಸೆ ಮಾಡುತ್ತಿದ್ದಾರೆ ಅದು ನಿಜ. ಆದರೆ ಅದು ಅಷ್ಟು ಸುಲಭ ಅಲ್ಲ. ಈ ಬಗ್ಗೆ ಚರ್ಚೆ ಮಾಡಿಯೇ ತೀರ್ಮಾನ ಮಾಡ್ತೀನಿ. ಎಲ್ಲ ಬೆಂಬಲಿಗರನ್ನು ಕೇಳಿಯೇ ತೀರ್ಮಾನ ಮಾಡ್ತೀನಿ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ