ಪುತ್ತೂರು (ಡಿ. 25): ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅಭ್ಯರ್ಥಿಗಳು ಸಾಕಷ್ಟು ಹಣ ಖರ್ಚು ಮಾಡಬೇಕಾಗುವುದು ಅನಿವಾರ್ಯ ಎಂಬ ಮನಸ್ಥಿತಿ ಮೂಡಿದೆ. ಅದು ಲೋಕಸಭಾ ಚುನಾವಣೆ ಇರಲಿ, ಗ್ರಾಮಪಂಚಾಯತ್ ಚುನಾವಣೆಯೇ ಇರಲಿ ದುಡ್ಡು ಖರ್ಚು ಮಾಡಿದರೆ ಮಾತ್ರ ಅಭ್ಯರ್ಥಿ ಕಣದಲ್ಲಿ ಕಾಣಲು ಸಾಧ್ಯ. ಹಣದ ಮುಂದೆ ಅರ್ಹತೆ, ವಿದ್ಯಾರ್ಹತೆ ಎಲ್ಲವೂ ನಗಣ್ಯ ಎಂಬ ಮಾತು ಕೂಡ ಹಲವು ಬಾರಿ ನಿಜವಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಐವರು ಅಭ್ಯರ್ಥಿಗಳ ಇದಕ್ಕೆ ತದ್ವಿರೂಪವಾಗಿದ್ದಾರೆ. ಕಾರಣ ಇವರ ಚುನಾವಣೆಯ ಎಲ್ಲಾ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತಿರುವುದು ತಮ್ಮನ್ನು ಆಯ್ಕೆಮಾಡುವ ವಾರ್ಡ್ನ ಜನರು. ಈ ಎಲ್ಲಾ ಐವರೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳದೆ, ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಐವರು ಸ್ಪರ್ಧಿಗಳ ಸಾಕ್ಷರತಾ ಕಾರ್ಯವನ್ನು ನೋಡಿದ ಜನರು ಈ ತೀರ್ಮಾನ ನಡೆಸಿದ್ದಾರೆ.
ಅಭ್ಯರ್ಥಿಯಲ್ಲಿ ಒಬ್ಬರು 'ಹಂಗರ್ ಪ್ರಾಜೆಕ್ಟ್ ಸುಗ್ರಾಮ ಅಭಿಯಾನ'ದಲ್ಲಿ ತೊಡಗಿಸಿಕೊಂಡವರು. ಹಾಗಾಗಿ ಸಾಕ್ಷರತೆಯಿಂದ ಸ್ವರಾಜ್ಯ ಕಲ್ಪನೆಯ ಮಾದರಿಯಲ್ಲಿ ಪಂಚತಂತ್ರ ಚುನಾವಣಾ ಕಾರ್ಯತಂತ್ರವನ್ನು ಅನುಸರಿಸದ್ದಾರೆ.ಇದರಲ್ಲಿ ಬೂತ್, ವಾರ್ಡ್, ಪಂಚಾಯ್ತಿ ಮಟ್ಟದಲ್ಲಿ ತಲಾ ಐದು ಮಂದಿ ಕಾರ್ಯಕರ್ತರಿರುತ್ತಾರೆ. ಪಂಚಾಯ್ತಿ ಮಟ್ಟದಲ್ಲಿ ಇರುವವರು ಮಾರ್ಗದರ್ಶಕರು. ನಾಲ್ಕನೇ ತಂತ್ರ ಅಭ್ಯರ್ಥಿಗಳ ಖರ್ಚು-ವೆಚ್ಚವನ್ನು ಜನರೇ ಭರಿಸುವುದು. ಐದನೇಯದು ಬ್ಯಾನರ್, ಬಂಟಿಂಗ್ಸ್ ಇಲ್ಲ, ಮನೆ ಮನೆ ಪ್ರಚಾರ ಮಾತ್ರ. ಈ ಕಾರ್ಯತಂತ್ರದಡಿ ಮೊದಲ ಮೂರು ತಂತ್ರಗಳು ಬದಲಾಗುವುದಿಲ್ಲ. ಈ ಅಭ್ಯರ್ಥಿಗಳು ಗೆದ್ದರೂ, ಸೋತರೂ ಗ್ರಾಮಾಭಿವೃದ್ಧಿಗೆ ಇವರು ನಿರಂತರವಾಗಿ ನೆರವಾಗಲಿದ್ದಾರೆ. ಇವರ ಪ್ರಣಾಳಿಕೆಯಲ್ಲಿ ವಾರ್ಡ್ನ ಮೂಲಸೌಕರ್ಯಕ್ಕೆ ಒತ್ತು ನೀಡುವ ವಾಗ್ದಾನ ಇದೆ, ಮುಖ್ಯವಾಗಿ ಪಂಜಕ್ಕೆ ಅಂಚೆ ಕಚೇರಿ, ಪ್ರತಿ ಮನೆಗೆ ಪೌಷ್ಟಿಕ ತೋಟ, ಬಾವಿ, ಶೌಚಾಲಯ ಹೀಗೆ ಭರವಸೆ ಮುಂದುವರಿಯುತ್ತದೆ.
ಇದನ್ನು ಓದಿ: ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಸಗಣಿ ಬಾಚಿ, ಗೋ ಸೇವೆ ಮಾಡಿದ ಸಂಸದ ಪ್ರತಾಪ್ ಸಿಂಹ
ಸುಳ್ಯ ತಾಲೂಕಿನ ಪಂಜ ಗ್ರಾಮಪಂಚಾಯತ್ ಗೆ ಸ್ಪರ್ಧಿಸಿರುವ ಈ ಐದು ಮಂದಿ ಕೂಡ ಯಾವುದೇ ರಾಜಕೀಯ ಪಕ್ಷಗಳಿಗಾಗಿ ಕೆಲಸ ಮಾಡಿದವರೂ ಅಲ್ಲ. ಇವರಲ್ಲಿ ಜಿನ್ನಪ್ಪ ಗೌಡ ಐವತ್ತೊಕ್ಕಿನ ಒಂದನೇ ವಾರ್ಡ್, ಲಕ್ಷ್ಮಣ ಗೌಡ ಮೂರನೇ ವಾರ್ಡ್, ವೇಣುಗೋಪಾಲ ಮೂರನೇ ವಾರ್ಡ್, ವಿನೋದ್ ಪಲ್ಲೋಡಿ ಮೂರನೇ ವಾರ್ಡ್ ಮತ್ತು ಅಪ್ಪಿ ಆದಿವಾಸಿ ಕೂತ್ಕುಂಜ ಮೂರನೇ ವಾರ್ಡ್ ನಿಂದ ವಿವಿಧ ಮೀಸಲಾತಿಯಡಿಯಲ್ಲಿ ಸ್ಪರ್ಧೆಗಿಳಿದಿದ್ದಾರೆ.
ಸಾಕ್ಷರತರು ಒಟ್ಟು ಎಂಟು ಮಂದಿ ಈ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಇಬ್ಬರು ನಾಮ ಪತ್ರ ಹಿಂಪಡೆದಿದ್ದಾರೆ. ಇನ್ನೊಬ್ಬರು ಕುಟುಂಬದ ಸದಸ್ಯರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಸ್ಪರ್ಧಿಸಿರುವ ಐವರೂ ಸ್ಥಿತಿವಂತರಲ್ಲದ ಕಾರಣ ಹಾಗೂ ಚುನಾವಣೆಗೆ ಹಣವನ್ನು ಮತದಾರನಿಂದಲೇ ಭರಿಸುವ ನಿರ್ಧಾರವನ್ನು ಮಾಡಿದ್ದಾರೆ. ಇವರ ಚಿಂತನೆಗೆ ಸ್ಪರ್ಧೆಗಿಳಿದ ಆಯಾಯ ವಾರ್ಡ್ ನ ಮತದಾರರೂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಚುನಾವಣೆಯಲ್ಲಿ ಸೋತರೂ, ಗೆದ್ದರೂ ನಿರಂತರವಾಗಿ ಗ್ರಾಮದ ಏಳಿಗೆಗಾಗಿ ಸೇವೆ ಮಾಡುವ ಪಣವನ್ನೂ ಈ ಅಭ್ಯರ್ಥಿಗಳು ತೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ