ಚಾಮರಾಜನಗರ (ಅ. 9): ಸುಳ್ವಾಡಿಯ ಕಿಚ್ ಗುತ್ ಮಾರಮ್ಮ ದೇವಾಲಯದಲ್ಲಿ ವಿಷಪ್ರಸಾದ ದುರಂತ ನಡೆದು ಎರಡು ವರ್ಷ ಆಗುತ್ತಾ ಬಂದಿದ್ದರೂ ಸರ್ಕಾರ ಸಂತ್ರಸ್ಥರಿಗೆ ನೀಡಿದ್ದ ಪ್ರಮುಖ ಭರವಸೆಗಳು ಇನ್ನೂ ಈಡೇರಿಲ್ಲ.
ಮೃತಪಟ್ಟವರ ಕುಟುಂಬಗಳಿಗೆ ತಲಾ ಎರಡು ಎಕರೆ ಜಮೀನು ಹಾಗೂ ಉದ್ಯೋಗ ನೀಡುವುದಾಗಿ ನೀಡಿದ್ದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಅಸ್ವಸ್ಥರಾದವರಿಗೆ ನಿವೇಶನ ನೀಡುವುದಾಗಿ ಸರ್ಕಾರ ನೀಡಿದ್ದ ಭರವಸೆ ಈಡೇರಿದೆಯಾದರೂ ನಿವೇಶನ ನೀಡಿರುವ ಜಾಗ ವಿವಾದದಲ್ಲಿದ್ದು, ಸಂತ್ರಸ್ಥರು ಭ್ರಮನಿರಸನಗೊಂಡಿದ್ದಾರೆ.
ಅಸ್ವಸ್ಥರಾದವರಿಗೆ ನೀಡಿರುವ ಹೆಲ್ತ್ ಕಾರ್ಡ್ನಿಂದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಂತ್ರಸ್ಥರು ಆರೋಪಿಸಿದ್ದಾರೆ. ಎಸ್.ಸಿ.ಎಸ್.ಟಿ. ದೌರ್ಜನ್ಯ ಕಾಯ್ದೆಯಡಿ ಸಂಬಂಧಿಸಿದವರಿಗೆ ಪರಿಹಾರ ಬಂದಿದೆ. ಇತರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ನೀಡಿವೆ. ಆದರೆ ಪರಿಹಾರದ ಹಣ ಬಹುತೇಕ ಚಿಕಿತ್ಸೆಗಾಗಿಯೇ ಖರ್ಚಾಗಿದೆ ಎನ್ನುತ್ತಾರೆ ವಿಷಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದ ಬಿದರಹಳ್ಳಿಯ ನರಸಿಂಹ. ವಿಷದ ದುಷ್ಪರಿಣಾಮ ತಮ್ಮನ್ನು ಇನ್ನೂ ಬಾಧಿಸುತ್ತಿದ್ದು ದುಡಿಯುವ ಚೈತನ್ಯ ಕಳೆದುಕೊಂಡಿದ್ದೇವೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವಿಷಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದವರು ಕಣ್ಣು ಮಂಜಾಗುವುದು, ಸುಸ್ತು ಸಂಕಟ, ಅಂಗಾಂಗಗಳ ವೈಫಲ್ಯ ಹೀಗೆ ಹತ್ತಾರು ರೀತಿಯ ತೊಂದರೆ ಅನುಭವಿಸುತ್ತಿದ್ದು, ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇವರಿಗೆ ನಿಗಮ ಮಂಡಳಿಗಳಿಂದ ಇತರರಿಗೆ ನೀಡುವ ಸೌಲಭ್ಯಗಳಂತೆ ಇವರಿಗೂ ಕೆಲವು ಸೌಲಭ್ಯಗಳನ್ನು ನೀಡಿದೆ. ಆದರೆ, ವಿಶೇಷ ಪ್ಯಾಕೇಜ್ ನೀಡಿ ಇವರ ಬದುಕು ಸುಧಾರಿಸುವ ಕೆಲಸ ಮಾಡಲಿಲ್ಲ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಪೆದ್ದನಪಾಳ್ಯ ಮಣಿ.
ಇದನ್ನೂ ಓದಿ: Mysuru Dasara 2020: ಮೈಸೂರು ದಸರಾಗೆ ಸಿದ್ಧತೆ; ಮರಳಿನ ಮೂಟೆ ಹೊರುವ ತಾಲೀಮು ನಡೆಸಿದ ಗಜಪಡೆ
ಇದೇ ವೇಳೆ ಎರಡು ವರ್ಷಗಳಿಂದ ಮುಚ್ಚಿದ್ದ ಕಿಚ್ ಗುತ್ ಮಾರಮ್ಮ ದೇವಾಲಯವನ್ನು ಅಕ್ಟೋಬರ್ 20ರಿಂದ ತೆರೆಯಲು ಭರದ ಸಿದ್ದತೆಗಳು ನಡೆಯುತ್ತಿವೆ. ಸಣ್ಣಪುಟ್ಟ ರಿಪೇರಿ ಕಾಮಗಾರಿ ಮಾಡಿ ಸುಣ್ಣಬಣ್ಣ ಹೊಡೆಯಲಾಗುತ್ತಿದೆ. 2018ರ ಡಿಸೆಂಬರ್ 14ರಂದು ವಿಷಪ್ರಸಾದ ಸೇವಿಸಿ 17 ಜನ ಮೃತಪಟ್ಟು, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಅಂದಿನಿಂದ ದೇವಾಲಯವನ್ನು ಮುಚ್ಚಿ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲಾಗಿತ್ತು. ಟ್ರಸ್ಟ್ವೊಂದರ ವಶದಲ್ಲಿದ್ದ ಈ ದೇವಾಲಯದ ಆಡಳಿತದ ಚುಕ್ಕಾಣಿ ಹಿಡಿಯಲು ಹುನ್ನಾರ ನಡೆಸಿ ಪ್ರಸಾದಕ್ಕೆ ವಿಷ ಬೆರೆಸಿದ ಆರೋಪದ ಮೇರೆಗೆ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಸೇರಿದಂತೆ ನಾಲ್ವರು ಈಗಾಗಲೇ ಜೈಲಿನಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ